ಕರ್ನಾಟಕ

karnataka

ಮೊಹರಂ ಆಚರಿಸಿ ಭಾವೈಕ್ಯತೆ ಮೆರೆದ ಬಂಜಾರ ಸಮುದಾಯ

By

Published : Aug 19, 2021, 7:58 PM IST

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡಾದಲ್ಲಿ ಬಂಜಾರ ಸಮುದಾಯ ಜನರು ಮೊಹರಂ ಹಬ್ಬವನ್ನು ಸೌಹಾರ್ದಯುತವಾಗಿ ಆಚರಣೆ ಮಾಡಲಾಗಿದೆ.

muharram celebration
ಮೊಹರಂ ಆಚರಣೆ

ಶಿವಮೊಗ್ಗ: ಭಾವೈಕ್ಯತೆಯ ಮೊಹರಂ ಹಬ್ಬವನ್ನು ನಾಡಿನಾದ್ಯಂತ ಆಚರಿಸಲಾಗುತ್ತದೆ. ಅದರಂತೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡಾದಲ್ಲಿ ಬಂಜಾರ ಸಮುದಾಯ ಜನರು ಮೊಹರಂ ಹಬ್ಬವನ್ನು ಆಚರಿಸುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.

ಮೊಹರಂ ಆಚರಣೆ

ಕಳೆದ ಅರವತ್ತು ವರ್ಷಗಳಿಂದ ಊರಿನಲ್ಲಿ ಯಾವುದೇ ಮುಸ್ಲಿಂ ಸಮುದಾಯದ ಮನೆಗಳಿಲ್ಲದಿದ್ದರೂ ಬಂಜಾರ ಸಮುದಾಯದ ಜನರು ಈ ಮೊಹರಂ ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ, ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಈ ಬಾರಿಯ ಮೊಹರಂ ಸರಳವಾಗಿ ಆಚರಿಸಿದರು.

ಅಲಾಯಿ ದೇವರ ಗದ್ದುಗೆಗೆ ಪೂಜೆ ಸಲ್ಲಿಸಿದರು. ದೇಶದಲ್ಲಿ ವ್ಯಾಪಿಸಿರುವ ಕೊರೊನಾ ಮಹಾಮಾರಿ ದೇಶಬಿಟ್ಟು ಬೇಗ ತೊಲಗಲಿ ಎಂದು ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಕೊರೊನಾ ಮುಂಚೆ ಮೊಹರಂ ಆಚರಣೆ:

ಪ್ರತಿ ವರ್ಷ ಮೊಹರಂ ಹಬ್ಬದ ಆಚರಣೆ ಭಾಗವಾಗಿ ಮಂಟಪ ಮಾಡಿ ಐದು ದಿನಗಳ ಕಾಲ ಅಲಾಯಿ ದೇವರನ್ನು ಕೂರಿಸಲಾಗುತ್ತದೆ. ನಂತರ ಐದು ದಿನಗಳ ಕಾಲ ಮುಸ್ಲಿಂ ಸಮುದಾಯದ ಧರ್ಮ ಗುರುಗಳಿಂದ ನಮಾಜ್ ಮಾಡಿಸಿ ಪೂಜೆ ಸಲ್ಲಿಸುತ್ತಾರೆ.

ಮೊಹರಂ‌ ಕೊನೆದಿನದಂದು ಅಲಾಯಿ ದೇವರನ್ನು ಹೊತ್ತುಕೊಂಡು ಊರಿನಲ್ಲಿ ಮೆರವಣಿಗೆ ಮಾಡಿ ಪೂಜೆ ಸಲ್ಲಿಸುತ್ತಾರೆ. ಈ ಮೊಹರಂ ಹಬ್ಬದಲ್ಲಿ ರೊಟ್ಟಿ, ಬೆಲ್ಲದಿಂದ ತಯಾರಿಸಿದ ವಿಶೇಷ ಪ್ರಸಾದವನ್ನು ಭಕ್ತರಿಗೆ ಹಂಚಲಾಗುತ್ತದೆ. ಒಟ್ಟಾರೆ ಮುಸ್ಲಿಂ ಸಮುದಾಯದವರು ಇಲ್ಲದೇ ಇರುವ ಬಂಜಾರ ಸಮುದಾಯದಲ್ಲಿ ಭಾವೈಕ್ಯತೆ ಸಾರುವ ಈ ಮೊಹರಂ ಹಬ್ಬ ಆಚರಿಸುವ ಮೂಲಕ ಸೌಹಾರ್ದತೆ ಮೆರದಿರುವುದು ವಿಶೇಷ.

ABOUT THE AUTHOR

...view details