ಕರ್ನಾಟಕ

karnataka

By

Published : Jan 16, 2021, 4:28 PM IST

ETV Bharat / state

ರಾಯಚೂರಿನಲ್ಲಿ ಮೆಣಸಿನಕಾಯಿ ಘಾಟು ಬಲು ಜೋರು: ಹೊಸ ಶೈತ್ಯಾಗಾರಕ್ಕೆ ಬೇಡಿಕೆಯಿಟ್ಟ ರೈತರು

ರಾಯಚೂರು ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾದ ಭತ್ತದ ಜೊತೆಗೆ ವಾಣಿಜ್ಯ ಬೆಳೆಯಾದ ಮೆಣಸಿನಕಾಯಿಯನ್ನು ಹೆಚ್ಚು ಬೆಳೆಯಲಾಗುತ್ತಿದೆ. ಈ ಹಿನ್ನೆಲೆ ರೈತರು ಬೆಳೆದ ಬೆಳೆಗಳ ಸಂರಕ್ಷಣೆಗಾಗಿ ಹೊಸ ಶೈತ್ಯಾಗಾರ ಘಟಕ ಪ್ರಾರಂಭಿಸಲು ಬೇಡಿಕೆ ಇಟ್ಟಿದ್ದಾರೆ.

ಹೊಸ ಶೈತ್ಯಾಗಾರಕ್ಕೆ ಬೇಡಿಕೆಯಿಟ್ಟ ರೈತರು
ಹೊಸ ಶೈತ್ಯಾಗಾರಕ್ಕೆ ಬೇಡಿಕೆಯಿಟ್ಟ ರೈತರು

ರಾಯಚೂರು: ಭತ್ತದ ಕಣಜ ಎಂದೇ ಖ್ಯಾತಿ ಪಡೆದಿರುವ ರಾಯಚೂರು ಜಿಲ್ಲೆಯಲ್ಲಿ ಮೆಣಸಿನಕಾಯಿ ಘಾಟು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರೈತರು ಬೆಳೆದ ಬೆಳೆಗಳ ಸಂರಕ್ಷಣೆಗಾಗಿ ಶೈತ್ಯಾಗಾರ (ಕೋಲ್ಡ್‌ ಸ್ಟೋರೇಜ್) ಘಟಕ ಪ್ರಾರಂಭಿಸಲು ಬೇಡಿಕೆ ಇಟ್ಟಿದ್ದಾರೆ.

ರಾಯಚೂರಿನಲ್ಲಿ ಹೊಸ ಶೈತ್ಯಾಗಾರಕ್ಕೆ ಬೇಡಿಕೆಯಿಟ್ಟ ರೈತರು

ಜಿಲ್ಲೆಯ ಪ್ರಮುಖ ಬೆಳೆಯಾದ ಭತ್ತದ ಜೊತೆಗೆ ವಾಣಿಜ್ಯ ಬೆಳೆಯಾದ ಮೆಣಸಿನಕಾಯಿಯನ್ನು ಬೆಳೆಯಲಾಗುತ್ತಿದೆ. ಕಳೆದ 5 ವರ್ಷದಲ್ಲಿ ರಾಯಚೂರು ಮತ್ತು ದೇವದುರ್ಗ ತಾಲೂಕಿನಲ್ಲಿ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸು ಬೆಳೆಯಲಾಗುತ್ತಿದ್ದು, ಸುಮಾರು 70 ರಿಂದ 80 ಸಾವಿರ ಮೆಟ್ರಿಕ್ ಟನ್ ಬೆಳೆ ಬರುತ್ತಿದೆ ಎಂದು ಅಂದಾಜಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 7 ಶೈತ್ಯಾಗಾರವಿದ್ದು ಒಂದು ಸಿಂಧನೂರು ತಾಲೂಕಿನಲ್ಲಿದ್ದರೆ ಉಳಿದ 6 ರಾಯಚೂರು ತಾಲೂಕಿನಲ್ಲಿವೆ. ಇವುಗಳ ಒಟ್ಟು ಸಾಮರ್ಥ್ಯ 49,500 ಮೆಟ್ರಿಕ್ ಟನ್ ಮಾತ್ರವಾಗಿದ್ದು, ಉಳಿದ ಬೆಳೆಗೆ ಶೈತ್ಯಾಗಾರದ ಕೊರತೆ ಉಂಟಾದ ಕಾರಣ ನೆರೆಯ ಜಿಲ್ಲೆಯ ಕಡೆಗೆ ರೈತರು ಮುಖಮಾಡುವಂತೆ ಮಾಡಿದೆ.

ಕಳೆದ ವರ್ಷ ಸುಮಾರು 30 ಸಾವಿರಕ್ಕೂ ಅಧಿಕ ಮೆಣಸಿನಕಾಯಿ ಬೆಳೆ ನೆರೆ ಜಿಲ್ಲೆಯ ಶೈತ್ಯಾಗಾರದ ಪಾಲಾಗಿದ್ದು, ಇದರಿಂದಾಗಿ ರೈತರಿಗೆ ಸಾಗಾಣಿಕೆ ವೆಚ್ಚ ಹೆಚ್ಚಾಗುವುದರಿಂದ ಹೆಚ್ಚಿನ ಲಾಭ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ನಿರಾಸೆಯಾಗಿದೆ. ಅಲ್ಲದೇ ಮೆಣಸಿನಕಾಯಿ ಜೊತೆಗೆ ತೊಗರಿ, ಕಡಲೆ, ಜೋಳ, ಶೇಂಗಾ ಇತರೆ ದವಸ ಧಾನ್ಯಗಳ ಸಂಗ್ರಹಕ್ಕೆ ರೈತರು ಮುಂದಾಗುತ್ತಿರುವುದರಿಂದ ಬೆಳೆ ಸಂರಕ್ಷಣೆಗೆ ಹೆಚ್ಚುವರಿ ಶೈತ್ಯಾಗಾರ ಸ್ಥಾಪಿಸುವಂತೆ ಒತ್ತಾಯಿಸಿದ್ದಾರೆ.

ಇನ್ನು ಈ ಕುರಿತು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಹೇಶ್ ಪ್ರತಿಕ್ರಿಯೆ ನೀಡಿದ್ದು, ಜಿಲ್ಲೆಯಲ್ಲಿ ಎರಡನೇ ವಾಣಿಜ್ಯ ಬೆಳೆಯಾಗಿ ಮೆಣಸಿನಕಾಯಿ ಹೆಚ್ಚಾಗಿ ಬರುತ್ತಿದೆ. ಜಿಲ್ಲೆಯಲ್ಲಿರುವ 7 ಶೈತ್ಯಾಗಾರದ ಸಾಮರ್ಥ್ಯಕಿಂತ ಹೆಚ್ಚಾಗಿ ಬೆಳೆ ಬರುತ್ತಿರುವುದರಿಂದ ನೆರಯ ಜಿಲ್ಲೆಯ ಕೋಲ್ಡ್‌ ಸ್ಟೋರೇಜ್ ಘಟಕವನ್ನು ರೈತರು ಅವಲಂಬಿಸಿದ್ದಾರೆ. ಇದರಿಂದಾಗಿ ರೈತರಿಗೆ ಆರ್ಥಿಕ ಹೊರೆಯಾಗುತ್ತಿದ್ದು, ಜಿಲ್ಲೆಯಲ್ಲಿ ಹೊಸದಾಗಿ ಶೈತ್ಯಾಗಾರ ಸ್ಥಾಪನೆಗೆ ಮುಂದೆ ಬರುವರಿಗೆ ಇಲಾಖೆಯಿಂದ ಆರ್ಥಿಕ ಸಹಾಯಧನ ಸಿಗಲಿದೆ ಎಂದರು.

ABOUT THE AUTHOR

...view details