ಹೊನ್ನಾವರ: ಮೀಟರ್ ಬಡ್ಡಿ ಸಾಲದ ಕಿರುಕುಳಕ್ಕೆ ನಲುಗಿ ಅಂಗನವಾಡಿ ಕಾರ್ಯಕರ್ತೆ ರೈಲ್ವೆ ಸೇತುವೆಯಿಂದ ಶರಾವತಿ ನದಿಗೆ ಜಿಗಿದು ನೀರು ಪಾಲಾದ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡ ಕಳಸನಮೋಟೆಯಲ್ಲಿ ನಡೆದಿದೆ.
ಮೀಟರ್ ಬಡ್ಡಿ ಸಾಲಕ್ಕೆ ಬೇಸತ್ತು ಶರಾವತಿ ನದಿಗೆ ಜಿಗಿದ ಅಂಗನವಾಡಿ ಕಾರ್ಯಕರ್ತೆ: ಮೃತದೇಹ ಪತ್ತೆ
ಮೀಟರ್ ಬಡ್ಡಿ ಸಾಲದ ಕಿರುಕುಳಕ್ಕೆ ನಲುಗಿ ಅಂಗನವಾಡಿ ಕಾರ್ಯಕರ್ತೆ ರೈಲ್ವೆ ಸೇತುವೆಯಿಂದ ಶರಾವತಿ ನದಿಗೆ ಜಿಗಿದು ಸಾವನ್ನಪ್ಪಿದ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡ ಕಳಸನಮೋಟೆಯಲ್ಲಿ ನಡೆದಿದೆ.
ನೇತ್ರಾವತಿ ಪ್ರಭಾಕರ ಅಂಬಿಗ ನದಿಗೆ ಹಾರಿ ಸಾವನ್ನಪ್ಪಿದ ಮಹಿಳೆ ಎನ್ನಲಾಗಿದೆ. ಈಕೆ ಕಳಸನಮೋಟೆ ಅಂಬಿಗರಕೇರಿಯ ಅಂಗನವಾಡಿಯಲ್ಲಿ ನಿನ್ನೆ ಮಧ್ಯಾಹ್ನ 11 ಗಂಟೆಯವರೆಗೆ ಕರ್ತವ್ಯದಲ್ಲಿದ್ದು, ನಂತರ ನದಿಗೆ ಹಾರಿದ್ದಾರೆ ಎನ್ನಲಾಗಿದೆ. ಕಾಸರಗೋಡ ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರ ಬಳಿ ನೇತ್ರಾವತಿ ಬಡ್ಡಿಗೆ ಹಣ ಪಡೆದಿದ್ದರಂತೆ. ಸರಿಯಾಗಿ ಬಡ್ಡಿ ಕೊಡದೇ ಇದ್ದ ಕಾರಣ ಗ್ರಾಪಂ ಸದಸ್ಯೆಯ ಕಡೆಯವರು ಗುರುವಾರ ರಾತ್ರಿ ಮನೆಗೆ ಮತ್ತು ಶುಕ್ರವಾರ ಅಂಗನವಾಡಿ ಕೇಂದ್ರಕ್ಕೆ ಬಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಕಾರಣದಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮನೆಯವರು ದೂರಿದ್ದಾರೆ.
ಪೊಲೀಸ್ ಹಾಗೂ ಅಗ್ನಿಶಾಮಕ ದಳ, ಸ್ಥಳೀಯ ಮೀನುಗಾರರು ಹುಡುಕಾಟ ನಡೆಸಿದ್ದು, ಇಂದು ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಹೊನ್ನಾವರ ಠಾಣೆಯ ಸಿಪಿಐ ವಸಂತ ಆಚಾರಿ, ಪಿಎಸ್ಐ ಸಾವಿತ್ರಿ ನಾಯಕ ಹಾಗೂ ಮಂಕಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.