ಗಂಗಾವತಿ:ವಿಜಯದಶಮಿ ನಿಮಿತ್ತ ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಗಣವೇಷ ತೊಟ್ಟು ಪ್ರಮುಖ ರಸ್ತೆ, ವೃತ್ತಗಳಲ್ಲಿ ಪಥಸಂಚನ ಮಾಡಿದರು. ಹೀಗೆ ರಸ್ತೆ ಮಧ್ಯ ಸಾಗುತ್ತಿದ್ದ ಗಣವೇಷಧಾರಿಗಳ ಮೇಲೆ ಮುಸ್ಲಿಮರು ತರೇಹವಾರಿ ಹೂವುಗಳನ್ನು ಎರಚಿ ಸ್ವಾಗತಿಸಿದರು.
ಗಂಗಾವತಿಯಲ್ಲಿ ಆರ್ಎಸ್ಎಸ್ ಪಥಸಂಚಲನ: ಸಾಮರಸ್ಯ ಮೆರೆದ ಮುಸ್ಲಿಂ ಬಾಂಧವರು ಹೌದು, ಪಥಸಂಚಲನವು ನಗರದ ಪಂಪಾನಗರದ ವೃತ್ತದ ಮೂಲಕ ಪೀರಜಾಧೆ ರಸ್ತೆಯಲ್ಲಿ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಕೆಲ ಮುಸಲ್ಮಾನ ಮುಖಂಡರು ಆರ್ಎಸ್ಎಸ್ ಪಥಸಂಚಲನದ ಮೇಲೆ ತರೇಹವಾರಿ ಹೂವುಗಳನ್ನು ಎರಚಿ ಸ್ವಾಗತಿಸಿದರು.
ಕಳೆದ ಎರಡು ವರ್ಷದ ಹಿಂದೆ ನಗರದಲ್ಲಿ ನಡೆದ ಗೋಮುಗಲಭೆಯ ಬಳಿಕ ನಗರದಲ್ಲಿ ಸಾಮರಸ್ಯ ಹೆಚ್ಚುತ್ತಿದ್ದು, ಹಿಂದು ಮತ್ತು ಮುಸಲ್ಮಾನರು ತಮ್ಮ ಹಬ್ಬಗಳ ಆಚರಣೆ ವೇಳೆ ಪರಸ್ಪರ ಕೋಮಿನ ಜನ ಶುಭಾಶಯ ಕೋರುವ ಮೂಲಕ ಸಾಮರಸ್ಯಕ್ಕೆ ನಾಂದಿ ಹಾಡಿದ್ದಾರೆ.
ವಾಸ್ತವವಾಗಿ ಆರ್ಎಸ್ಎಸ್ ಎಂದರೆ ಬಹುತೇಕ ಮುಸಲ್ಮಾನರು ಸೈದ್ಧಾಂತಿಕವಾಗಿ ವಿರೋಧಿಸುತ್ತಾರೆ. ಆದರೆ ಕೆಲವರು ದೇಶ ಭಕ್ತಿ, ದೇಶದ ಹಿತರಕ್ಷಣೆಗೆ ಹುಟ್ಟಿಕೊಂಡ ಆರ್ಎಸ್ಎಸ್ ಎಂದರೆ ಅಭಿಮಾನ ಪಡುವ ಮೂಲಕ ಇಲ್ಲಿನ ಮುಸಲ್ಮಾನ್ ಬಾಂಧವರು ಗಮನ ಸೆಳೆದಿದ್ದಾರೆ.