ಮುದ್ದೇಬಿಹಾಳ: ಮೊನ್ನೆ ನನ್ನ ಮಂತ್ರಿ ಮಾಡಲಿಲ್ಲ. ನಾನು ಮಂತ್ರಿ ಕೇಳೋಕೂ ಹೋಗಿಲ್ಲ. ಮಂತ್ರಿ ಮಾಡ್ರಿ ಅಂತ ನಾ ಯಾರ ಮನಿಗೂ ಹೋಗಿಲ್ಲ. ಮಂತ್ರಿ, ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆನೂ ನನಗಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಪುನರುಚ್ಛರಿಸಿದರು.
ಪಟ್ಟಣದ ಮಾರುತಿ ನಗರದಲ್ಲಿ ನಡೆದ ಮೌನೇಶ್ವರ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.
ಮಂತ್ರಿ ಮಾಡಿ ಅಂತ ಯಾರ ಮನೆಗೂ ಹೋಗಿಲ್ಲ - ಶಾಸಕ ಯತ್ನಾಳ ಪುನರುಚ್ಛಾರ 'ಮಂತ್ರಿ ಸ್ಥಾನ ಬರಬೇಕಾದರೆ ಬಂದೇ ಬರುತ್ತೆ. ಅದು ಯಾರು ಬೇಕಾದರೂ, ಏನು ಬೇಕಾದರೂ ಹೇಳಿಕೆ ಕೊಡಲಿ. ಯತ್ನಾಳದು ಆಗುದಿಲ್ಲ, ನಂದ ಆಗ್ತದ ಅಂತ ಎಷ್ಟು ಮಂದಿ ಗಾಡಿ ತಗೊಂಡು ಹೋಗಿ ಮನವಿ ಕೊಡ್ತಾರಾ ಕೊಡ್ಲಿ. ಜನರ ಪ್ರೀತಿಯೊಂದೇ ಸಾಕು. ಆ ಜಾಗದಲ್ಲಿ ಕರೆದೊಯ್ದು ಕೂಡಿಸುತ್ತದೆ.ಯಾರೂ ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ. ಉಪದ್ವಾಪಿಗಳು ಏನು ಹಾರಾಡಿದರೂ ನಡೆಯುವುದಿಲ್ಲ. ಯತ್ನಾಳದು ಮುಗೀತು ಎಂದು ಹೇಳುವವರು ಅದನ್ನು ತಲಿಯೊಳಗಿಂದ ತೆಗದು ಹಾಕ್ರಿ' ಎಂದು ಹೇಳಿದರು.
'ಗಣೇಶೋತ್ಸವಕ್ಕೆ ಅವಕಾಶ ಕೇಳಿದ್ದೇವೆ'
ಗೌರವಯುತವಾಗಿ ಗಣಪತಿ ಕೂರಿಸಲು ಅವಕಾಶ ಕೇಳಿದ್ದೆವು. ಗೃಹಮಂತ್ರಿಗಳ ಜೊತೆಗೆ ಮಾತನಾಡಿದ್ದು, ಗಣಪತಿ ಕೂರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ. ಗಣೇಶ ಚೌತಿ ಹಿಂದೂಸ್ತಾನದಲ್ಲಿ ಮಾಡದೇ ಪಾಕಿಸ್ತಾನದಲ್ಲಿ ಮಾಡುವುದಿದೆಯೇ? ಮುಂದೊಂದು ದಿನ ಅದೂ ಬರುತ್ತದೆ. ಪಾಕಿಸ್ತಾನದಲ್ಲೂ ಗಣೇಶ ಚೌತಿ ಆಚರಿಸುವ ಸಂದರ್ಭ ಬರುತ್ತದೆ. ನಾವು ಒಗ್ಗೂಡದಿದ್ದರೆ ಉಳಿಗಾಲವಿಲ್ಲ. ನಮ್ಮ ಧರ್ಮ ಸಂಸ್ಕೃತಿ ವಿಷಯ ಬಂದಾಗ ನಾವು ಮಾತನಾಡಲೇಬೇಕು ಎಂದು ಶಾಸಕ ಯತ್ನಾಳ ಗುಡುಗಿದರು.
ಇದನ್ನೂ ಓದಿ: ಬುದ್ಧಿ ಜೀವಿಗಳು ಲದ್ದಿ ತಿಂದಿದ್ದಾರಾ? : ಅಪ್ಘಾನಿಸ್ತಾನ ವಿಚಾರದಲ್ಲಿ ಮೌನ ವಹಿಸಿದವರ ವಿರುದ್ಧ ಶಾಸಕ ಯತ್ನಾಳ್ ಕಿಡಿ