ರಾಯಚೂರು:ಪ್ರವಾಹ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸಮರ್ಪಕ ಪರಿಹಾರ ನೀಡುತ್ತಿಲ್ಲ. ಹಾಗಾಗಿ ತಕ್ಷಣ ನ್ಯಾಯಯುತ ಪರಿಹಾರ ಒದಗಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಒತ್ತಾಯಿಸಿದರು.
ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡುತ್ತಾ, ಭೀಕರ ಬರದ ನಡುವೆಯೇ ನೆರೆ ಹಾವಳಿಯುಂಟಾಗಿ ರಾಜ್ಯದ 7 ಜಿಲ್ಲೆಗಳು ತತ್ತರಿಸಿವೆ. ಈವರೆಗೂ ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ. ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದರೂ ಅಲ್ಪಸ್ವಲ್ಪ ನೀಡುತ್ತಿದೆ ಎಂದರು.
ಸರ್ಕಾರ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ನೀಡಬೇಕು ಮುಸಾಲ್ಮಾನರ ಕುರಿತು ಮಾಜಿ ಡಿಸಿಎಂ ಈಶ್ವರಪ್ಪ ಇತ್ತೀಚಿಗೆ ಬಿಜೆಪಿಗೆ ಮತ ಹಾಕದ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗಲಿ ಎಂದಿದ್ದರು. ಈ ಹೇಳಿಕೆ ಖಂಡನಾರ್ಹ. ಪ್ರಜಾಪ್ರಭುತ್ವದಲ್ಲಿ ಯಾರು ಯಾವ ಪಕ್ಷಕ್ಕಾದ್ರೂ ಮತ ಚಲಾಯಿಸಬಹುದು ಈಶ್ವರಪ್ಪ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿ ಎಂದು ಖಂಡಿಸಿದರು.
ಕೇಂದ್ರ ಸರ್ಕಾರ 370 ವಿಧಿ ರದ್ದು ಮಾಡಿ ಅಲ್ಲಿನ ಸ್ಥಳೀಯ ನಾಗರಿಕರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ರಾಜ್ಯದ ಸ್ಥಿತಿಗತಿಯನ್ನು ವರದಿ ಮಾಡಲು ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದೆ. ಇದರಿಂದ ಅಲ್ಲಿನ ಸಮಸ್ಯೆ ಹೊರಗೆ ತಿಳಿಯುತ್ತಿಲ್ಲ ಎಂದರು. ಅಲ್ಲದೇ ದೇಶದ ಆರ್ಥಿಕ ಕುಸಿತದಿಂದ ಕಾಶ್ಮೀರದ ಸೇಬು ಹಣ್ಣು ವ್ಯಾಪಾರ ಸ್ಥಗಿತಗೊಂಡು ನಷ್ಟಕ್ಕೆ ಸಿಲುಕಿದೆ ಎಂದರು.