ಕರ್ನಾಟಕ

karnataka

ETV Bharat / state

ಹೆಣ್ಣಿನ ವಿಚಾರ ತೆಗೆದು ಹೆಣವಾದ... ಕೊಂದವರು ಪ್ರಾಣ ಸ್ನೇಹಿತರೇ!

ಪ್ರಾಣ ಸ್ನೇಹಿತನ ಮೇಲೆ ಲಾರಿ ಹರಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮಾಲೂರು ತಾಲೂಕಿನ ಮಾಸ್ತಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

By

Published : Mar 13, 2019, 5:28 PM IST

Updated : Mar 13, 2019, 6:01 PM IST

ಬಂಧಿತ ಆರೋಪಿಗಳಾದ ನಾಗರಾಜ್​ ಮತ್ತು ರಾಜಪ್ಪ

ಕೋಲಾರ: ಒಂದೇ ವೃತ್ತಿ ಮಾಡುತ್ತಿದ್ದ ಗೆಳೆಯರೆಲ್ಲ ಸೇರಿಕೊಂಡು ಕುಡಿದ ಮತ್ತಿನಲ್ಲಿ ಸ್ವಲ್ಪ ಖಾರದ ಮಾತುಗಳನ್ನಾಡಿದ್ದ ತಮ್ಮ ಪ್ರಾಣ ಸ್ನೇಹಿತನ ಮೇಲೆ ಲಾರಿ ಹರಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿದ ಘಟನೆ ಮಾಲೂರು ತಾಲೂಕು ಮಾಸ್ತಿ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೋಲಾರ ಎಸ್​ಪಿ ರೋಹಿಣಿ ಕಠೋಚ್

ಮಾ.​ 5 ರಂದು ತಾಲೂಕಿನ ನಾರಾಯಣಪುರ ಗೇಟ್​​ ಬಳಿ ಹಿಟ್​ ಅಂಡ್​ ರನ್​ ರೀತಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮಾಸ್ತಿ ಪೊಲೀಸರು, ತನಿಖೆ ನಡೆಸಿದಾಗ ಹುಲಿಮಂಗಲ ಗ್ರಾಮದ ಗೋಪಾಲ್​ ಅಲಿಯಾಸ್​ ಚಿನ್ನಿ ಎಂಬುವನ ಶವ ಎಂದು ತಿಳಿದು ಬಂದಿತ್ತು. ಘಟನೆ ಬಗ್ಗೆ ಅನುಮಾನ ವ್ಯಕ್ತವಾಗಿದ್ದರಿಂದ ಪೊಲೀಸರು ಪರಿಶೀಲನೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ.

ಕೊಲೆಗೀಡಾದ ಗೋಪಾಲನ ಸಂಬಂಧಿಯ ಪ್ರತಿಕ್ರಿಯೆ

ಅಂದು ಗೋಪಾಲ್​ ಹಾಗೂ ಸ್ನೇಹಿತರಾದ ನಾಗರಾಜ್​ ಮತ್ತು ರಾಜಪ್ಪ ಬಾರ್​​ವೊಂದರಲ್ಲಿ ಕುಳಿತು ಕಂಠಪೂರ್ತಿ ಕುಡಿದಿದ್ದರು. ಕುಡಿದ ಮತ್ತಿನಲ್ಲಿ ಯುವತಿಯೋರ್ವಳ ವಿಚಾರದಲ್ಲಿ ನಾಗರಾಜ್​​ ಹಾಗೂ ಗೋಪಾಲ್​​ ನಡುವೆ ಮಾತಿಗೆ ಮಾತು ಬೆಳೆದಿತ್ತು. ಮಧ್ಯ ಪ್ರವೇಶಿಸಿದ ರಾಜಪ್ಪ, ಇಬ್ಬರನ್ನು ಸಮಾಧಾನ ಮಾಡುವ ನಾಟಕವಾಡಿ ಕ್ಯಾಂಟರ್​ ವಾಹನದಲ್ಲಿ ಹತ್ತಿಸಿಕೊಂಡು ಬಂದಿದ್ದ. ಇದೆಲ್ಲವನ್ನು ತಲೆಯಲ್ಲಿ ತುಂಬಿಕೊಂಡಿದ್ದ ರಾಜಪ್ಪ, ನಾರಾಯಣಪುರ ಗೇಟ್​​ ಬರುತ್ತಿದ್ದಂತೆ ಗೋಪಾಲನನ್ನು ವಾಹನದಿಂದ ಹೊರಗೆ ದಬ್ಬಿದ್ದಾನೆ.

ಸಾಲದೆಂಬಂತೆ ಕೆಳಗೆ ಬಿದ್ದು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಗೋಪಾಲನ ಮೇಲೆ ಲಾರಿ ಹರಿಸಿ ಕೊಲೆ ಮಾಡಿ ತಮಗೇನು ಗೊತ್ತಿಲ್ಲ ಎಂಬಂತೆ ಅಲ್ಲಿಂದ ಪರಾರಿಯಾಗಿದ್ದರು. ಪೊಲೀಸರು ಸಹ ದೂರು ದಾಖಲಿಸಿಕೊಂಡಿದ್ದರು. ಅಲ್ಲದೆ ಸುದ್ದಿ ತಿಳಿದ ಮೃತ ವ್ಯಕ್ತಿಯ ಪೋಷಕರು ಸಹ ಇದೊಂದು ಅಪಘಾತವೆಂದು ಸುಮ್ಮನಾಗಿದ್ದರು. ಆದರೆ, ಈ ಬಗ್ಗೆ ಅನುಮಾನ ವ್ಯಕ್ತವಾಗಿದ್ದರಿಂದ ತನಿಖೆ ನಡೆಸಿದ ಮಾಸ್ತಿ ಠಾಣಾ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುತ್ತಾರೆ ನಗರದ ಎಸ್​ಪಿ ರೋಹಿಣಿ ಕಠೋಚ್​.

ಆರೋಪಿಗಳನ್ನು ಕರೆತರುತ್ತಿರುವ ಪೊಲೀಸರು
Last Updated : Mar 13, 2019, 6:01 PM IST

ABOUT THE AUTHOR

...view details