ಕರ್ನಾಟಕ

karnataka

ನಮ್ಮ ಮನೆ ಮೇಲೆ ನಡೆದ ಕಲ್ಲು ತೂರಾಟ ವಿರೋಧ ಪಕ್ಷ​ದ ಪ್ರಾಯೋಜಿತ ಕೃತ್ಯ: ಸಂಸದ ಬಿ ವೈ ರಾಘವೇಂದ್ರ

By

Published : Mar 29, 2023, 9:21 PM IST

ಕಾಂಗ್ರೆಸ್​ ಪ್ರಾಯೋಜಕತ್ವದಲ್ಲಿ ನಮ್ಮ ಮನೆ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ಬಿ.ವೈ ರಾಘವೇಂದ್ರ ಆರೋಪಿಸಿದ್ದಾರೆ.

MP B Y Raghavendra
ಸಂಸದ ಬಿ.ವೈ ರಾಘವೇಂದ್ರ

ಕೆಟ್ಟ ಮನಸ್ಸಿನವರು ನಮ್ಮ ಮನೆಮೇಲೆ ಕಲ್ಲು ಹೊಡೆದಿದ್ದಾರೆ.

ಶಿವಮೊಗ್ಗ :ಎರಡು ದಿನಗಳ ಹಿಂದೆ ಶಿಕಾರಿಪುರದ ನಮ್ಮ ಮನೆ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣ ಮೀಸಲಾತಿ ಹೋರಾಟ ಅಲ್ಲಾ, ಇದೊಂದು ನೆಪ ಅಷ್ಟೇ. ಕಾಣದ ಕೈಗಳು ಸೇರಿಕೊಂಡ ಕಾಂಗ್ರೆಸ್ ಪ್ರಾಯೋಜಿತದಲ್ಲಿ ಈ ಕೃತ್ಯ ಮಾಡಿದ್ದಾರೆ ಎಂದು ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ ಅವರ ಪುತ್ರರಾದ ಸಂಸದ ಬಿ.ವೈ ರಾಘವೇಂದ್ರ ಆರೋಪಿಸಿದ್ದಾರೆ.

ಶಿವಮೊಗ್ಗದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶಿಕಾರಿಪುರದಲ್ಲಿ ನಡೆದ ಘಟನೆ ನಿಜಕ್ಕೂ ತುಂಬ ಬೇಸರ ತಂದಿದೆ. ಇದು ಮೀಸಲಾತಿ ಹೋರಾಟದ ನೆಪ ಅಷ್ಟೇ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಮೀಸಲಾತಿ ವಿಷಯವನ್ನು ಚುನಾವಣೆ ಸಂದರ್ಭದಲ್ಲಿ ಜನರಿಗೆ ತಪ್ಪು ಗ್ರಹಿಕೆ ಮೂಡಿಸುವ ಸಲುವಾಗಿ ಮತ್ತು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷದ ಪ್ರಾಯೋಜಕತ್ವದಲ್ಲಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಈ ತರಹದ ಘಟನೆಗಳು ಇನ್ಮುಂದೆ ನಡೆಯುವುದಿಲ್ಲ. ಕೆಲವು ಸಹಿಸಿಕೊಳ್ಳಲು ಆಗದ ಕೆಟ್ಟ ಮನಸ್ಸಿನವರು ನಮ್ಮ ಮನೆ ಮೇಲೆ ಕಲ್ಲು ಹೊಡೆದಿದ್ದಾರೆ ಎಂದು ಹೇಳಿದರು.

ಭದ್ರತಾ ವೈಫಲ್ಯ ಆಗಿಲ್ಲ :ತಮ್ಮ ಪ್ರಾಣದ ಹಂಗು ತೊರೆದು ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಹಾಗಾಗಿ ನಮ್ಮ ಮನೆ ಮೇಲೆ ಆಗಿರುವ ಕಲ್ಲು ತೂರಾಟ ಘಟನೆಯಲ್ಲಿ ಪೊಲೀಸ್ ವೈಫಲ್ಯ ಆಗಿಲ್ಲಾ ಎಂದು ಸಂಸದರು ಸ್ಪಷ್ಟವಾಗಿ ತಿಳಿಸಿದರು.

ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವುದಿಲ್ಲ :ನಂತರ ಮಾತನಾಡಿದ ಸಂಸದರು ಯಾವುದೇ ಕಾರಣಕ್ಕೂ ಭದ್ರವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಸ್ಥಾವರ (ವಿಐಎಸ್​ಲ್) ಕಾರ್ಖಾನೆಯನ್ನು​ ಮುಚ್ಚುವುದಿಲ್ಲ. ಕಾರ್ಮಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಇದೇ ಸಂದರ್ಭದಲ್ಲಿ ಸಂಸದರು ಅಭಯ ನೀಡಿದರು.

ಕೇಂದ್ರ ಸರ್ಕಾರ ನಷ್ಟದಲ್ಲಿದ್ದ ವಿಐಎಸ್‌ಎಲ್ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರ ಕೈಗೊಂಡಿತ್ತು. ಆ ವೇಳೆ ಭದ್ರಾವತಿ ಕಾರ್ಖಾನೆ ಸೇರಿದಂತೆ ಹಲವು ಕಾರ್ಖಾನೆಗಳು ಕೂಡ ಈ ಪಟ್ಟಿಯಲ್ಲಿದ್ದವು. ಆದರೆ ಕೇಂದ್ರ ಉಕ್ಕು ಸಚಿವ ಹಾಗೂ ಗೃಹ ಸಚಿವರು ರಾಜ್ಯಕ್ಕೆ ಬಂದಾಗ ಕಾರ್ಖಾನೆಯನ್ನು ಮುಚ್ಚದಂತೆ ಮನವಿ ಮಾಡಲಾಗಿತ್ತು.

ತಾವೂ ಸಹ ಕೇಂದ್ರದ ಮೇಲೆ ಒತ್ತಡ ತಂದು ಕಾರ್ಖಾನೆಯನ್ನು ಮುಚ್ಚಿದರೆ ಸುಮಾರು 10 ಸಾವಿರ ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ. ಹಾಗಾಗಿ ಮುಚ್ಚಬಾರದು ಎಂದು ಮನವಿ ಮಾಡಿದ್ದೆವು. ಹೀಗಾಗಿ ಕೇಂದ್ರ ಸರ್ಕಾರ ಈಗ ವಿಐಎಸ್‌ಎಲ್ ಕಾರ್ಖಾನೆಯನ್ನು ಸದ್ಯಕ್ಕೆ ಮುಚ್ಚುವ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ. ಬೀಸುವ ದೊಣ್ಣೆಯಿಂದ ನಾವು ಪಾರಾಗಿದ್ದೇವೆ ಎಂದರು.

ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಮುಚ್ಚದಿರುವ ಬಗ್ಗೆ ಮತ್ತು ಸೈಲ್‌ ಮುಂದುವರಿಸಿಕೊಂಡು ಹೋಗುವ ಬಗ್ಗೆ ಮೌಖಿಕವಾಗಿ ಒಪ್ಪಿಗೆ ನೀಡಿದೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಲಿಖಿತವಾಗಿ ತಿಳಿಸಲು ಆಗುತ್ತಿಲ್ಲ. ಆದರೆ ಬಿಜೆಪಿ ಕೊಟ್ಟ ಮಾತಿಗೆ ತಪ್ಪುವುದಿಲ್ಲ. ಹಾಗಾಗಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವುದಿಲ್ಲ. ಮತ್ತು ಕಾರ್ಮಿಕರು ಭಯಪಡುವ ಅಗತ್ಯವೂ ಇಲ್ಲ ಎಂದು ಬಿವೈ ರಾಘವೇಂದ್ರ ಹೇಳಿದರು. ಇನ್ನು ಈ ಸಂದರ್ಭದಲ್ಲಿ ಮಾಧ್ಯಮಗೋಷ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಪ್ರಮುಖರಾದ ಜ್ಯೋತಿಪ್ರಕಾಶ್, ದತ್ತಾತ್ರಿ, ಧರ್ಮಪ್ರಸಾದ್, ಜಗದೀಶ್, ರಾಮಲಿಂಗಪ್ಪ, ಎಸ್. ಕುಮಾರ್, ಬುಳ್ಳಾಪುರ ಬಸವರಾಜಪ್ಪ ಸೇರಿದಂತೆ ಇತರು ಉಪಸ್ಥಿತರಿದ್ದರು.

ಇದನ್ನೂ ಓದಿ :ಯಡಿಯೂರಪ್ಪನವರ ಮನೆ ಮೇಲಿನ ದಾಳಿ ಪೂರ್ವ ನಿಯೋಜಿತವಾಗಿದೆ: ಶಾಸಕ ಅಶೋಕ‌ ನಾಯ್ಕ

ABOUT THE AUTHOR

...view details