ಶಿವಮೊಗ್ಗ:ಹೊಸನಗರ ತಾಲೂಕಿನ ಸೂಡೂರು ಗ್ರಾಮದಲ್ಲಿ ಹೆಣ್ಣು ನಾಯಿಯೊಂದು (ಟಾಮಿ) ಕಾಡಿನಲ್ಲಿ ಕುಸಿದು ಬಿದ್ದ ಮಾಲೀಕನನ್ನ ಪತ್ತೆ ಮಾಡಿ ಪ್ರಾಣ ಉಳಿಸಿದೆ. ನಾಯಿಯ ಈ ಸ್ವಾಮಿ ನಿಷ್ಠೆಗೆ ಊರಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವಾಗಲೂ ಹೆಣ್ಣು ಮರಿಗಳನ್ನೇ ಹೆಚ್ಚು ಹಾಕುತ್ತಿದ್ದ ನಾಯಿ ಕಂಡು ಸಿಡಿಮಿಡಿಗೊಳ್ಳುತ್ತಿದ್ದ ಮಾಲೀಕ ಕೊನೆವರೆಗೂ ನಾಯಿ ಋಣ ತೀರಿಸಲಾಗದು ಎನ್ನುತ್ತಿದ್ದಾನೆ.
ಕಾಡಿಗೆ ತೆರಳಿದ್ದ ಶೇಖರಪ್ಪ ಮರಳಿ ಬಂದಿಲ್ಲ:ಶಿವಮೊಗ್ಗದಿಂದ ಹೊಸನಗರ ಸಾಗುವ ಹಾದಿಯಲ್ಲಿ ಕಾಡಿನ ಮಧ್ಯೆ ಸೂಡೂರು ಎಂಬ ಪುಟ್ಟ ಗ್ರಾಮವಿದೆ. ಆಯನೂರು ಪಟ್ಟಣಕ್ಕೆ ಖಾಸಗಿ ಕ್ಯಾಂಟೀನ್ ಕೆಲಸಕ್ಕೆಂದು ಪ್ರತಿದಿನ ಬರುವ ಶೇಖರಪ್ಪಗೆ ಐವತ್ತೈದು ವರ್ಷಗಳ ಆಸುಪಾಸು. ಏಳು ಗಂಟೆಗೆ ಕಾಡಿಗೆ ತೆರಳಿ ಒಣ ಕಟ್ಟಿಗೆಗಳನ್ನ ಸಂಗ್ರಹಿಸಿ ಹತ್ತು ಗಂಟೆಯೊಳಗೆ ಮನೆ ಸೇರುವುದು ದೈನಂದಿನ ಕಾಯಕವಾಗಿದೆ. ನಂತರ ತಿಂಡಿ ತಿಂದು ಕ್ಯಾಂಟೀನ್ ಕೆಲಸಕ್ಕೆ ತೆರಳುತ್ತಾರೆ. ಹೀಗಿರುವಾಗ ಶನಿವಾರ ಕಾಡಿಗೆ ಕಟ್ಟಿಗೆ ತರಲು ಹೋದಾಗ ಹನ್ನೆರಡು ಗಂಟೆ ಕಳೆದರೂ ಮನೆಗೆ ಮರಳಲಿಲ್ಲ.
ಮನೆಯವರಿಂದ ಕಾಡಿನಲ್ಲಿ ಹುಡುಕಾಟ: ಮನೆಯಲ್ಲಿ ಅವರ ಪತ್ನಿ ಹಾಗೂ ಮಗಳು ಮಧ್ಯಾಹ್ನದವರೆಗೆ ಕಾದರು. ಬಳಿಕ ಬಾರದ ಶೇಖರಪ್ಪನವರ ಸುಳಿವು ಕಾಣದ ಮಗಳು ನೆರೆಹೊರೆಯವರು, ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಶೇಖರಪ್ಪ ಜೊತೆಗಿದ್ದ ಕೀಪ್ಯಾಡ್ ಮೊಬೈಲ್ ಕೂಡ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಶೇಖರಪ್ಪರನ್ನ ಮಧ್ಯಾಹ್ನದೊಳಗೆ ಹುಡುಕಿ ತರುವುದಾಗಿ ಗ್ರಾಮದ ಜನರು ಕಾಡಿನೊಳಗೆ ಹೋಗಿದ್ದಾರೆ. ಪ್ರತಿ ಬಾರಿ ಅವರು ಕಾಡಿಗೆ ಹೋಗುವ ದಾರಿ ಕಟ್ಟಿಗೆ ಹುಡುಕುವ ಸ್ಥಳ ಎಲ್ಲ ಕಡೆ ಹುಡುಕಿದ್ದಾರೆ. ಆದರೆ ಅವರು ಸಿಕ್ಕಿಲ್ಲ.