ಕಲಬುರಗಿ:ಹಲವಾರು ದೇಶ ವಿದೇಶಗಳ ಸಂವಿಧಾನ ಅಧ್ಯಯನಮಾಡಿ ಅಂಬೇಡ್ಕರ್ ರಚಿಸಿರುವ ಸಂವಿಧಾನ ಬಿಜೆಪಿ ನಾಯಕರು ಬದಲಾಯಿಸುತ್ತೇವೆ ಎನ್ನುತ್ತಾರೆ, ಆದರೆ ಅವರು ಇಷ್ಟೆಲ್ಲಾ ಮಾಡುವವರೆಗೆ ನಾವೇನು ಕಡ್ಲೆಪುರಿ ತಿಂದುಕೊಂಡು ಕೂರಲ್ಲ ಎಂದು ಡಿಸಿಎಂ ಜಿ. ಪರಮೇಶ್ವರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಉಪ ಚುನಾವಣೆ ಹಿನ್ನೆಲೆ ಚಿಂಚೋಳಿಯಲ್ಲಿ ಏರ್ಪಡಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತಮಾಡಿದ ಅವರು, ಪ್ರಧಾನಿ ಮೋದಿ ದಲಿತರ ಮೇಲೆ, ಮಹಿಳೆಯರ ಮೇಲೆ ದೌರ್ಜನ್ಯ ನಡೆದರೂ ಮೌನ ವಹಿಸಿದ್ದು ಏಕೆ? ಎಂದು ಪ್ರಶ್ನಿಸಿದರು.
ಉಮೇಶ್ ಜಾಧವ್ ವಿರುದ್ಧ ಹರಿಹಾಯ್ದ ಪರಮೇಶ್ವರ್, ರಾತ್ರೋ ರಾತ್ರಿ ಮುಂಬೈಗೆ ಹಾರಿ, ಹಣಕ್ಕೆ ಮಾರಾಟವಾಗಿ ಈಗ ಉಪ ಚುನಾವಣೆ ಮಾಡಲು ಬಂದಿದ್ದಾನೆ. ಉಪ ಚುನಾವಣೆಯಲ್ಲಿ ಉಮೇಶ್ ಜಾಧವ್ ಪುತ್ರನನ್ನು ಸೋಲಿಸುವ ಮೂಲಕ ಇಡೀ ರಾಜ್ಯಕ್ಕೆ ಒಂದು ಸಂದೇಶ ರವಾನೆ ಮಾಡಬೇಕು. ನಮಗೆ ಲೆಫ್ಟು-ರೈಟು ಎಂಬುದಿಲ್ಲ ಎಲ್ಲರೂ ಒಟ್ಟುಗೂಡಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸಿ ಎಂದು ಕರೆಕೊಟ್ಟರು.
ಉಪ ಚುನಾವಣೆ ಹಿನ್ನೆಲೆ ಚಿಂಚೋಳಿಯಲ್ಲಿ ಸಮಾವೇಶ ಇದೆ ವೇಳೆ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ, ಸಂವಿಧಾನ ರಚನೆಗಾಗಿ ಅಂಬೇಡ್ಕರ್ ಹಲವಾರು ದೇಶ ವಿದೇಶಗಳ ಸಂವಿಧಾನ ಅಧ್ಯಯನ ನಡೆಸಿದ್ದಾರೆ. ರಚನೆ ಸಂದರ್ಭಗಳಲ್ಲಿ ಎದ್ದ ಮೂರು ಸಾವಿರ ಪ್ರಶ್ನೆಗೆ 30000 ಪುಟಗಳ ಉತ್ತರ ನೀಡಿದ್ದರು. ಸರ್ವರಿಗೆ ಸಮಪಾಲು, ಸಮಬಾಳು ತತ್ವದ ಅಡಿಯಲ್ಲಿ ರಚಿತವಾದ ಸಂವಿಧಾನವನ್ನು ಬದಲಾವಣೆ ಮಾಡಬೇಕು ಎಂಬ ದುರಾಲೋಚನೆಯನ್ನು ಅನಂತ್ ಕುಮಾರ್ ಹೆಗಡೆ ಅಂತ ಅಯೋಗ್ಯರು ಹೊಂದಿದ್ದಾರೆ ಎಂದು ಬಿಜೆಪಿ ವಿರುದ್ಧ ಗುಡುಗಿದರು.
ಸಮಾವೇಶದಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ್, ಮಾಜಿ ರಾಜ್ಯಸಭಾ ಸದಸ್ಯ ಕೆ.ಬಿ.ಶಾಣಪ್ಪ ಸೇರಿದಂತೆ ಅನೇಕರು ಹಾಜರಿದ್ದರು.