ಕರ್ನಾಟಕ

karnataka

By

Published : Apr 7, 2023, 11:26 AM IST

Updated : Apr 7, 2023, 12:04 PM IST

ETV Bharat / state

ಆರ್ ಧ್ರುವನಾರಾಯಣ ಅಗಲಿಕೆಯ ಬೆನ್ನಲ್ಲೇ ಪತ್ನಿ ವೀಣಾ ಧ್ರುವನಾರಾಯಣ ವಿಧಿವಶ

ಆರ್ ಧ್ರುವನಾರಾಯಣ ಪತ್ನಿ ವೀಣಾ ಧ್ರುವನಾರಾಯಣ ಇಂದು ನಿಧನ ಹೊಂದಿದ್ದಾರೆ.

ವೀಣಾ ಧ್ರುವನಾರಾಯಣ
ವೀಣಾ ಧ್ರುವನಾರಾಯಣ

ಮೈಸೂರು: ಕಾಂಗ್ರೆಸ್ ನಾಯಕ ಆರ್ ಧ್ರುವನಾರಾಯಣ ವಿಧಿವಶರಾಗಿ ತಿಂಗಳು ಕಳೆಯುವಷ್ಟರಲ್ಲಿ ಅವರ ಪತ್ನಿ ವೀಣಾ ಧ್ರುವನಾರಾಯಣ ಅವರು ನಿಧನ ಹೊಂದಿದ್ದಾರೆ. ಕ್ಯಾನ್ಸರ್​ನಿಂದ ಬಳಲುತ್ತಿದ್ದ ವೀಣಾ ಅವರು ಮೈಸೂರಿನ ವಿಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 20 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದರು.

ಕಳೆದ 28 ದಿನಗಳ ಹಿಂದೆ ಮಾರ್ಚ್​ 11 ರಂದು ಬೆಳಗ್ಗೆ ಹೃದಯಾಘಾತದಿಂದ ಮಾಜಿ ಸಂಸದ ದೃವನಾರಾಯಣ್ ನಿಧನರಾಗಿದ್ದು, ಇಂದು ಅವರ ಪತ್ನಿ 54 ವರ್ಷದ ವೀಣಾ ವಿಧಿವಶರಾಗಿದ್ದಾರೆ. ಇವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಆಸ್ಪತ್ರೆಯಲ್ಲೇ ನಿಧನರಾಗಿದ್ದು.

ಧ್ರುವನಾರಾಯಣ ಅವರು ಅಕ್ಕನ ಮಗಳಾಗಿದ್ದ ವೀಣಾ ಅವರನ್ನು ವಿವಾಹವಾಗಿದ್ದರು. ಬಿಎಸ್​​ಸಿ ವ್ಯಾಸಂಗ ಮಾಡಿದ್ದ ವೀಣಾ ಕಳೆದ 16 ವರ್ಷಗಳಿಂದ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ರಾಜಕೀಯ ಜೊತೆಗೆ ಪತ್ನಿಯ ಆರೋಗ್ಯ ಕಡೆ ಗಮನಹರಿಸಿ ನೈತಿಕ ಸ್ಥೈರ್ಯವನ್ನು ಧ್ರುವನಾರಾಯಣ ತುಂಬುತ್ತಿದ್ದರು. ಆದ್ರೆ ಪತಿ ಅಗಲಿಕೆಯ ಬಳಿಕ ವೀಣಾ ಅವರು ತೀವ್ರವಾಗಿ ನೊಂದುಕೊಂಡಿದ್ದರು.

ಇದನ್ನೂ ಓದಿ: ಮಣ್ಣಲ್ಲಿ-ಮಣ್ಣಾದ ಧ್ರುವನಾರಾಯಣ: ಜನನಾಯಕನಿಗೆ ಅಶೃತರ್ಪಣ, ಸ್ನೇಹಿತನಿಗೆ ಹೆಗಲು ಕೊಟ್ಟ ಡಿಕೆಶಿ

ವಿಜಯನಗರದ ಮನೆಯಲ್ಲಿ ವೀಣಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ವೇಳೆಗೆ ಧ್ರುವನಾರಾಯಣ್ ಅವರ ಚಾಮರಾಜನಗರ ಜಿಲ್ಲೆಯ ಹುಟ್ಟೂರು ಹೆಗ್ಗವಾಡಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಪತಿ ಆರ್ ಧ್ರುವನಾರಾಯಣ ಅವರ ಸಮಾಧಿಯ ಪಕ್ಕದಲ್ಲೇ ಅಂತ್ಯಸಂಸ್ಕಾರ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ದೆಹಲಿಯಿಂದ ಕೈ ನಾಯಕರು ಬರುವ ಹಿನ್ನೆಲೆಯಲ್ಲಿ ಮೈಸೂರಿನ ನಿವಾಸದಲ್ಲೇ ಸಂಜೆವರೆಗೂ ಅಂತಿಮ ದರ್ಶನ ಇರಲಿದ್ದು, ಬಳಿಕ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮಕ್ಕೆ ಪಾರ್ಥಿವ ಶರೀರ ತರಲಾಗುತ್ತದೆ.

ನಂಜನಗೂಡಿನ ಕಾಂಗ್ರೆಸ್ ಅಭ್ಯರ್ಥಿಯಾದ ದರ್ಶನ್ ಧ್ರುವನಾರಾಯಣ:ತಂದೆ ಧ್ರುವನಾರಾಯಣ ನಿಧನದಿಂದ ಅವರ ಪುತ್ರ ದರ್ಶನ್ ಧ್ರುವನಾರಾಯಣಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಿದೆ. ಈಗಾಗಲೇ ನಂಜನಗೂಡಿನ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿರುವ ದರ್ಶನ್ ದೃವನಾರಾಯಣಗೆ ತಂದೆ ಸಾವಿನ ನಂತರ 28 ದಿನಗಳಲ್ಲೇ ತಾಯಿ ವೀಣಾ ಸಾವನ್ನಪ್ಪಿದ್ದು ಆಘಾತ ಉಂಟು ಮಾಡಿದೆ.

ಸಂತಾಪ ಸೂಚಿಸಿದ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ :ವೀಣಾ ಧ್ರುವನಾರಾಯಣ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ. ಇಂದು ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿದ್ದ ವಿಧಾನ ಪರಿಷತ್ ಸದಸ್ಯ ಹೆಚ್ ‌ವಿಶ್ವನಾಥ್ ಅವರು ವೀಣಾ ಧ್ರುವನಾರಾಯಣ್ ನಿಧನದಿಂದ ಪತ್ರಿಕಾಗೋಷ್ಠಿ ರದ್ದು ಪಡಿಸಿ, ಸಂತಾಪ ಸೂಚಿಸಿದರು. ದರ್ಶನ್ ಧ್ರುವನಾರಾಯಣ ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಅವರನ್ನು ಜನರೇ ತಂದೆ ತಾಯಿಯಾಗಿ ಆಶೀರ್ವಾದ ಮಾಡಬೇಕೆಂದು ಸಂತಾಪದಲ್ಲಿ ತಿಳಿಸಿದರು.

ಇದನ್ನೂ ಓದಿ:ಹೀಗಿದೆ ಬೆಂಗಳೂರು ನಗರದ 28 ಕ್ಷೇತ್ರಗಳ ಚಿತ್ರಣ: ಪಕ್ಷಗಳ ಬಲಾಬಲ ಎಷ್ಟಿದೆ ಗೊತ್ತಾ?

Last Updated : Apr 7, 2023, 12:04 PM IST

ABOUT THE AUTHOR

...view details