ಕಾರವಾರ: ದೇಶದ ರಕ್ಷಣೆ ಸೇರಿದಂತೆ ಸಮಗ್ರ ಅಭಿವೃದ್ಧಿ ಮಂತ್ರದೊಂದಿಗೆ 75 ಭರವಸೆಗಳ ಪ್ರಣಾಳಿಕೆಯನ್ನು ಬಿಜೆಪಿ ದೇಹಲಿಯಲ್ಲಿ ಬಿಡುಗಡೆ ಮಾಡಿದೆ. ಇದರಿಂದ ಉತ್ತರಕನ್ನಡ ಜಿಲ್ಲೆಗೂ ನೇರವಾಗಿ ಅನುಕೂಲವಾಗಲಿದೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ನಾಗರಾಜ ನಾಯಕ ಹೇಳಿದರು.
ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿ ಸುಮಾರು 6 ಕೋಟಿ ಜನರ ಅಭಿಪ್ರಾಯದೊಂದಿಗೆ ಪ್ರಣಾಳಿಕೆಯನ್ನು ಸಿದ್ದಪಡಿಸಿದೆ. ದೇಶದ ಸಮಗ್ರ ಅಭಿವೃದ್ಧಿಯ ಭರವಸೆಗಳು ಪ್ರಣಾಳಿಕೆಯಲ್ಲಿದೆ. ದೇಶದ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.
ಬಿಜೆಪಿ ಪ್ರಣಾಳಿಕೆಯಿಂದ ಕಾರವಾರಕ್ಕೆ ಲಾಭವೆಂದ ನಾಗರಾಜ ನಾಯಕ 2030ರೊಳಗೆ ಬಡತನವನ್ನು ನಿರ್ಮೂಲನೆ ಮಾಡುವುದು, ಕ್ರೆಡಿಟ್ ಕಾರ್ಡ್ ಮೂಲಕ ಒಂದು ಲಕ್ಷದವರೆಗೆ ಸಾಲ, ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ರಾಷ್ಟ್ರೀಯ ವ್ಯಾಪಾರ ಆಯೋಗ ರಚನೆ, ಗ್ರಾಮೀಣ ಅಭಿವೃದ್ಧಿಗೆ 25 ಲಕ್ಷ ಕೋಟಿ ಮೀಸಲು, ಪೊಲೀಸ್ ವ್ಯವಸ್ಥೆ ಆಧುನಿಕರಣ, ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಭರವಸೆಯನ್ನು ಬಿಜೆಪಿ ನೀಡಿದೆ ಎಂದು ಹೇಳಿದರು.
ಪ್ರಣಾಳಿಕೆಯಲ್ಲಿ ಘೋಷಿಸಿದ ಹಲವು ಭರವಸೆಗಳ ಅನುಕೂಲ ಕ್ಷೇತ್ರದ ಜನತೆರಿಗೂ ನೇರವಾಗಿ ಸಿಗಲಿದೆ. ಪ್ರಮುಖವಾಗಿ ಕೃಷಿಯನ್ನೆ ಉದ್ಯೋಗವನ್ನಾಗಿಸಿಕೊಂಡ ಜಿಲ್ಲೆಯ 60 ವರ್ಷ ದಾಟಿದ ಸಣ್ಣ ಹಿಡುವಳಿದಾರರಿಗೆ ಮಾಸಿಕ ಪಿಂಚಣಿ ಘೋಷಣೆ, ಬಂದರುಗಳ ಅಭಿವೃದ್ಧಿ, ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೇರಿದಂತೆ ಇನ್ನಿತರ ಯೋಜನೆಗಳ ಲಾಭ ಸಿಗಲಿದೆ ಎಂದು ಹೇಳಿದರು.