ಕರ್ನಾಟಕ

karnataka

ETV Bharat / state

ಮಗು ಅಪಹರಣ: 12 ಗಂಟೆಯೊಳಗೆ ಉಡುಪಿ ಪೊಲೀಸರಿಂದ ಪ್ರಕರಣ ಸುಖಾಂತ್ಯ

ಹೋಟೆಲ್​ ಶಾರದಾ ಇಂಟರ್ ನ್ಯಾಷನಲ್ ಸಮೀಪದ ಶೆಡ್​ನಲ್ಲಿ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದ ಉತ್ತರ ಕರ್ನಾಟಕ ಮೂಲದ ಭಾರತಿ ಎಂಬ ಮಹಿಳೆ ತನ್ನ ಮಗು ಕಾಣೆಯಾದ ಬಗ್ಗೆ ನಗರ ಠಾಣೆಗೆ ದೂರು ಕೊಟ್ಟಿದ್ದಳು.

By

Published : Jul 12, 2021, 10:46 PM IST

kidnapped-child-rescued-by-police-in-udupi
ಅಪಹರಣವಾಗಿದ್ದ ಮಗು ರಕ್ಷಿಸಿದ ಪೊಲೀಸರು

ಉಡುಪಿ: ಅಪಹರಣವಾದ ಮಗುವನ್ನು ಕೇವಲ 12 ಗಂಟೆಯೊಳಗೆ ನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪೊಲೀಸರ ನೆರವಿನೊಂದಿಗೆ ಕುಮಟ ರೈಲ್ವೇ ನಿಲ್ದಾಣದಲ್ಲಿ ಮಗು ಸಹಿತ ಆರೋಪಿಯನ್ನು ಸೆರೆ ಹಿಡಿಯಲಾಗಿದ್ದು, ಮಕ್ಕಳ ಮಾರಾಟದ ಆತಂಕದಲ್ಲಿದ್ದ ಜಿಲ್ಲೆಯ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಭಾನುವಾರ ಬೆಳಗ್ಗೆ 10.30 ರ ಸುಮಾರಿಗೆ ನಗರದ ಕರಾವಳಿ ಬೈಪಾಸ್ ಬಳಿಯಿಂದ ಎರಡುವರೆ ವರ್ಷದ ಪುಟ್ಟ ಮಗು ಶಿವರಾಜ್ ಕಾಣೆಯಾಗಿದ್ದ. ಹೋಟೆಲ್​ ಶಾರದಾ ಇಂಟರ್ ನ್ಯಾಷನಲ್ ಸಮೀಪದ ಶೆಡ್​ನಲ್ಲಿ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದ ಉತ್ತರ ಕರ್ನಾಟಕ ಮೂಲದ ಭಾರತಿ ಎಂಬ ಮಹಿಳೆ ತನ್ನ ಮಗು ಕಾಣೆಯಾದ ಬಗ್ಗೆ ನಗರ ಠಾಣೆಗೆ ದೂರು ಕೊಟ್ಟಿದ್ದಳು.

ಘಟನೆ ಹಿನ್ನೆಲೆ: ಬಾಗಲಕೋಟೆ ಮೂಲದ ಕೂಲಿ ಕಾರ್ಮಿಕ ಪರಶುರಾಮ ಎಂಬಾತ ಈಕೆಯನ್ನು ಪರಿಚಯ ಮಾಡಿಕೊಂಡು, ಇವರ ಶೆಡ್ ಬಳಿಯೇ ಬಂದು ಮಲಗುತ್ತಿದ್ದ. ಭಾನುವಾರ ಬೆಳಗ್ಗೆ ಮಗುವಿಗೆ ತಿಂಡಿ ತಿನ್ನಿಸುವ ನೆಪ ಮಾಡಿ ಖಾಸಗಿ ಬಸ್​ನಲ್ಲಿ ಮಗುವನ್ನು ಅಪಹರಿಸಿಕೊಂಡು ಹೋಗಿದ್ದ. ಕರಾವಳಿ ಬೈಪಾಸ್ ಬಳಿ ಸಿಸಿಟಿವಿ ವಿಶುವಲ್ಸ್​ನಲ್ಲಿ ಅಪಹರಣದ ದೃಶ್ಯ ಸೆರೆಯಾಗಿತ್ತು.

ಬಸ್​ನವರಲ್ಲಿ ವಿಚಾರಿಸಿದಾಗ ಆತ, ಸಂತೆಕಟ್ಟೆ ಬಳಿ ಇಳಿದು ಹೋಗಿದ್ದು, ಭಟ್ಕಳ ಬಸ್ ಹತ್ತಿ ಹೋಗಿದ್ದಾನೆಂದು ಗೊತ್ತಾಯ್ತು. ತಕ್ಷಣವೇ ಈ ಕುರಿತು ಉತ್ತರ ಕನ್ನಡ ಪೊಲೀಸರನ್ನು ಅಲರ್ಟ್ ಮಾಡಿ, ಸಿಸಿಟಿವಿ ಫೂಟೇಜ್ ಆಧಾರದಲ್ಲಿ ಪೋಟೋ ತೆಗೆದು ಕಳುಹಿಸಲಾಗಿತ್ತು. ನಾಕಾಬಂದಿ ಮಾಡಿದ ಪೊಲೀಸರು ನೈಟ್ ರೌಂಡ್ಸ್ ನಲ್ಲಿದ್ದಾಗ ಕುಮಟ ರೈಲ್ವೇ ನಿಲ್ದಾಣದಲ್ಲಿ ಬಟ್ಟೆಯಿಂದ ಸುತ್ತಿದ್ದ ಮಗುಸಹಿತ ಆರೋಪಿಯನ್ನು ಪತ್ತೆ ಮಾಡಿದ್ದಾರೆ.

ತನ್ನದೇ ಮಗು ಎಂದು ವಾದಿಸಿದ್ದ ಆರೋಪಿ: ಇದೊಂದು ಅಪರೂಪದ ಪ್ರಕರಣ, ಕೆಲವೇ ಗಂಟೆಗಳಲ್ಲಿ ಮಗುವನ್ನು ಪತ್ತೆ ಮಾಡಿದ ಪೊಲೀಸರು ಮಗುವಿನ ಸಂಭಾವ್ಯ ಮಾರಾಟವನ್ನು ತಪ್ಪಿಸಿದ್ದಾರೆ. ಬಂಧನದ ವೇಳೆ ಇದು ತನ್ನದೇ ಮಗು ಎಂದು ಪರಶುರಾಮ ವಾದಿಸಿದ್ದ ಎನ್ನಲಾಗಿದೆ.

ಅಲೆಮಾರಿಗಳಂತೆ ತಿರುಗಾಡಿ, ಕೂಲಿ ಮಾಡಿ ಬದುಕುವ ಮಹಿಳೆ ಭಾರತಿ, ಈ ಹಿಂದೆಯೂ ಇದೇ ಮಗುವಿನ ವಿಚಾರದಲ್ಲಿ ಸುದ್ದಿಯಾಗಿದ್ದಳು. ಎರಡು ವರ್ಷಗಳ ಹಿಂದೆ ತನಗಿಂತ ಹತ್ತು ವರ್ಷ ಎಳೆಯ ಪ್ರಾಯದ ಯುವಕನ ಜೊತೆ ಸಂಬಂಧ ಬೆಳೆಸಿ ಇಬ್ಬರು ಅವಳಿ ಮಕ್ಕಳನ್ನು ಪಡೆದಿದ್ದಳು. ಇವರ ಮದುವೆಯನ್ನು ಯಾರೂ ಒಪ್ಪದಿದ್ದಾಗ, ಇದೇ ಮಗುವನ್ನು ನಗರದ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಳು. ಸಾಮಾಜಿಕ ಕಾರ್ಯಕರ್ತರು ಮಗುವನ್ನು ರಕ್ಷಿಸಿ ಸಂರಕ್ಷಣಾ ಕೇಂದ್ರಕ್ಕೆ ಕಳುಹಿಸಿದ್ದರು. ನಂತರ ಬಂದು ಮಗುವನ್ನು ಪಡೆದು ಸಾಕುತ್ತಿದ್ದಳು.

ಮಕ್ಕಳ ರಕ್ಷಣಾ ಸಮಿತಿಗೆ ಮಗು ಹಸ್ತಾಂತರ: ಆರೋಪಿ ಪರಶುರಾಮ ಕೂಡಾ ಅಪರಾಧ ಹಿನ್ನೆಲೆಯವನಾಗಿದ್ದು, ರಾಮನಗರ ಮತ್ತು ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಲಾರಿ ಅಪಹರಣ, ಕಳ್ಳತನ ಪ್ರಕರಣಗಳಿವೆ. ಮಾರಾಟದ ಉದ್ದೇಶದಿಂದಲೇ ಮಗುವನ್ನು ಕರೆದೊಯ್ದಿರಬಹುದೆಂಬ ಸಂಶಯವಿದೆ. ಸದ್ಯ ಮಗುವನ್ನು ಮಕ್ಕಳ ರಕ್ಷಣಾ ಸಮಿತಿಗೆ ಹಸ್ತಾಂತರಿಸಲಾಗಿದೆ. ತಾಯಿಯನ್ನು ಸಖಿ ಕೇಂದ್ರಕ್ಕೆ ದಾಖಲಿಸಲಾಗಿದೆ.

ಕುಡಿತದ ಚಟ ಹೊಂದಿರುವ ದಂಪತಿ ನಿರ್ಲಕ್ಷ್ಯದಿಂದ ಮಗು ಅಪಹರಣವಾಗಿದೆ. ಅಲೆಮಾರಿಗಳಾಗಿ ಬದುಕುವ ಕೂಲಿ ಕಾರ್ಮಿಕರ ಮಕ್ಕಳ ರಕ್ಷಣೆಗೆ ಪಣತೊಟ್ಟು ನಡೆಸಿರುವ ಉಡುಪಿ ಪೊಲೀಸರ ಈ ಕಾರ್ಯಾಚರಣೆ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ:ಸರ್ಕಾರಿ ಶಾಲೆಯಾದರೇನಂತೆ ಸ್ವಚ್ಛ, ಸುಂದರ.. ಆವರಣ ಶುಚಿಗೊಳಿಸಿದ 'ಪರೋಪಕಾರಂ' ತಂಡ

ABOUT THE AUTHOR

...view details