ಕರ್ನಾಟಕ

karnataka

ವಿಜಯಪುರದಲ್ಲಿ ಮತ್ತೆ ನಡುಗಿದ ಭೂಮಿ: 3.4 ತೀವ್ರತೆಯ ಕಂಪನ ದಾಖಲು

By

Published : Jul 6, 2023, 10:48 AM IST

Updated : Jul 6, 2023, 11:16 AM IST

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ. ತಡರಾತ್ರಿ ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆಯ ಕಂಪನ ದಾಖಲಾಗಿದೆ.

Earthquake in vijayapur
ವಿಜಯಪುರದಲ್ಲಿ ಭೂಕಂಪನ

ವಿಜಯಪುರ:ಜಿಲ್ಲೆಯಲ್ಲಿ ಮತ್ತೆ ಭೂಮಿ ನಡುಗಿದೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಆಗಾಗ ಭೂಕಂಪನ ಆಗುತ್ತಲೇ ಇದೆ. ಕಳೆದ ಮಧ್ಯರಾತ್ರಿ ತಾಲೂಕಿನ ಐನಾಪುರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ.

ತಡರಾತ್ರಿ 1.38ರ ಸುಮಾರಿಗೆ ಭೂಮಿ ನಡುಗಿದ್ದು, ರಿಕ್ಟರ್ ಮಾಪಕದಲ್ಲಿ 3.4ರಷ್ಟು ತೀವ್ರತೆ ದಾಖಲಾಗಿದೆ ಎಂದು KSNDMC ದೃಢಪಡಿಸಿದೆ. ಕಳೆದೆರಡು ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ಹಲವಾರು ಬಾರಿ ಭೂಮಿ ಕಂಪಿಸಿದೆ. 3.4 ತೀವ್ರತೆಯ ಲಘು ಭೂಕಂಪನವಾಗಿದ್ದು, ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಜಿಲ್ಲೆಯಲ್ಲಿ ಪದೇ ಪದೇ ಭೂಕಂಪನ ಆಗುತ್ತಿದ್ದು, ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಆಗಾಗ ಭೂಮಿ ನಡುಗಿದ ಅನುಭವ ಆಗುತ್ತಿರುವುದರಿಂದ ರಾಜ್ಯದಿಂದ ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿತ್ತು.

ಭೂಕಂಪನಕ್ಕೆ ಮಳೆ ಕಾರಣ?ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಭೂಕಂಪನ ಸಾಮಾನ್ಯವಾಗಿದೆ. ಇದರಿಂದ ಜನರು ಆತಂಕಗೊಂಡಿದ್ದರು. ಅಂತೆಯೇ ಜಿಲ್ಲೆಯ ಭೂಕಂಪನ ಪೀಡಿತ ಪ್ರದೇಶಗಳಿಗೆ ನೈಸರ್ಗಿಕ ವಿಕೋಪ ಪರಿಶೀಲನಾ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿತ್ತು. ಪದೇ ಪದೇ ಭೂಕಂಪನಕ್ಕೆ ಅನುಭವವಾಗುತ್ತಿರುವುದಕ್ಕೆ ಆಲಮಟ್ಟಿ ಜಲಾಶಯ ಭರ್ತಿ ಹಾಗೂ ಎನ್‌ಟಿಪಿಸಿ ಕಾರಣವಲ್ಲ ಎಂದು ನೈಸರ್ಗಿಕ ವಿಕೋಪ ಪರಿಶೀಲನಾ ತಂಡದ ಹಿರಿಯ ವೈಜ್ಞಾನಿಕ ಅಧಿಕಾರಿ ಜಗದೀಶ ಈ ಹಿಂದೆ ಸ್ಪಷ್ಟಪಡಿಸಿದ್ದರು.

ನಾಲ್ಕು ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಭೂಕಂಪನದ ಅನುಭವವಾಗುತ್ತಿದೆ. ಜಿಲ್ಲೆ ಬಯಲು ಪ್ರದೇಶವಾಗಿದ್ದರೂ ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ಒಣಪ್ರದೇಶದಲ್ಲಿ ನೀರು ನುಗ್ಗಿ, ಕಲ್ಲಿನ ಪದರಗಳು ಅಲುಗಾಡುತ್ತವೆ. ಇದರಿಂದ ದೊಡ್ಡ ಶಬ್ದ ಮತ್ತು ಕಂಪನ ಸೃಷ್ಟಿಯಾಗುತ್ತಿದೆ. ಜಿಲ್ಲೆಯಲ್ಲಿ ಈ ರೀತಿಯ ಲಘು ಭೂಕಂಪನ ಸಾಮಾನ್ಯ. ಇದಕ್ಕೆ ಜನರು ಹೆದರುವ ಅಗತ್ಯವಿಲ್ಲ ಎಂದು ತಿಳಿಸಿದ್ದರು.

ಕಲಬುರಗಿ ಮತ್ತು ಸುತ್ತಲಿನ ಪ್ರದೇಶದಲ್ಲೂ ಆಗಾಗ ಭೂಮಿ ನಡುಗಿನ ಅನುಭವ ಆಗುತ್ತಿದೆ. ಜಿಲ್ಲೆಯಲ್ಲಿ ದೊಡ್ಡ ಪ್ರಮಾಣ ಭೂಕಂಪನ ತೀರಾ ಕಡಿಮೆ. ಆದ್ರೆ ಆಗಾಗ ಲಘು ಭೂಕಂಪನ ಆಗುತ್ತದೆ. ತೇವಾಂಶ ಹೆಚ್ಚಳವೇ ಭೂಕಂಪನಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಇನ್ನೂ ಹೆಚ್ಚಿನ ಅಧ್ಯಯನ ಅಗತ್ಯವಿದೆ. ಆಲಮಟ್ಟಿಯಲ್ಲಿನ ರಿಕ್ಟರ್ ಮಾಪಕದಲ್ಲಿದ್ದರೂ ಅದರಲ್ಲಿ ಕಡಿಮೆ ತೀವ್ರತೆಯ ಕಂಪನ ದಾಖಲಾಗುವುದಿಲ್ಲ ಎಂದು ಈ ಮೊದಲು ತಿಳಿಸಿದ್ದರು.

ಕಲಬುರಗಿಯಲ್ಲಿ ಜಿಲ್ಲೆಯಲ್ಲೂ ಈ ಮೊದಲ ಆಗಾಗ ಭೂಮಿ ನಡುಗಿದ ಅನುಭವ ಹಾಗೂ ದೊಡ್ಡದಾದ ಶಬ್ದ ಕೇಳಿಬರುತ್ತಿತ್ತು. ಇದರಿಂದ ಜನರು ಹೆದರಿದ್ದರು. ಬಳಿಕ ಸ್ಥಳಕ್ಕೆ ತಜ್ಞರ ತಂಡ ಆಗಮಿಸಿ, ಭಯಪಡುವ ಅಗತ್ಯವಿಲ್ಲ ಎಂದು ಹೇಳಿತ್ತು. ಭೂಮಿಯಲ್ಲಿ ನೀರು ಮತ್ತು ಸುಣ್ಣದ ಕಲ್ಲಿನ ಮಧ್ಯೆ ಘರ್ಷಣೆ ಆದಾಗ ಆಗಾಗ ಈ ರೀತಿ ಆಗುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: ಟರ್ಕಿ, ಸಿರಿಯಾದಲ್ಲಿ 'ಸಾವಿನ ಭೂಕಂಪ'.. 640 ಜನರ ಬಲಿ ಪಡೆದ ಪ್ರಕೃತಿ.. ಭಾರತದಿಂದ ನೆರವು!

Last Updated : Jul 6, 2023, 11:16 AM IST

ABOUT THE AUTHOR

...view details