ಮಂಗಳೂರು: ನಗರದ ಉಳಾಯಿಬೆಟ್ಟುವಿನಲ್ಲಿ ಹಿಂದೂ ಮಹಿಳೆಯ ಮೇಲಿನ ದುಷ್ಕರ್ಮಿಗಳ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 142 ಪ್ರಕರಣಗಳನ್ನು ರಾಜ್ಯ ಸರ್ಕಾರ ಏಕಾಏಕಿ ಹಿಂಪಡೆದಿದೆ. ಯಾವುದೋ ಒಂದು ಧರ್ಮದ ಓಲೈಕೆಗಾಗಿ ಈ ರೀತಿಯ ರಾಜಕಾರಣ ಖಂಡನೀಯ ಎಂದು ಬಿಜೆಪಿಯ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ಆರ್.ಅಶೋಕ್ ಟೀಕಿಸಿದರು.
ನಗರದ ಕೊಡಿಯಾಲಬೈಲ್ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಸೈನಿಕರಿಗೆ ನೀಡಿರುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ. ಈ ಮೂಲಕ ದೇಶದ್ರೋಹದ ಕೇಸುಗಳನ್ನು ಹಿಂದೆ ಪಡೆಯಲಾಗಿದೆ. ಭಯೋತ್ಪಾದಕರ ಜೊತೆಗೆ ಮಾತನಾಡಿ ಸಂಧಾನ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆ ಜನರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಬಿಜೆಪಿಯ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ಆರ್.ಅಶೋಕ್ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದಲ್ಲಿ ಪರಸ್ಪರ ಕಿತ್ತಾಟ, ಒಳಜಗಳಗಳ ಬೇಗುದಿ ತಾರಕಕ್ಕೇರಿದೆ. ಸಮ್ಮಿಶ್ರ ಸರ್ಕಾರಕ್ಕೆ ಆಯುಷ್ಯವಿಲ್ಲ ಎಂಬ ಮಾತು ಅವರ ಪಕ್ಷಗಳಿಂದಲೇ ಕೇಳಿ ಬರುತ್ತಿದೆ. ನಾವು ಹೇಳುತ್ತಾ ಬಂದಿದ್ದ ಅಪವಿತ್ರ ಮೈತ್ರಿ ಎಂಬ ಮಾತು ಇವರ ಈಗಿನ ವರ್ತನೆಗಳಿಂದ ಸಾಬೀತಾಗಿದೆ ಎಂದು ಆರ್.ಅಶೋಕ್ ಹೇಳಿದರು.
ರಾಹುಲ್ ಗಾಂಧಿ ದೇಶಾದ್ಯಂತ ಟೆಂಪಲ್ ರನ್ ಮಾಡಿದರೆ, ಮಂಗಳೂರಿನ ಕಾಂಗ್ರೆಸ್ ಅಭ್ಯರ್ಥಿ ಕೇಸರಿ ಶಾಲು ಹಾಕಿ ದೇವಸ್ಥಾನ ಸುತ್ತುತ್ತಿದ್ದಾರೆ. ಕಾಂಗ್ರೆಸ್ ಒಂದು ಡ್ರಾಮಾ ಕಂಪನಿಯಾಗಿದ್ದು, ಯಕ್ಷಗಾನಗಳಲ್ಲಿ ಪಾತ್ರ ಮಾಡುವಂತೆ ವೇಷ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಕರಾವಳಿಯಲ್ಲಿ ಮರಳಿನ ಕೃತಕ ಅಭಾವವನ್ನು ಕಾಂಗ್ರೆಸ್ ಸೃಷ್ಟಿಸುತ್ತಿದೆ. ಮರಳಿನ ಅಭಾವವಾಗಲು ಇದು ಕೋಲಾರ, ಚಿಕ್ಕಬಳ್ಳಾಪುರ ಅಲ್ಲ. ಸರ್ಕಾರ ಈ ಬಗ್ಗೆ ಕೂಡಲೇ ತನಿಖೆ ನಡೆಸಬೇಕೆಂದು ಬಿಜೆಪಿ ಆಗ್ರಹಿಸುತ್ತದೆ ಎಂದರು. ಬಳಿಕ ಆರ್.ಅಶೋಕ್ ರಿಕ್ಷಾ ಚಾಲಕರಲ್ಲಿಗೆ, ಅಂಗಡಿಗಳಿಗೆ ತೆರಳಿ ಮತ ಯಾಚನೆ ಮಾಡಿದರು.