ಮೈಸೂರು:ಜೆಡಿಎಸ್ಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟಿರುವುದಕ್ಕೆ ಕಾಂಗ್ರೆಸ್ ಸದಸ್ಯರಲ್ಲಿಯೇ ಅಸಮಾಧಾನ ಸ್ಫೋಟಗೊಂಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ತನ್ವೀರ್ ಸೇಠ್ ಪರ-ವಿರೋಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು ತುರ್ತು ಮಾಧ್ಯಮಗೊಷ್ಠಿ ಕರೆದು ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಮೇಯರ್, ಹಾಲಿ ಸದಸ್ಯ ಅಯೂಬ್ ಖಾನ್ ಮಾತನಾಡಿ, ಮೇಯರ್ ಚುನಾವಣೆಯಲ್ಲಿ ಶಾಸಕ ತನ್ವೀರ್ ಸೇಠ್ ತೆಗೆದುಕೊಂಡ ತೀರ್ಮಾನಕ್ಕೆ ನಾವೆಲ್ಲರೂ (ಪಾಲಿಕೆ ಸದಸ್ಯರು) ಬದ್ಧರಾಗಿದ್ದೇವೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಳಸಂಚಿನ ಬಗ್ಗೆ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಾಧ್ಯಮಗೊಷ್ಠಿ ನಡೆಸಿದ ಮೈಸೂರು ಕಾಂಗ್ರೆಸ್ ನಾಯಕರು ಓದಿ: ಮೈಸೂರು ನೂತನ ಮೇಯರ್ ರುಕ್ಮಿಣಿ ಸದಸ್ಯತ್ವ ರದ್ದು ಪ್ರಕರಣ: ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್
ಮಾಜಿ ಮೇಯರ್, ಹಾಲಿ ಸದಸ್ಯ ಆರೀಫ್ ಹುಸೇನ್ ಮಾತನಾಡಿ, ಸಿದ್ದರಾಮಯ್ಯನವರ ವಿರುದ್ಧ ಘೋಷಣೆ ಕೂಗಿದವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ಅಲ್ಪಸಂಖ್ಯಾತರು ತಲೆ ಎತ್ತಿ ತಿರುಗಾಡಲು ಸಿದ್ದರಾಮಯ್ಯನವರು ನೀಡಿದ ಕೊಡುಗೆ ಇದೆ. ನಾವೆಲ್ಲಾ ಸಿದ್ದರಾಮಯ್ಯನವರ ಪರವಾಗಿ ನಿಲ್ಲುತ್ತೇವೆ. ಮೇಯರ್ ಚುನಾವಣೆಯಲ್ಲಿ ಪಿತೂರಿ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಮಾತಮಾಡಿ, ಪಕ್ಷದ ವಿರುದ್ಧ ಚಟುವಟಿಕೆ ಮಾಡಿದ ವ್ಯಕ್ತಿಗಳಿಗೆ ನೋಟಿಸ್ ಕೊಟ್ಟು ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಹೆಚ್.ಡಿ.ಕುಮಾರಸ್ವಾಮಿಯವರು ಕಾಂಗ್ರೆಸ್ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಹೇಳಿದರು.