ಕರ್ನಾಟಕ

karnataka

By

Published : Jun 16, 2023, 11:08 AM IST

ETV Bharat / state

ಹುಣಸೂರಿನಲ್ಲಿದೆ 250 ವರ್ಷಗಳ ಹಿಂದಿನ ಬ್ರಿಟಿಷರ ಗೋರಿಗಳು.. ಇಂದಿಗೂ ಪ್ರಚಾರಕ್ಕೆ ಬಾರದೇ ಸ್ಮಶಾನದಲ್ಲಿಯೇ ಮೌನ!

ಮೈಸೂರಿನ ಹುಣಸೂರಿನ ತಾಲೂಕಿನಲ್ಲಿ ಕುತೂಹಲ ಮೂಡಿಸುವ 250 ವರ್ಷದ ಹಳೆಯ ಬ್ರಿಟಿಷರ ಕೆಲವು ಪಾಳು ಬಿದ್ದ ಸಮಾಧಿಗಳಿದ್ದು, ಅವುಗಳ ಕುರಿತ ರೋಚಕ ಸಂಗತಿಗಳು ಇಲ್ಲಿವೆ ನೋಡಿ.

British tombs
ಪಾಳು ಬಿದ್ದಿರುವ ಗೋರಿಗಳು

ಮೈಸೂರು : ಬ್ರಿಟಿಷರು ಮೈಸೂರಿನಲ್ಲಿ ಅಧಿಪತ್ಯ ಸಾಧಿಸಿ ಹೋಗಿದ್ದರೂ, ಎಂಬುವುದಕ್ಕೆ ಇಂದಿಗೂ ಹುಡುಕಿದರೂ ಅನೇಕ ಕುರುಹುಗಳು ಸಿಗುತ್ತವೆ. ಅಂತೆಯೇ ಮೈಸೂರಿನಲ್ಲಿ 250 ವರ್ಷಗಳ ಹಿಂದಿನ ಗೋರಿಗಳು ಬೆಳಕಿಗೆ ಬಂದಿದ್ದು, ಅಚ್ಚರಿ ಮೂಡಿಸಿದೆ. ಹುಣಸೂರಿನ ತಾಲೂಕಿನ ಲಕ್ಷ್ಮಣ ತೀರ್ಥ ನದಿಯ ಕೊನೆಯ ಭಾಗದಲ್ಲಿ ಬ್ರಿಟಿಷರ ಕೆಲವು ಪಾಳು ಬಿದ್ದ ಸಮಾಧಿಗಳಿವೆ. ಅವುಗಳನ್ನು ತಕ್ಷಣಕ್ಕೆ ನೋಡಿದರೆ ಸಮಾಧಿಗಳು ಎನ್ನಲು ಸಾಧ್ಯವಿಲ್ಲ. ಹಳೆಯ ದೇವಾಲಯದ ಗೋಪುರಗಳು ಇರಬಹುದು ಎನಿಸುತ್ತವೆ. ಹತ್ತಿರ ಹೋಗಿ ನೋಡಿದರೆ ಮಾತ್ರ ಬ್ರಿಟಿಷರ ಗೋರಿಗಳು ಕಣ್ಣಿಗೆ ಇತಿಹಾಸದ ನೆನಪುಗಳನ್ನು ತರುತ್ತವೆ.

ಇಲ್ಲಿನ ಗೋರಿಗಳನ್ನು ನೋಡಲು ಹೋದರೆ ಪೊದೆ ಗಿಡಗಳು ಆವರಿಸಿಕೊಂಡಿದ್ದು, ವಿಪರೀತವಾದ ಸೊಳ್ಳೆಗಳು ಕಾಟವು ಜಾಸ್ತಿ ಇದೆ. ಕೆಟ್ಟ ವಾಸನೆಯೂ ಮೂಗಿಗೆ ಬಡಿಯುತ್ತವೆ. ಇಂತಹ ಸ್ಥಳದಲ್ಲಿ ಬ್ರಿಟಿಷರ ಗೋರಿಗಳು ಯಾರ ಕಣ್ಣಿಗೂ ಬೀಳದೇ ಇರುವುದು ಅಚ್ಚರಿ ತಂದಿದೆ. ಸುಮಾರು 250 ವರ್ಷಗಳಿಂದ ಸದ್ದಿಲ್ಲದೇ ಮಲಗಿದ್ದ ಬ್ರಿಟಿಷ್ ಸಮಾಧಿಗಳು ಇದೀಗ ಜನರ ಆಸಕ್ತಿಯನ್ನು ಕೆರಳಿಸುತ್ತಿದೆ. ಈ ಸಮಾಧಿ ಅಕ್ಕ ಪಕ್ಕದಲ್ಲಿ ವಾಸವಿ ಗೋಶಾಲೆ ಮತ್ತು ವಾಸವಿ ವಾನ ಪ್ರಸ್ತಾಶ್ರಮ ಇದೆ.

ಬ್ರಾಹ್ಮಣರ ಬೀದಿಯ ಬಳಿ ಇರುವ ಹಳೆ ಪೋಸ್ಟ್ ಆಫೀಸ್​ನ ರಸ್ತೆ ಮೂಲಕ ಸ್ವಲ್ಪ ದೂರ ಸಾಗಿದರೆ ಈ ಗೋರಿಗಳನ್ನು ಕಾಣಬಹುದು. ಆದರೆ ಸದ್ಯಕ್ಕೆ ಇವುಗಳನ್ನು ಬಹಳ ಹತ್ತಿರದಿಂದ ನೋಡಲು ಸಾಧ್ಯವಿಲ್ಲ. ಸಂಪೂರ್ಣ ಗಿಡಗಂಟೆಗಳು ಗೋರಿಯ ಕಲ್ಲುಗಳನ್ನು ಮುಚ್ಚಿಕೊಂಡಿದ್ದು, ದೂರದಿಂದ ಅಷ್ಟೋ ಇಷ್ಟು ಕಾಣಬಹುದು. ಶತಮಾನಗಳಿಂದ ಈ ಗೋರಿಗಳ ಬಗ್ಗೆ ಸ್ಥಳೀಯರಿಗೆ ಸಹ ಸರಿಯಾದ ಮಾಹಿತಿ ಇಲ್ಲ. ಅಂದಿನ ಬ್ರಿಟಿಷ್ ಮೈಸೂರು, ಹುಣಸೂರನ್ನು ಒಳಗೊಂಡಿದ್ದರಿಂದ ಇದು ಬ್ರಿಟೀಷ್ ಉನ್ನತ ಅಧಿಕಾರಗಳ ಗೋರಿಗಳು ಸಹ ಆಗಿರಬಹುದು ಎಂಬ ಸಂಶಯ ಇದೆ.

ಕೆಲವು ಗೋರಿಗಳು ಸಮತಟ್ಟವಾದ ಆಕಾರದಲ್ಲಿ ಇದ್ದರೆ ಇನ್ನು ಕೆಲವು ಗೋರಿಗಳು ವೃತ್ತಾಕಾರದಲ್ಲಿ ಮತ್ತು ಗೋಪುರಗಳ ಆಕಾರದಲ್ಲಿರುವುದು ವೈಶಿಷ್ಟ್ಯ ಪೂರ್ಣ ಎನ್ನಬಹುದು. ಒಂದೆರಡು ಗೋರಿಗಳು ಶತಮಾನಗಳ ಮಳೆ ಮತ್ತು ಬಿಸಿಲನ್ನು ತಾಳಿಕೊಂಡು ಸ್ವಲ್ಪ ಸುರಕ್ಷಿತವಾಗಿದೆ. ಕೆಲವು ಸ್ಥಳೀಯರ ಪ್ರಕಾರ ಕೊಡಗಿನ ಕಾಫಿ ತೋಟಗಳ ಮಾಲೀಕರಾಗಿದ್ದ ಕೆಲವು ಬ್ರಿಟಿಷರ ಸಮಾಧಿಗಳು ಎನ್ನುತ್ತಾರೆ. ಕೆಲವು ಸಮಾಧಿಗಳಲ್ಲಿ ಮೃತಪಟ್ಟವರ ಹೆಸರು, ವಯಸ್ಸು ಲಿಂಗ ಮೃತಪಟ್ಟ ಕಾರಣ ಮುಂತಾದ ವಿವರಗಳು ಇವೆ ಎನ್ನಬಹುದು.

ಗೋರಿ ಮೇಲೆ ಮೃತಪಟ್ಟವರ ವಯಸ್ಸೂ ನಮೂದು:ಇಲ್ಲಿ ಮೃತಪಟ್ಟವರ ವಯಸ್ಸು 29 ಇದ್ದರೆ ಇನ್ನು ಕೆಲವು ಗೋಡೆಗಳಲ್ಲಿ 53 ಎಂದು ನಮೂದಿಸಲಾಗಿದೆ. ಮೃತಪಟ್ಟವರು ಒಂದೇ ಕುಟುಂಬದ ಪತಿ-ಪತ್ನಿ ಮಕ್ಕಳು ಸಹ ಆಗಿರುವ ಸಾಧ್ಯತೆ ಇದೆ ಎಂದು ಗೋರಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೇಳಬಹುದು. ಇನ್ನು ಕೆಲವು ಗೋರಿಗಳಲ್ಲಿ ಮೃತಪಟ್ಟವರ ನಿಖರವಾದ ವಯಸ್ಸು, ತಿಂಗಳು ಮತ್ತು ದಿನಗಳನ್ನು ಸ್ಪಷ್ಟವಾಗಿ ನಮೂದಿಸಿರುವುದು ಗಮನಿಸಬಹುದು. ಒಂದು ಗೋರಿಯಲ್ಲಿ ಮಣ್ಣು ಮಾಡಿರುವ ಇಬ್ಬರ ಬಗ್ಗೆ ವಿವರಗಳು ಇರುವುದು ತೀರ ಆಸಕ್ತಿದಾಯಕವಾಗಿದೆ.

ಅಪ್ಪ ಮತ್ತು ಮಗನನ್ನು ಇಲ್ಲಿ ಒಂದೆಡೆ ಮಣ್ಣು ಮಾಡಿರುವ ಸಾಧ್ಯತೆಗಳಿವೆ. ಇಂದು ಹೆಚ್ಚಿನ ಈ ಬ್ರಿಟಿಷ್ ಗೋರಿಗಳು ಶಿಥಿಲ ವ್ಯವಸ್ಥೆಯನ್ನು ತಲುಪಿವೆ. ಕೆಲವೆಡೆ ಶತಮಾನಗಳಿಂದ ಮಣ್ಣಿನ ಸವೆತಕ್ಕೆ ಒಳಗಾಗಿ ಗೋರಿ ಕಲ್ಲುಗಳು ಅಲ್ಲಾಡುತ್ತಿವೆ. ಅಂದು ಕಟ್ಟಿದ್ದ ಕಾಂಪೌಂಡ್‌ನ ಸುಳಿವು ಇಂದು ಇಲ್ಲ. ಒಂದೆಡೆ ಎಲ್ಲರ ಗೋರಿಗಳು ಇರುವುದನ್ನು ಗಮನಿಸಿದರೆ ಇದು ಬ್ರಿಟಿಷರಿಗೆ ಮಾತ್ರ ಸೀಮಿತವಾಗಿದ್ದ ಸ್ಮಶಾನ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಬಹುದು. ಕೆಲವು ಗೋರಿಗಳು ಕಲಾವಂತಿಕೆಯಲ್ಲಿ ಶ್ರೀಮಂತವಾಗಿವೆ. ಇನ್ನು ಕೆಲವು ಗೋರಿಗಳು ತೀರ ಸಾಮಾನ್ಯವಾಗಿವೆ.

ಗೋರಿಗಳ ಮೇಲೆ ಭಾವನಾತ್ಮಕ ಸಾಲು ಕೆತ್ತನೆ:ಆದರೆ ಎಲ್ಲಾ ಗೋರಿಗಳ ಮೇಲೆ ದುಃಖಭರಿತ ಮತ್ತು ಭಾವನಾತ್ಮಕ ಸಾಲುಗಳಿವೆ. ತಮ್ಮನ್ನು ಕಳೆದುಕೊಂಡವರ ನೋವಿದೆ. ಸದ್ಯ ಈ ಗೋರಿಗಳ ಹತ್ತಿರಕ್ಕೆ ನೇರವಾಗಿ ಹೋಗಲು ಯಾವುದೇ ದಾರಿಗಳಿಲ್ಲ. ಬ್ರಿಟಿಷರು ನಮ್ಮನ್ನು ಆಳಿದರೂ ಸಹ ಐತಿಹಾಸಿಕವಾಗಿ ಇಂಥ ಸ್ಥಳಗಳು ಬಹಳ ಮಹತ್ವವನ್ನು ಪಡೆಯುತ್ತವೆ. ಇವುಗಳ ಸಂರಕ್ಷಣೆ ಸ್ಥಳೀಯ ಜನರ ಮತ್ತು ಪ್ರಾಚ್ಯವಸ್ತು ಇಲಾಖೆಯದ್ದಾಗಿದೆ. ಸ್ಥಳೀಯ ಜನರ ಮಾಹಿತಿಯಂತೆ ಹುಣಸೂರು ಕಾಫಿವರ್ಕ್ಸ್​​​ ಸುಮಾರು ಕ್ರಿ.ಶ. 1800 ರ ದಶಕದಲ್ಲಿ ಆರಂಭವಾಗಿರುವ ಸಾಧ್ಯತೆ ಇದ್ದು, ಅಂದಿನ ಕಾಫಿವರ್ಕ್ಸ್​​ನ ಮುಖ್ಯಸ್ಥರು ಮತ್ತು ಅವರ ಸಂಬಂಧಿಕರುಗಳ ಗೋರಿಗಳಾಗಿರಬಹುದು ಎಂದು ಸ್ಥಳೀಯರು ಬಲವಾಗಿ ಅಭಿಪ್ರಾಯ ಪಡುತ್ತಿದ್ದಾರೆ.

ಈ ಸಂಬಂಧ ಈಟಿವಿ ಭಾರತದೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಮೈಸೂರು ವಿ.ವಿ.ಸಹಾಯಕ‌ ಪ್ರಾಧ್ಯಾಪಕ ಡಾ.ಡಿ.ಸಿ.ನಂಜುಂಡ ಅವರು, ಕಾಫಿವರ್ಕ್ಸ್​​​​ನಲ್ಲಿ ಅಂದು 3000 ಕ್ಕಿಂತಲೂ ಹೆಚ್ಚಿನ ಕೆಲಸಗಾರರು ಬೇರೆ ಬೇರೆ ಸ್ಥಳಗಳಿಂದ ಬಂದು ಕೆಲಸ ಮಾಡುತ್ತಿದ್ದರೆಂದು ಮಾಹಿತಿ ಇದೆ. ಹುಣಸೂರು ಕಾಫಿವರ್ಕ್ಸ್​​​​​​ನಲ್ಲಿ ಇಂಗ್ಲೆಂಡ್ ದೇಶದ ಮಷಿನ್‌ಗಳು ಇಂದಿಗೂ ಇರುವುದನ್ನು ಗಮನಿಸಬಹುದು. ಮೊಗಲ್ ಗೋರಿಗಳನ್ನು ಸಂರಕ್ಷಿಸುತ್ತಿರುವ ನಾವು ಈ ಗೋರಿಗಳ ಸಂರಕ್ಷಣೆ ಬಗ್ಗೆಯೂ ಗಮನ ಹರಿಸಬೇಕು.

ಈ ಸಂಬಂಧ ಮಾಹಿತಿಯನ್ನು ಬ್ರಿಟಿಷರಾಯಭಾರ ಕಚೇರಿಗೆ ತಲುಪಿಸುವ ಕೆಲಸವಾಗಬೇಕು. ಪ್ರಾಚ್ಯವಸ್ತು ಇಲಾಖೆ ಇಲ್ಲಿನ ಸ್ಥಳಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಸುತ್ತಲೂ ಕಾಂಪೌಂಡ್ ಹಾಕಿಸಬೇಕಾಗಿದೆ ಎನ್ನುತ್ತಾರೆ. ಹುಣಸೂರಿನ ನಲ್ಲೂರುಪಾಲ ಗ್ರಾಮದ ನಿವಾಸಿಯಾದ ಡಾ.ಮಹದೇವ ಅವರು ಮಾತನಾಡಿ, ಈ ಸ್ಥಳದಲ್ಲಿ 20ಕ್ಕೂ ಹೆಚ್ಚು ಬ್ರಿಟಿಷರ ಗೋರಿಗಳಿದ್ದು, ಇವುಗಳನ್ನು ಸಂರಕ್ಷಣೆ ಮಾಡಿ, ಅದರ ಇತಿಹಾಸ ಮತ್ತು ಮಹತ್ವವನ್ನು ತಿಳಿಸಬೇಕು. ಇಲ್ಲಿ ಗೋರಿಗಳು ಇವೆ ಎಂಬುವುದು ಇಂದಿಗೂ ಬೆಳಕಿಗೆ ಬಂದಿಲ್ಲ.ಇದರ ಬಗ್ಗೆ ಅಧ್ಯಯನ ನಡೆಸಿ, ಸರಿಯಾದ ಮಾಹಿತಿ ನೀಡಿದರೆ ಜನರಿಗೆ ಅನುಕೂಲವಾಗುತ್ತದೆ ಎಂದು ಹೇಳುತ್ತಾರೆ.

ಇದನ್ನೂ ಓದಿ:ಮೈಸೂರು ಮೃಗಾಲಯದಲ್ಲಿ ಹೈಟೆಕ್ ಶಿಶು ಆರೈಕೆ ಕೇಂದ್ರ ಉದ್ಘಾಟಿಸಿದ ಯದುವೀರ್ ದಂಪತಿ

ABOUT THE AUTHOR

...view details