ಕರ್ನಾಟಕ

karnataka

By ETV Bharat Karnataka Team

Published : Nov 16, 2023, 7:00 PM IST

ETV Bharat / state

ಮೈಸೂರು ಮಹಾನಗರ ಪಾಲಿಕೆ ಆಡಳಿತಾವಧಿ ಮುಕ್ತಾಯ: ಪಾಲಿಕೆ ಆಡಳಿತಾಧಿಕಾರಿ ನೇಮಕಕ್ಕೆ ಕ್ಷಣಗಣನೆ

mysore municipal corporation: ಮೈಸೂರು ಮಹಾನಗರ ಪಾಲಿಕೆ ಆಡಳಿತಾವಧಿ ಮುಕ್ತಾಯಗೊಂಡಿದೆ.

ಮೈಸೂರು ಮಹಾನಗರ ಪಾಲಿಕೆ
ಮೈಸೂರು ಮಹಾನಗರ ಪಾಲಿಕೆ

ಮೈಸೂರು :ಮೈಸೂರು ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರ 5 ವರ್ಷದ ಆಡಳಿತಾವಧಿ ಇಂದು ಮುಕ್ತಾಯಗೊಂಡಿದ್ದು, ಚುನಾವಣೆ ನಡೆಸುವ ಹೊಣೆ ಸರ್ಕಾರದ ಮೇಲಿದೆ. ಅಲ್ಲಿಯವರೆಗೂ ಸರ್ಕಾರ ಪಾಲಿಕೆಗೆ ಆಡಳಿತಾಧಿಕಾರಿ ನಿಯೋಜನೆ ಮಾಡುವ ಸಾಧ್ಯತೆ ಇದೆ.

ಕಳೆದ ಬಾರಿ 2018ರ ಮೈಸೂರು ಮಹಾನಗರ ಪಾಲಿಕೆ ಚುನಾವಣೆ ನಡೆದು 65 ಸದಸ್ಯರು ಆಯ್ಕೆಯಾಗಿ ಆಯುಕ್ತರ ಕಚೇರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಅಧಿಕಾರಕ್ಕೆ ಬಂದ ದಿನದಿಂದ ಪ್ರಸಕ್ತ ವರ್ಷದ ನವೆಂಬರ್ 16ಕ್ಕೆ ಚುನಾಯಿತ ಸದಸ್ಯರ ಐದು ವರ್ಷಗಳ ಅಧಿಕಾರ ಮುಕ್ತಾಯವಾಗಲಿದ್ದು, ಪ್ರಸಕ್ತ ವರ್ಷವಾದ 2023 ರಲ್ಲಿ ಮೈಸೂರು ಮಹಾನಗರ ಪಾಲಿಕೆ ಚುನಾವಣೆ ನಡೆಯಬೇಕಿದ್ದು, ಚುನಾವಣೆ ಆಗುವವರೆಗೂ ಆಡಳಿತಾಧಿಕಾರಿಯನ್ನು ಸರ್ಕಾರ ಯಾವುದೇ ಕ್ಷಣದಲ್ಲಾದರೂ ನೇಮಿಸಲಿದೆ.

2018ರಲ್ಲಿ ನಡೆದ ಪಾಲಿಕೆಯ ಚುನಾವಣೆಯಲ್ಲಿ ಒಟ್ಟು 65 ಸದಸ್ಯರು ಆಯ್ಕೆಯಾಗಿದ್ದರು. ಆದರೆ, ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಅವಧಿಯಲ್ಲಿ ಮೂರು ಪಕ್ಷಗಳು ರಾಜಕೀಯ ಹೊಂದಾಣಿಕೆ ಮಾಡಿಕೊಂಡು, ಅಧಿಕಾರ ನಡೆಸಿದ್ದು ವಿಶೇಷವಾಗಿತ್ತು.

ಮೊದಲ ಅವಧಿಗೆ ಕಾಂಗ್ರೆಸ್​ನ ಪುಷ್ಪಲತಾ ಜಗನ್ನಾಥ್, ತದನಂತರ ಜನತಾದಳದ ತಸ್ನಿಂ, ಬಳಿಕ ಮತ್ತೆ ಜನತಾದಳದ ರುಕ್ಮಿಣಿ, ನಂತರ ಕಾಂಗ್ರೆಸ್​ನ ಅನ್ವರ್ ಬೇಗ್ ಮಹಾಪೌರರಾಗಿದ್ದರು. ನಂತರ 2021 ರ ಆ. 15 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಮೊಟ್ಟಮೊದಲ ಬಾರಿಗೆ ಅಧಿಕಾರ ಹಿಡಿಯುವ ಮೂಲಕ ಸುನಂದ ಪಾಲನೇತ್ರ ಅವರು ಮಹಾಪೌರರಾಗಿದ್ದರು. 2022 ರ ಸೆಪ್ಟೆಂಬರ್ 6 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ಶಿವಕುಮಾರ್ ಅವರು ಮಹಾಪೌರರಾದರು.

ಆಡಳಿತಾಧಿಕಾರಿಯಾಗಿ ಡಿಸಿ ನೇಮಕ ಸಾಧ್ಯತೆ : ಪಾಲಿಕೆಯ ಚುನಾಯಿತ ಸದಸ್ಯರ ಆಡಳಿತಾವಧಿ ಮುಗಿದಿರುವುದಿಂದ ಜೊತೆಗೆ ನಗರ ಪಾಲಿಕೆ ಚುನಾವಣೆ ನಡೆಯುವವರೆಗೂ ಆಡಳಿತಾಧಿಕಾರಿ ನೇಮಕ ಮಾಡಬೇಕಿದೆ. ಹೀಗಾಗಿ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಲು ಕ್ಷಣಗಣನೆ ಆರಂಭವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಈಗಾಗಲೇ ಜಿಲ್ಲಾಧಿಕಾರಿಯವರನ್ನೇ ಅಧ್ಯಕ್ಷರನ್ನಾಗಿ ನಿಯೋಜಿಸಿರುವ ಕಾರಣ, ಪಾಲಿಕೆಗೂ ಆಡಳಿತಾಧಿಕಾರಿಯನ್ನಾಗಿ ನೇಮಿಸುವ ಸಾಧ್ಯತೆ ಇದೆ. ಅಥವಾ ಅವರ ಬದಲು ಪ್ರಾದೇಶಿಕ ಆಯುಕ್ತರನ್ನು ನೇಮಿಸುವ ಸಾಧ್ಯತೆ ಸಹ ಇದೆ.

ಸರ್ಕಾರದ ಮುಂದಿದೆ ಪಾಲಿಕೆ ಚುನಾವಣಾ ಚೆಂಡು - ಸ್ಪರ್ಧೆಗೆ ಹಲವರ ಕಸರತ್ತು:ಮೈಸೂರು ಮಹಾನಗರ ಪಾಲಿಕೆ ಚುನಾಯಿತ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಂಡಿದೆ. ಹೀಗಾಗಿ ಪಾಲಿಕೆ ಚುನಾವಣೆ ಜವಾಬ್ದಾರಿ ಸರ್ಕಾರದ ಮುಂದಿದೆ. ಮುಂದಿನ ಡಿಸೆಂಬರ್​ ಒಳಗೆ ಚುನಾವಣೆ ನಡೆಸುತ್ತೇವೆ ಎಂದು ಸಿಎಂ ಹಾಗೂ ನಗರಾಭಿವೃದ್ಧಿ ಸಚಿವರು ಹೇಳಿದ್ದರು. ಇದನ್ನು ಚುನಾವಣಾ ಆಯೋಗ ಅಂತಿಮವಾಗಿ ನಿರ್ಧರಿಸಬೇಕಿದೆ. ರಾಜ್ಯ ಚುನಾವಣಾ ಆಯೋಗ 45 ದಿನಗಳ ಮೊದಲು ಚುನಾವಣೆ ನಡೆಸುವ ಬಗ್ಗೆ ಮತದಾರರ ಪಟ್ಟಿ ಸೇರಿ ಅಧಿಸೂಚನೆ ಹೊರಡಿಸಬೇಕಿದೆ. ರಾಜ್ಯ ಸರ್ಕಾರ 65 ವಾರ್ಡ್​ಗಳಿಗೆ ಸೀಮಿತಗೊಳಿಸಿ, ರೊಟೇಷನ್ ಆಧಾರದ ಮೇಲೆ ಮೀಸಲಾತಿ ಬದಲಾಯಿಸಿ, ಚುನಾವಣೆ ನಡೆಸಲಿದೆಯೇ ಅಥವಾ ಹಾಲಿ ಮೀಸಲಾತಿಯನ್ನೇ ಮುಂದುವರಿಸಲಿದೆಯೇ ಎಂಬುದು ಗೊತ್ತಾಗಬೇಕಿದೆ.

ಈಗಿರುವ ಹಾಲಿ ಮೀಸಲಾತಿಯಲ್ಲೇ ಚುನಾವಣೆ ನಡೆದರೂ ಅಥವಾ ಬದಲಾದರೂ ಸ್ಪರ್ಧೆಗೆ ಅನೇಕರು ಸಿದ್ಧತೆ ನಡೆಸುತ್ತಿದ್ದಾರೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಪರಾಭವಗೊಂಡವರು ಸಹ ಈ ಬಾರಿ ಟಿಕೆಟ್ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಇದೇ ಹುಮ್ಮಸ್ಸಿನಲ್ಲಿ ಪ್ರಮುಖ ಮುಖಂಡರನ್ನು ಭೇಟಿ ಮಾಡಿ ಟಿಕೆಟ್​ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿ ಟಿಕೆಟ್​ ಮಿಸ್ ಆದವರು ಸಹ ಈ ಬಾರಿ ರೇಸ್​ನಲ್ಲಿ ಇದ್ದು, ಟಿಕೆಟ್​ ದೊರೆಯದೇ ಇದ್ದಲ್ಲಿ ಬೇರೆ ಪಕ್ಷ ಸೇರಲು ತೆರೆಮರೆಯಲ್ಲೇ ಮಾತುಕತೆ ನಡೆಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.

ಸಿಎಂ ತವರು ಜಿಲ್ಲೆಯಲ್ಲಿ ಚುನಾವಣೆಗೆ ಸಿದ್ದತೆ : ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ, ಜೆಡಿಎಸ್ ರಾಜ್ಯದಲ್ಲಿ ಮೈತ್ರಿ ಇದ್ದು. ಈ ಮೈತ್ರಿ ಮುಂದೆ ಮೈಸೂರು ಮಹಾನಗರ ಪಾಲಿಕೆಯ ಚುನಾವಣೆಗೆ ಅನ್ವಯಿಸುತ್ತದೆಯೇ ಅಥವಾ ಇಲ್ಲವೇ ಎಂಬುದು ಸದ್ಯಕ್ಕೆ ನಿಗೂಢವಾಗಿದೆ. ಈ ಮಧ್ಯೆ ಈ ಬಾರಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಪಾಲಿಕೆಯ ಅಧಿಕಾರ ಹಿಡಿಯಬೇಕು ಎಂಬ ಪ್ರಯತ್ನವೂ ನಡೆಯುತ್ತಿದೆ.

ಈ ಮಧ್ಯೆ ಮೈಸೂರು ನಗರದ ಪ್ರಭಾವಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಮೀಸಲಾತಿ ಬದಲಾವಣೆಗೆ ಕಾಯುತ್ತಿದ್ದು. ಏನಾದರೂ ವಾರ್ಡ್ ಮೀಸಲಾತಿ ಬದಲಾದರೆ ಅಥವಾ ಹಳೆಯ ವಾರ್ಡ್ ಮೀಸಲಾತಿ ಮುಂದುವರಿದರೆ ಸ್ಪರ್ಧೆ ಹೇಗೆ ಎಂಬ ಲೆಕ್ಕಾಚಾರ ಈಗಾಗಲೇ ಆರಂಭವಾಗಿದೆ. ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್ ಕಳೆದ ವಾರ ಮೈಸೂರಿಗೆ ಆಗಮಿಸಿದ ವೇಳೆ ಜನವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇದಕ್ಕಾಗಿ ಸಿದ್ಧತೆಗಳು ಆರಂಭವಾಗಿದೆ ಎಂಬ ಹೇಳಿಕೆ ನೀಡಿರುವುದು, ವಾರ್ಡ್ ಆಕಾಂಕ್ಷಿಗಳ ಚಟುವಟಿಕೆಗಳನ್ನು ಚುರುಕುಗೊಳಿಸಿದೆ.

ಒಟ್ಟಾರೆ ಈ ಬಾರಿಯ ಪಾಲಿಕೆಯ ಚುನಾವಣಾ ಕಾರ್ಪೊರೇಟರ್​ಗಳ ಅಧಿಕಾರವಧಿ ಇಂದು ಮುಕ್ತಾಯವಾಗಿದೆ. ಮುಂದಿನ ಪಾಲಿಕೆ ಚುನಾವಣೆವರೆಗೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ಆಡಳಿತಾಧಿಕಾರಿಗಳ ನೇಮಕವನ್ನು ಸರ್ಕಾರ ಮಾಡಲಿದೆ.

ಇದನ್ನೂ ಓದಿ :ಸಾರ್ವಜನಿಕ ಸ್ಥಳಗಳಲ್ಲಿ ದನಗಳನ್ನು ಬಿಡದಂತೆ ಮೈಸೂರು ಪಾಲಿಕೆ ಖಡಕ್ ಸೂಚನೆ

ABOUT THE AUTHOR

...view details