ಕರ್ನಾಟಕ

karnataka

By ETV Bharat Karnataka Team

Published : Oct 10, 2023, 9:33 AM IST

ETV Bharat / state

ಮೊಬೈಲ್ ವಿಚಾರಕ್ಕೆ ಭದ್ರಾವತಿಯಲ್ಲಿ ವ್ಯಕ್ತಿಗೆ ಚಾಕು ಇರಿತ

ಮೊಬೈಲ್​ ವಿಚಾರವಾಗಿ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ನಡೆದಿದೆ.

youth-stabbed-in-bhadravathi-shivamogga
ಮೊಬೈಲ್ ವಿಚಾರಕ್ಕೆ ಭದ್ರಾವತಿಯಲ್ಲಿ ವ್ಯಕ್ತಿಗೆ ಚಾಕು ಇರಿತ

ಶಿವಮೊಗ್ಗ : ಮೊಬೈಲ್‌ ವಿಚಾರಕ್ಕೆ ದುಷ್ಕರ್ಮಿಗಳು ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದಿರುವ ಘಟನೆ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ನಡೆದಿದೆ. ಭದ್ರಾವತಿ ಹೊಸಮನೆ ಬಡಾವಣೆಯ ಹನುಮಂತನಗರ ನಿವಾಸಿ ನಂದಕುಮಾರ್ (38) ಚಾಕು ಇರಿತಕ್ಕೊಳಗಾದ ವ್ಯಕ್ತಿ.

ಮೊಬೈಲ್​ ವಿಚಾರವಾಗಿ ನಂದಕುಮಾರ್​ ಮತ್ತು ಏರಿಯಾದ ಯುವಕರ ಗುಂಪಿನ ನಡುವೆ ಜಗಳ ನಡೆದಿದೆ. ಈ ವೇಳೆ, ಈ ಗುಂಪು ನಂದಕುಮಾರ್ ​ಬೆನ್ನಿಗೆ ಚಾಕುವಿನಿಂದ ಇರಿದಿದೆ. ಗಂಭೀರ ಗಾಯಗೊಂಡ ನಂದಕುಮಾರ್ ಅವರನ್ನು ಕೂಡಲೇ ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚಿಕಿತ್ಸೆ ಮುಂದುವರೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ನಂದಕುಮಾರ್ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಿಥುನ್​ ಕುಮಾರ್​, ನಂದಕುಮಾರ್​ ಎಂಬವರ ಮೇಲೆ ದುಷ್ಕರ್ಮಿಗಳ ಗುಂಪೊಂದು ಚಾಕುವಿನಿಂದ ಹಲ್ಲೆ ನಡೆಸಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೈಯಕ್ತಿಕ ಕಾರಣಕ್ಕೆ ಈ ಗಲಾಟೆ ನಡೆದಿದೆ. ಪ್ರಕರಣ ಸಂಬಂಧ ಸದ್ಯ 9 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಹನುಮಂತನಗರ ನಿವಾಸಿಯಾಗಿರುವ ನಂದಕುಮಾರ್, ಗಾರೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ನಂದಕುಮಾರ್​ ತಮ್ಮ ಮೊಬಲ್​ ಅನ್ನು ಅದೇ ಏರಿಯಾದ ಕೆಲ ಯುವಕರ ಬಳಿ ಹಣಕ್ಕೆ ಅಡ ಇಟ್ಟಿದ್ದರು. ಸೋಮವಾರ ಸಂಜೆ ಮೊಬೈಲ್ ಅಡ ಇಟ್ಟವರ ಬಳಿ ತೆರಳಿ ಹಣ ನೀಡಿ ಮೊಬೈಲ್ ವಾಪಸ್ ನೀಡುವಂತೆ ಕೇಳಿದ್ದಾರೆ. ಆದರೆ ಆರೋಪಿಗಳು ಮೊಬೈಲ್​ ನೀಡಲು ನಿರಾಕರಿಸಿದ್ದಾರೆ. ಈ ಸಂಬಂಧ ನಂದ ಕುಮಾರ್ ಪೊಲೀಸರಿಗೆ ದೂರು ನೀಡಿ ವಾಪಸ್ ಆಗುವಾಗ ನಮ್ಮ ವಿರುದ್ದ ದೂರು‌ ನೀಡುತ್ತೀಯಾ ಎಂದು ಯುವಕರ ಗುಂಪು ಗಲಾಟೆ ಮಾಡಿದೆ. ಜೊತೆಗೆ ನಂದಕುಮಾರ್ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಬೆನ್ನಿಗೆ ಇರಿದಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಕೆಲ ಸಂಘಟನೆಯ ಕಾರ್ಯಕರ್ತರು ಆಸ್ಪತ್ರೆ ಬಳಿ ಬಂದು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಅಲ್ಲದೇ ರಾತ್ರಿ‌ ಆಸ್ಪತ್ರೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಬಳಿಕ ಆಸ್ಪತ್ರೆಗೆ ಆಗಮಿಸಿದ ಪೊಲೀಸರು ಜನರನ್ನು ಆಸ್ಪತ್ರೆಯಿಂದ ಕಳುಹಿಸಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಕಾರ್ಯಕರ್ತರು ಸ್ಥಳದಿಂದ ತೆರಳಿದ್ದಾರೆ.

ಇದನ್ನೂ ಓದಿ :ಅಣ್ಣ ತಂಗಿ ಸಂಬಂಧ ತಪ್ಪಾಗಿ ಅರ್ಥೈಸಿಕೊಂಡ ಪತಿ.. ಜೋಡಿ ಕೊಲೆ, ತಂದೆ ಮಗ ಬಂಧನ

ABOUT THE AUTHOR

...view details