ಕರ್ನಾಟಕ

karnataka

ಶಿವಮೊಗ್ಗದಲ್ಲಿ ಮಾಲೀಕನ ಪ್ರಾಣ ಉಳಿಸಿದ ನಾಯಿ: ಟಾಮಿ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ

By

Published : Nov 14, 2022, 2:42 PM IST

ಕಾಡಿಗೆ ಕಟ್ಟಿಗೆ ತರಲು ಹೋಗಿದ್ದ ಶೇಖರಪ್ಪ ಎಂಬುವವರು ಪ್ರಜ್ಞಾಹೀನರಾಗಿ ಮರದ ಕೆಳಗೆ ಬಿದ್ದಿದ್ದರು. ಅವರು ಮನೆಗೆ ಬಾರದಿದ್ದರಿಂದ ಗಾಬರಿಗೊಂಡ ಮನೆಯವರು, ಗ್ರಾಮಸ್ಥರ ಜೊತೆ ಗೂಡಿ ಹುಡುಕಾಟ ನಡೆಸಿದ್ದಾರೆ. ಆದರೆ ಅವರು ಎಲ್ಲೂ ಸಿಕ್ಕಿಲ್ಲ. ಆದ್ರೆ ಶೇಖರಪ್ಪ ಸಾಕಿದ್ದ ನಾಯಿ ಅವರನ್ನು ಹುಡುಕಿ, ಅವರ ಜೀವವನ್ನು ಕಾಪಾಡಿದೆ.

dog that saved its owners life in Shimoga
ಶಿವಮೊಗ್ಗದಲ್ಲಿ ಮಾಲೀಕನ ಪ್ರಾಣ ಉಳಿಸಿದ ನಾಯಿ

ಶಿವಮೊಗ್ಗ:ಹೊಸನಗರ ತಾಲೂಕಿನ ಸೂಡೂರು ಗ್ರಾಮದಲ್ಲಿ ಹೆಣ್ಣು ನಾಯಿಯೊಂದು (ಟಾಮಿ) ಕಾಡಿನಲ್ಲಿ ಕುಸಿದು ಬಿದ್ದ ಮಾಲೀಕನನ್ನ ಪತ್ತೆ ಮಾಡಿ ಪ್ರಾಣ ಉಳಿಸಿದೆ. ನಾಯಿಯ ಈ ಸ್ವಾಮಿ ನಿಷ್ಠೆಗೆ ಊರಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವಾಗಲೂ ಹೆಣ್ಣು ಮರಿಗಳನ್ನೇ ಹೆಚ್ಚು ಹಾಕುತ್ತಿದ್ದ ನಾಯಿ ಕಂಡು ಸಿಡಿಮಿಡಿಗೊಳ್ಳುತ್ತಿದ್ದ ಮಾಲೀಕ ಕೊನೆವರೆಗೂ ನಾಯಿ ಋಣ ತೀರಿಸಲಾಗದು ಎನ್ನುತ್ತಿದ್ದಾನೆ.

ಕಾಡಿಗೆ ತೆರಳಿದ್ದ ಶೇಖರಪ್ಪ ಮರಳಿ ಬಂದಿಲ್ಲ:ಶಿವಮೊಗ್ಗದಿಂದ ಹೊಸನಗರ ಸಾಗುವ ಹಾದಿಯಲ್ಲಿ ಕಾಡಿನ ಮಧ್ಯೆ ಸೂಡೂರು ಎಂಬ ಪುಟ್ಟ ಗ್ರಾಮವಿದೆ. ಆಯನೂರು ಪಟ್ಟಣಕ್ಕೆ ಖಾಸಗಿ ಕ್ಯಾಂಟೀನ್‌ ಕೆಲಸಕ್ಕೆಂದು ಪ್ರತಿದಿನ ಬರುವ ಶೇಖರಪ್ಪಗೆ ಐವತ್ತೈದು ವರ್ಷಗಳ ಆಸುಪಾಸು. ಏಳು ಗಂಟೆಗೆ ಕಾಡಿಗೆ ತೆರಳಿ ಒಣ ಕಟ್ಟಿಗೆಗಳನ್ನ ಸಂಗ್ರಹಿಸಿ ಹತ್ತು ಗಂಟೆಯೊಳಗೆ ಮನೆ ಸೇರುವುದು ದೈನಂದಿನ ಕಾಯಕವಾಗಿದೆ. ನಂತರ ತಿಂಡಿ ತಿಂದು ಕ್ಯಾಂಟೀನ್‌ ಕೆಲಸಕ್ಕೆ ತೆರಳುತ್ತಾರೆ. ಹೀಗಿರುವಾಗ ಶನಿವಾರ ಕಾಡಿಗೆ ಕಟ್ಟಿಗೆ ತರಲು ಹೋದಾಗ ಹನ್ನೆರಡು ಗಂಟೆ ಕಳೆದರೂ ಮನೆಗೆ ಮರಳಲಿಲ್ಲ.

ಮನೆಯವರಿಂದ ಕಾಡಿನಲ್ಲಿ ಹುಡುಕಾಟ: ಮನೆಯಲ್ಲಿ ಅವರ ಪತ್ನಿ ಹಾಗೂ ಮಗಳು ಮಧ್ಯಾಹ್ನದವರೆಗೆ ಕಾದರು. ಬಳಿಕ ಬಾರದ ಶೇಖರಪ್ಪನವರ ಸುಳಿವು ಕಾಣದ ಮಗಳು ನೆರೆಹೊರೆಯವರು, ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಶೇಖರಪ್ಪ ಜೊತೆಗಿದ್ದ ಕೀಪ್ಯಾಡ್‌ ಮೊಬೈಲ್​ ಕೂಡ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಶೇಖರಪ್ಪರನ್ನ ಮಧ್ಯಾಹ್ನದೊಳಗೆ ಹುಡುಕಿ ತರುವುದಾಗಿ ಗ್ರಾಮದ ಜನರು ಕಾಡಿನೊಳಗೆ ಹೋಗಿದ್ದಾರೆ. ಪ್ರತಿ ಬಾರಿ ಅವರು ಕಾಡಿಗೆ ಹೋಗುವ ದಾರಿ ಕಟ್ಟಿಗೆ ಹುಡುಕುವ ಸ್ಥಳ ಎಲ್ಲ ಕಡೆ ಹುಡುಕಿದ್ದಾರೆ. ಆದರೆ ಅವರು ಸಿಕ್ಕಿಲ್ಲ.

ಶೇಖರಪ್ಪರನ್ನು ಹುಡುಕಿದ ನಾಯಿ:ಕಾಡಿನಲ್ಲಿ ಶೇಖರಪ್ಪ ಹೆಸರು ಸಹ ಕೂಗಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಏನೋ ಅವಘಡ ಸಂಭವಿಸಿದೆ ಎಂದು ಗಾಬರಿಯಾಗಿದ್ದಾರೆ. ಜನರ ಜೊತೆ ಹೆಜ್ಜೆ ಹಾಕಿದ್ದ ಶೇಖರಪ್ಪನವರ ಮನೆಯ ಹೆಣ್ಣು ನಾಯಿ ಮಾತ್ರ ಜನರಿಂದ ವಿಘಟನೆ ಹೊಂದಿತ್ತು. ಸಂಜೆ 4 ಗಂಟೆಯ ಸುಮಾರಿಗೆ ನಾಯಿ ಶೇಖರಪ್ಪರನ್ನು ಪತ್ತೆ ಹಚ್ಚಿ ಕೂಗಿದೆ.

ಯಾವುದೋ ಭಾಗದಲ್ಲಿ ಹುಡುಕಾಟ ನಡೆಸುತ್ತಿದ್ದ ಜನರು ನಾಯಿ ಕೂಗಿನತ್ತ ಧಾವಿಸಿದಾಗ ಒಂದು ಮರದ ಕೆಳಗೆ ಶೇಖರಪ್ಪ ಪ್ರಜ್ಞಾಹೀನನಾಗಿ ಬಿದ್ದಿದ್ದರು. ತಕ್ಷಣವೇ ಗ್ರಾಮಸ್ಥರು ಶೇಖರಪ್ಪನವರನ್ನ ರಿಪ್ಪನ್‌‌ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಶೇಖರಪ್ಪ ಸದ್ಯ ಚೇತರಿಸಿಕೊಂಡಿದ್ದು, ಇಡೀ ಸೂಡೂರು ಶ್ವಾನ ಪ್ರೀತಿಯನ್ನ ಕೊಂಡಾಡಿದೆ.

ಇದನ್ನೂ ಓದಿ:ನಾಗರನಿಂದ ಮಾಲೀಕನ ಪ್ರಾಣ ಉಳಿಸಿ ಕಣ್ಮುಚ್ಚಿದ ಶ್ವಾನ; ಕೋಲಾರದಲ್ಲಿ ಮನಮಿಡಿಯುವ ಘಟನೆ

ಈ ಕುರಿತು ದೂರವಾಣಿಯಲ್ಲಿ ಮಾತನಾಡಿದ ಶೇಖರಪ್ಪ, ಆರೇಳು ವರ್ಷಗಳಿಂದಿರುವ ನಾಯಿ ಕೇವಲ ಹೆಣ್ಣು ಮರಿಗಳನ್ನೇ ಹಾಕುತ್ತಿತ್ತು. ಈಗಲೂ ಕೂಡ ಗರ್ಭ ಧರಿಸಿದೆ. ಯಾವಾಗಲೂ ನಾಯಿಗೆ ಬೈಯ್ತಿದ್ದೆ, ಆದರೆ ಈ ಉಪಕಾರವನ್ನ ಕೊನೆಯವರೆಗೂ ಮರೆಯೋದಿಲ್ಲ ಎಂದು ಹೇಳಿದ್ದಾರೆ.

ABOUT THE AUTHOR

...view details