ಕರ್ನಾಟಕ

karnataka

By

Published : Apr 5, 2023, 7:38 PM IST

ETV Bharat / state

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತು ಫಲಕ, ಹೋರ್ಡಿಂಗ್ಸ್, ಗೋಡೆಬರಹಗಳಿಗೆ ನಿಷೇಧ

ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತು ಫಲಕ, ಹೋರ್ಡಿಂಗ್ಸ್, ಬಂಟಿಂಗ್ಸ್, ಫ್ಲೆಕ್ಸ್, ಭಿತ್ತಿಪತ್ರ, ಕಟೌಟ್, ಗೋಡೆಬರಹಗಳಿಗೆ ನಿಷೇಧ ಹೇರಲಾಗಿದೆ.

Mysore Metropolitan Corporation
ಮೈಸೂರು ಮಹಾನಗರ ಪಾಲಿಕೆ

ಮೈಸೂರು:ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತು ಫಲಕ, ಹೋರ್ಡಿಂಗ್ಸ್, ಬಂಟಿಂಗ್ಸ್, ಫ್ಲೆಕ್ಸ್, ಭಿತ್ತಿಪತ್ರ, ಕಟೌಟ್, ಗೋಡೆಬರಹಗಳನ್ನು ನಿಷೇಧಿಸಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಹಾಗೂ The Karnataka Open Places (Prevention Of Disfigurement) Act-1981 ಮತ್ತು ಕರ್ನಾಟಕ ಪೌರ ನಿಗಮಗಳ ಕಾಯ್ದೆ 1976 ಪ್ರಕರಣ 135ರ ಪ್ರಕಾರ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಅಥವಾ ಇನ್ನಿತರೇ ಯಾವುದೇ ರೀತಿ ಜಾಹೀರಾತು ಫಲಕ, ಹೋರ್ಡಿಂಗ್ಸ್, ಬಂಟಿಂಗ್ಸ್, ಫ್ಲೆಕ್ಸ್, ಭಿತ್ರಿಪತ್ರ, ಕಟೌಟ್, ಬ್ಯಾನರ್, ಗೋಡೆಬರಹ ಇವುಗಳನ್ನು ಹಾಕುವುದು ಹಾಗೂ ಅಂಟಿಸುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಈ ತಕ್ಷಣದಿಂದ ಜಾರಿಗೆ ಬರುವಂತೆ ಮೈಸೂರು ಮಹಾನಗರ ಪಾಲಿಕೆಯಿಂದ ಆದೇಶ ಹೊರಡಿಸಲಾಗಿದೆ.

ಅನಧಿಕೃತವಾಗಿ ಬ್ಯಾನರ್ ಹಾಕಿದರೆ ಕಾನೂನು ಕ್ರಮ:ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಈಗಾಗಲೇ ಅನುಮತಿ ಪಡೆದಿರುವ ಅಧಿಕೃತ ಸ್ಥಳಗಳನ್ನು ಹೊರತುಪಡಿಸಿ, ಉಳಿದ ಯಾವುದೇ ಸ್ಥಳದಲ್ಲಿ ಚುನಾವಣೆಗೆ ಸಂಬಂಧಿಸಿದ ಅಥವಾ ಇನ್ನಿತರೇ ಯಾವುದೇ ರೀತಿ ಜಾಹೀರಾತು ಫಲಕ, ಹೋರ್ಡಿಂಗ್ಸ್, ಬಂಟಿಂಗ್ಸ್, ಭಿತ್ತಿಪತ್ರ, ಕಟೌಟ್, ಗೋಡೆಬರಹ, ಬ್ಯಾನರ್‌ಗಳನ್ನು ಹಾಕುವಂತಿಲ್ಲ. ಒಂದು ವೇಳೆ ಮೇಲ್ಕಂಡ ನಿಯಮಗಳನ್ನು ಉಲ್ಲಂಘಿಸಿ ನಗರ ಪ್ರದೇಶದ ಯಾವುದೇ ಸ್ಥಳದಲ್ಲಿ (ಅಧಿಕೃತ ಸ್ಥಳ ಬಿಟ್ಟು) ಅನಧಿಕೃತವಾಗಿ ಬ್ಯಾನರ್ ಹಾಕಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ.1ಕ್ಕೆ ನಗದು, ವಸ್ತುಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು:ಕರ್ನಾಟಕ ವಿಧಾನಸಭೆ 2023ರ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ನೀತಿ ಸಂಹಿತೆ ಜಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಚೆಕ್​ ಪೋಸ್ಟ್​​ಗಳಲ್ಲಿ ಪೊಲೀಸರು ಫುಲ್​ ಅಲರ್ಟ್ ಆಗಿದ್ದಾರೆ. ಇದರ ನಡುವೆ ರಾಜ್ಯದ ಹಲವು ಚೆಕ್​ ಪೋಸ್ಟ್​​ಗಳಲ್ಲಿ ಅಕ್ರಮವಾಗಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಗದು ಮತ್ತು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದ ಸನ್‌ಪ್ಯೂರ್ ಗಾರ್ಡನ್ ಲೇಔಟ್‌ನ ಮನೆಯೊಂದರ ಗೋದಾಮಿನ ಮೇಲೆ ದಾಳಿ ನಡೆಸಿದ ಫ್ಲೈಯಿಂಗ್ ಸ್ಕ್ವಾಡ್ ತಂಡ 19 ಲಕ್ಷ ಮೌಲ್ಯದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿತ್ತು.

ಏ.1ರಂದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಫ್ಲೈಯಿಂಗ್ ಸ್ಕ್ವಾಡ್ ತಂಡವು, 26 ಕೆಜಿ ತೂಕದ 732 ಅಕ್ಕಿ ಚೀಲಗಳು, ಆಹಾರ ಪದಾರ್ಥಗಳಾದ ಎಣ್ಣೆ, ಸೋಪು, ರವೆ, ಪೇಸ್ಟ್ ಹಾಗೂ ಇತರೆ ಆಹಾರ ಸಾಮಾಗ್ರಿಗಳ ಒಟ್ಟು 722 ಕಿಟ್ ಬ್ಯಾಗ್‌ಗಳು, ಸನ್‌ಪ್ಯೂರ್ ಕಂಪನಿಗೆ ಸೇರಿದ ಅಡಿಗೆ ಎಣ್ಣೆಯ ತಲಾ 10 ಪೌಚ್‌ಗಳಿರುವ 146 ಬಾಕ್ಸ್‌ಗಳು, ಸನ್‌ಪ್ಯೂರ್ ಕಂಪನಿಯ ವನಸ್ಪತಿ ತಲಾ 10 ಪೌಚ್‌ಗಳಿರುವ 72 ಬಾಕ್ಸ್‌ಗಳು, ಹಂದಾರ್ಡ್ ಕಂಪನಿಯ ತಲಾ 12 ಬಾಟಲಿಗಳಿರುವ ಶರ್‌ಬತ್‌, 60 ಜ್ಯೂಸ್ ಬಾಕ್ಸ್ ಗಳನ್ನು ಶೇಖರಿಸಿಟ್ಟಿದ್ದು, ಈ ದಾಸ್ತಾನುಗಳ ಮೌಲ್ಯ 19,69,647 ಲಕ್ಷ ರೂ. ಎಂದು ಅಂದಾಜಿಸಲಾಗಿತ್ತು.

ಸಿಎಸ್‌ಆರ್ ಫಂಡ್ ಮುಖಾಂತರ ಮಾಸೂಮ್ ಟ್ರಸ್ಟ್‌ಗೆ ಈ ದಾಸ್ತಾನುಗಳು ಬಂದಿದ್ದು, ಬಡ ಕುಟುಂಬಗಳಿಗೆ ಹಂಚಿಕೆ ಮಾಡಲು ಇಟ್ಟಿಕೊಂಡಿರುವುದಾಗಿ ದಾಸ್ತಾನುದಾರರು ತಿಳಿಸಿದ್ದರು. ಆದರೆ, ಈ ಸಂಬಂಧ ಸೂಕ್ತ ದಾಖಲಾತಿಗಳು ಇರಲಿಲ್ಲ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಸೂಚನೆಯ ಮೇರೆಗೆ ಫ್ಲೈಯಿಂಗ್ ಸ್ಕ್ವಾಡ್ ತಂಡದವರು ದಾಳಿ ಮಾಡಿ, ಸಾಮಗ್ರಿಗಳನ್ನು ಜಪ್ತಿ ಮಾಡಿರುವ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದರು.

ಇದನ್ನೂ ಓದಿ:ಬಿಜೆಪಿಗೆ ನಟ ಸುದೀಪ್‌ ಬೆಂಬಲ: ಕೇಸರಿ ಪಕ್ಷದ ಲೆಕ್ಕಾಚಾರವೇನು?

ABOUT THE AUTHOR

...view details