ಕರ್ನಾಟಕ

karnataka

By ETV Bharat Karnataka Team

Published : Jan 3, 2024, 11:10 PM IST

ETV Bharat / state

ನಂಜನಗೂಡು ಬಂದ್​ಗೆ ಅನುಮತಿ ನೀಡಿಲ್ಲ: ತಹಶೀಲ್ದಾರ್ ಶಿವಪ್ರಸಾದ್ ಸ್ಪಷ್ಟನೆ

ನಂಜನಗೂಡಿನಲ್ಲಿ ಅಂಧಕಾಸುರ ಸಂಹಾರ ವೇಳೆ ನಡೆದ ಸಂಘರ್ಷ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಂತೆ ಶ್ರೀಕಂಠೇಶ್ವರ ಭಕ್ತರು ಕರೆ ಕೊಟ್ಟಿರುವ ಬಂದ್​ಗೆ ಅನುಮತಿ ನೀಡಿಲ್ಲ ಎಂದು ತಹಶೀಲ್ದಾರ್ ಶಿವಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ತಹಶೀಲ್ದಾರ್ ಶಿವಪ್ರಸಾದ್
ತಹಶೀಲ್ದಾರ್ ಶಿವಪ್ರಸಾದ್

ನಂಜನಗೂಡು ಬಂದ್​ಗೆ ಅನುಮತಿ ನೀಡಿಲ್ಲ

ಮೈಸೂರು : ನಾಳೆ ನಂಜನಗೂಡು ಬಂದ್​ಗೆ ಶ್ರೀಕಂಠೇಶ್ವರ ಭಕ್ತ ಮಂಡಳಿಯಿಂದ ಕರೆ ನೀಡಲಾಗಿತ್ತು. ನಾವು ನಂಜನಗೂಡು ಬಂದ್​ಗೆ ಅನುಮತಿ ನೀಡಿಲ್ಲ ಎಂದು ತಹಶೀಲ್ದಾರ್ ಶಿವಪ್ರಸಾದ್ ಹೇಳಿದರು.

ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ನಂಜನಗೂಡು ಬಂದ್ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ಬಿತ್ತಿ ಪತ್ರಗಳಲ್ಲಿ ಹರಿದಾಡುತ್ತಿರುವುದು ಕಂಡು ಬಂದಿದೆ. ಬಂದ್ ಮಾಡುತ್ತಿರುವ ಬಗ್ಗೆ ಯಾವುದೇ ಮನವಿ ನಮಗೆ ಬಂದಿಲ್ಲ ಹಾಗೂ ನಾವು ಯಾರಿಗೂ ಕೂಡ ಅನುಮತಿಯನ್ನು ಕೂಡ ನೀಡಿಲ್ಲ. ಎಂದಿನಂತೆ ನಾಳೆ ಸಾರಿಗೆ ಬಸ್​ಗಳ ಸಂಚಾರ ಇರುತ್ತದೆ. ಶಾಲಾ ಕಾಲೇಜುಗಳು ಅಂಗಡಿ ಮುಂಗಟ್ಟುಗಳು ಎಲ್ಲವೂ ಇರುತ್ತದೆ. ಒಂದು ವೇಳೆ ನಾಳೆ ಬಂದ್ ಮಾಡಿದರೆ ಕಾನೂನು ರೀತಿ ಪೊಲೀಸರು ಕ್ರಮವನ್ನು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಬಂದ್​ಗೆ ಸಹಕಾರ ಕೊಡಬೇಡಿ :ಇದೇ ವೇಳೆ ಮಾತನಾಡಿದಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಅವರು, ಸಾಮಾಜಿಕ ಜಾಲತಾಣದಲ್ಲಿ ಬರುವ ವದಂತಿಗಳಿಗೆ ಕಿವಿಗೊಡಬೇಡಿ. ನಾಳಿನ ನಂಜನಗೂಡು ಬಂದ್​ಗೆ ಸಹಕಾರ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

ನಂಜನಗೂಡು ಬಂದ್​ಗೆ ಕಾರಣವೇನು? :ಇತ್ತೀಚೆಗೆನಂಜನಗೂಡು ನಗರದಲ್ಲಿರುವ ಪ್ರಸಿದ್ಧ ದಕ್ಷಿಣ ಕಾಶಿ ಶ್ರೀ ಕಂಠೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿತ್ತು. ಅಂಧಕಾಸುರನ ಸಂಹಾರವನ್ನು ಆಚರಿಸಲಾಗುತ್ತಿತ್ತು. ಈ ವೇಳೆ ಶ್ರೀ ನಂಜುಂಡೇಶ್ವರ ಸ್ವಾಮಿಯ ಭಕ್ತರು ಹಾಗೂ ಪ್ರಗತಿಪರರ ಚಿಂತಕರ ನಡುವೆ ವಾಗ್ಯುದ್ಧ ನಡೆದಿತ್ತು. ಈ ಕುರಿತು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ 6 ಜನರ ಮೇಲೆ ಪ್ರಕರಣ ದಾಖಲಾಗಿದೆ. ಆದರೇ ಘಟನೆ ನಡೆದ ಮೇಲೆ ಕಿಡಿಗೇಡಿಗಳನ್ನು ಪೊಲೀಸರು ಇಲ್ಲಿಯವರೆಗೂ ಬಂಧಿಸಿಲ್ಲ. ಹೀಗಾಗಿ ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಶ್ರೀಕಂಠೇಶ್ವರ ಭಕ್ತರು ಮಾತ್ರ ನಾಳೆ (ಜನವರಿ 4) ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಂಜನಗೂಡು ನಗರ ಬಂದ್​ಗೆ ಕರೆ ನೀಡಿದ್ದು, ಸ್ವಯಂ ಪ್ರೇರಿತರಾಗಿ ವಿವಿಧ ಸಂಘಟನೆಗಳು ಈ ಬಂದ್​ಗೆ ಬೆಂಬಲ ವ್ಯಕ್ತಪಡಿಸಿವೆ.

ಶಾಸಕರು ನಡೆಸಿದ ಸಭೆ ವಿಫಲ :ಇದಕ್ಕೂ ಮುನ್ನಗುರುವಾರ ನಂಜನಗೂಡು ಬಂದ್​ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಕೂಡ ಮಧ್ಯಾಹ್ನ ದೇವಸ್ಥಾನದ ಭಕ್ತರು, ವರ್ತಕರು ಹಾಗೂ ವಿವಿಧ ಸಂಘಟನೆಯ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿದರು. ಬಂದ್ ಕರೆ ನೀಡಿರುವುದರಿಂದ ಜನರಿಗೆ ತೊಂದರೆ ಆಗಲಿದ್ದು, ಬಂದ್ ನಡೆಸದಂತೆ ಶಾಸಕರು ಮನವಿ ಮಾಡಿದರು. ಆದರೇ ದೇವಸ್ಥಾನದ ಭಕ್ತರು ಆರೋಪಿಗಳನ್ನು ಬಂಧಿಸಿ, ಇಲ್ಲವೆಂದರೆ ಬಂದ್ ನಡೆಸುತ್ತೇವೆ ಎಂದು ಪಟ್ಟು ಹಿಡಿದರು. ಹೀಗಾಗಿ ಇಂದಿನ ಶಾಂತಿ ಸಭೆ ವಿಫಲವಾಗಿದೆ.

ಇದನ್ನೂ ಓದಿ :ಸಂಘರ್ಷ ಪ್ರಕರಣ; ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಾಳೆ ನಂಜನಗೂಡಲ್ಲಿ ಸ್ವಯಂ ಪ್ರೇರಿತ ಬಂದ್

ABOUT THE AUTHOR

...view details