ಕರ್ನಾಟಕ

karnataka

By

Published : Oct 18, 2022, 7:49 AM IST

Updated : Oct 18, 2022, 11:21 AM IST

ETV Bharat / state

ಬಿಜೆಪಿಯಲ್ಲಿ ಹೆಚ್ಚಿದ ಬಂಡಾಯ, ಕಮಲ ಬಿಟ್ಟು ತೆನೆ ಹೊತ್ತ ಮಾಜಿ ಮೇಯರ್

ಬಿಜೆಪಿಯಿಂದ ಆಯ್ಕೆಯಾಗಿ ಮೇಯರ್ ಪಟ್ಟ ಅಲಂಕರಿಸಿದ್ದ ಸಂಗೀತಾ ಪೋಳ ಅವರಿಗೆ ಪಕ್ಷದಿಂದ ಟಿಕೆಟ್ ಕೈತಪ್ಪಿದ್ದರಿಂದ ಜೆಡಿಎಸ್ ಪಕ್ಷ ಸೇರ್ಪಡೆಗೊಂಡು ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ.‌

Kn_vjp_06_,palike
ರವಿಕಾಂತ ಬಗಲಿ

ವಿಜಯಪುರ: ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿ‌ ಮತ್ತೊಮ್ಮೆ ಭಿನ್ನಮತ ಭುಗಿಲೆದ್ದಿದ್ದು, ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಬಂಡಾಯದ ಬಾವುಟ ಬೀಸಿದ್ದಾರೆ.

ತೆನೆ ಹೊತ್ತ ಮೇಯರ್: ಕಳೆದ ಬಾರಿ ಬಿಜೆಪಿಯಿಂದ ಆಯ್ಕೆಯಾಗಿ ಮೇಯರ್ ಪಟ್ಟ ಅಲಂಕರಿಸಿದ್ದ ಸಂಗೀತಾ ಪೋಳ ಹಾಗೂ ಉಪಮೇಯರ್ ಆಗಿದ್ದ ಆನಂದ ಧುಮಾಳೆಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಜೆಡಿಎಸ್ ಪಕ್ಷ ಸೇರ್ಪಡೆಗೊಂಡು ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ.‌ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರುವ ವಾರ್ಡ್ ನಂ.33ಗೆ ಸಂಗೀತಾ ಪೋಳ ಹಾಗೂ ಹಿಂದುಳಿದ ವರ್ಗ ಕ್ಕೆ ಮೀಸಲಾಗಿರುವ ವಾರ್ಡ್ ನಂ 30ಕ್ಕೆ ಆನಂದ ಧುಮಾಳೆ ಜೆಡಿಎಸ್ ಪರ ನಾಮಪತ್ರ ಸಲ್ಲಿಸಿದ್ದಾರೆ.

ರವಿಕಾಂತ ಬಗಲಿ ಪ್ರತಿಕ್ರಿಯೆ

ವಾರ್ಡ್ 22ರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರವಿಕಾಂತ ಬಗಲಿ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ತನ್ನ ಬೆಂಬಲಿಗರೊಂದಿಗೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಈಗ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿರುವ ಪ್ರೇಮಾನಂದ ಬಿರಾದಾರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಪಕ್ಷದ ಹಿರಿಯ ಮುಖಂಡರನ್ನು‌ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ನನಗೆ ಟಿಕೆಟ್‌ ತಪ್ಪಿಸಿದ ಮುಖಂಡರ ಹೆಸರನ್ನು ಸದ್ಯದಲ್ಲಿ ಬಹಿರಂಗ ಪಡಿಸುವೆ. ಜೆಡಿಎಸ್​ನಿಂದ ಬಂದಿರುವ ಬಿಜೆಪಿ ಅಭ್ಯರ್ಥಿ ಪ್ರೇಮಾನಂದ ಬಿರಾದಾರ ಅದೇ‌ ನಾಯಕನ ಕೃಪಾ ಕಟಾಕ್ಷದಿಂದ ಟಿಕೆಟ್ ಪಡೆದುಕೊಂಡಿದ್ದಾರೆ.

ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದಿದ್ದಾರೆ ಅಥವಾ ಇಲ್ಲವೋ ಎನ್ನುವದೇ ಯಾರಿಗೂ ಗೊತ್ತಿಲ್ಲ, ಅಂಥವರಿಗೆ ಮಣೆ ಹಾಕಿ, ನಿಷ್ಟಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ದಾರೆ ಎಂದು ರವಿಕಾಂತ ಬಗಲಿ ಆರೋಪಿಸಿದ್ದಾರೆ. ಕೆಲ ಅತೃಪ್ತ ಟಿಕೆಟ್ ಆಕಾಂಕ್ಷಿಗಳು ಸದ್ಯ ತಮ್ಮ ಮುಖಂಡರ ಮಾತಿಗೆ ಬೆಲೆ ಕೊಟ್ಟು ಸುಮ್ಮನಾಗಿದ್ದರೂ ಸಹ ತೆರೆಮರೆಯಲ್ಲಿ ಅಧಿಕೃತ ಅಭ್ಯರ್ಥಿ ವಿರುದ್ಧ ಕತ್ತಿ ಮಸಿಯುತ್ತಿದ್ದಾರೆ. ಬಿಜೆಪಿಯ ಹಿರಿಯ ಮುಖಂಡರಾದ ನಗರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​, ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ, ಸಂಸದ ರಮೇಶ ಜಿಗಜಿಣಗಿ ಹಾಗೂ ಪಕ್ಕದ ಜಿಲ್ಲೆಯ ಮುಖಂಡ ಹಾಗೂ ಸಚಿವ ಗೋವಿಂದ ಕಾರಜೋಳ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಸರ್ವ ಪ್ರಯತ್ನ ನಡೆಸಿದ್ದಾರೆ. ಆದರೆ ಮೇಲ್ನೋಟಕ್ಕೆ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಟಿಕೆಟ್ ‌ಕೊಡಿಸಲು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಪ್ರತಿ ಒಬ್ಬ ಹಿರಿಯ ಮುಖಂಡರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ರಾಜ್ಯಮಟ್ಟದಲ್ಲಿಯೂ ಲಾಭಿ ನಡೆಸಿದ್ದಾರೆ. ಆದರೆ, ಶಾಸಕರ ಬಿಗಿ ಹಿಡಿತ ಹಲವು ನಾಯಕರಿಗೆ ತಮ್ಮ ಬೆಂಬಲಿಗರ ಎದುರು ಕೈ ಕೈ ಹಿಚಿಕಿಕೊಳ್ಳುವಂತೆ ಮಾಡಿದೆ ಎಂದು ಪಕ್ಷದ ಮುಖಂಡರೊಬ್ಬರು ಹೇಳಿಕೊಂಡಿದ್ದಾರೆ. ಪಕ್ಷದ ಟಿಕೆಟ್ ಪಡೆದ ಕೆಲ ಅಭ್ಯರ್ಥಿಗಳಿಗೆ ಬಿ ಫಾರ್ಮ್​ನ್ನು ಕೊನೆ ಗಳಿಗೆಯಲ್ಲಿ ನೀಡಿರುವದೇ ಪಕ್ಷದಲ್ಲಿ ನಾಯಕರ ವೈಮನಸ್ಸು ಎತ್ತಿ ತೋರಿಸಿದಂತಾಗಿದೆ. ಇನ್ನೂ ನಾಮಪತ್ರ ಹಿಂಪಡೆಯಲು ನಾಳೆ ಕೊನೆ ದಿನವಾಗಿದ್ದು, ಬಂಡಾಯ ಅಭ್ಯರ್ಥಿಗಳನ್ನು ಸಮಾಧಾನ ಪಡಿಸುವ ಕಸರತ್ತು ನಡೆಯುತ್ತಿದೆ.

ಕಾಂಗ್ರೆಸ್​ನಲ್ಲಿ ಎಲ್ಲವೋ ಸುಸೂತ್ರ: ಜಿಲ್ಲಾ ಕಾಂಗ್ರೆಸ್​ನಲ್ಲಿ ಅಭ್ಯರ್ಥಿಗಳ ಟಿಕೆಟ್ ಹಂಚಿಕೆ ವಿಚಾರ ಬೀದಿಗೆ ತರದೇ ತೆರೆಮರೆಯಲ್ಲಿ ಪಟ್ಟಿ ಸಿದ್ದಪಡಿಸಿ ನಾಮಪತ್ರ ಸಲ್ಲಿಸುವ ಕೊನೆ ದಿನ ಬೆಳಗ್ಗೆ ಪಟ್ಟಿ ಬಿಡುಗಡೆ ಮಾಡಿ ಜಾಣ್ಮೆ ಮೆರೆದಿದೆ. ಇಲ್ಲಿಯೋ ಕೆಲ ವಾರ್ಡ್​ಗಳಲ್ಲಿ ಬಂಡಾಯದ ಬಾವುಟ ಹಾರಿಸಲು ಯತ್ನಿಸಿದ್ದರೂ ಅವರನ್ನು ಸದ್ಯದ ಮಟ್ಟಿಗೆ ಸಮಾಧಾನ ಪಡಿಸಿದ್ದು, ಪಕ್ಷದ ತೀರ್ಪು ಅಂತಿಮ ಎನ್ನುವ ಸಂದೇಶವನ್ನು‌ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ರವಾನಿಸಿದ್ದಾರೆ.

ನಾಮಪತ್ರಗಳ ಸುರಿಮಳೆ: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಈ ವರೆಗೂ ಒಟ್ಟು 358 ನಾಮಪತ್ರಗಳ ಸಲ್ಲಿಕೆಯಾಗಿವೆ.‌ ಬಿಜೆಪಿಯಿಂದ 93, ಕಾಂಗ್ರೆಸ್ ನಿಂದ 65, ಜೆಡಿಎಸ್ ನಿಂದ 25, ಆಮ್ ಆದ್ಮಿ ಪಾರ್ಟಿಯಿಂದ 19, ಎಐಎಂಐಎಂನಿಂದ 4, ಕೆಆರ್​ಎಸ್ ಪಕ್ಷದಿಂದ 3, ಜನತಾ ಪಾರ್ಟಿಯಿಂದ 3, ಎಸ್​ಡಿಪಿಐ ಪಕ್ಷದಿಂದ 3, ಸಮಾಜವಾದಿ ಪಾರ್ಟಿಯಿಂದ 2 ಹಾಗೂ ಬಿಎಸ್ಪಿಯಿಂದ 1 ನಾಮಪತ್ರಗಳ ಸಲ್ಲಿಕೆಯಾಗಿವೆ. ಬಿಜೆಪಿ ಹಾಗೂ ಕಾಂಗ್ರೆಸ್‌ನ ಕೆಲ ಅಭ್ಯರ್ಥಿಗಳು ತಲಾ ಎರಡು‌ ಹಾಗೂ ಮೂರು ನಾಮಪತ್ರಗಳ ಸಲ್ಲಿಕೆ ಮಾಡಿದ್ದಾರೆ. ನಾಳೆ ನಾಮಪತ್ರ ವಾಪಸ್ ತೆಗೆದು ಕೊಳ್ಳಲು ಅವಕಾಶವಿದೆ.

ಇದನ್ನೂ ಓದಿ:ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಕೊನೆ ದಿನ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Last Updated : Oct 18, 2022, 11:21 AM IST

ABOUT THE AUTHOR

...view details