ಹಾವೇರಿ:ಡಾ. ರಾಜಕುಮಾರ್ ಅಂದರೆ ಅವರಿಗೆ ಅವರೇ ಸಾಟಿ. ಅವರಂತ ಕಲಾವಿದ ಮತ್ತೊಬ್ಬ ಹುಟ್ಟಿ ಬರಲಿಕ್ಕಿಲ್ಲಾ ಎನ್ನುವ ಮಾತಿದೆ. ಆದರೆ ಡಾ. ರಾಜ್ ರಂತೆ ಹಲವು ಜ್ಯೂನಿಯರ್ ರಾಜಕುಮಾರ್ಗಳು ರಾಜ್ಯದಲ್ಲಿದ್ದಾರೆ. ಅಂತವರಲ್ಲಿ ಅಗ್ರಗಣ್ಯರು ಜಿಲ್ಲೆಯ ದೇವಗಿರಿಯ ಅಶೋಕ ಬಸ್ತಿ. ಆದರೆ ಈ ಕಲಾವಿದನ ಮೇಲೆ ಕೊರೊನಾ ಕರಿಛಾಯೆ ಬೀರಿದೆ.
ಆಶೋಕ ಬಸ್ತಿ ಡಾ.ರಾಜ್ ಮುಂದೆ ನಟನೆ ಮಾಡಿ ಸೈ ಎನಿಸಿಕೊಂಡವರು. ಆದರೆ ಕೊರೊನಾ ಕರಿಛಾಯೆ ಈ ಕಲಾವಿದನ ಮೇಲೆ ಸಹ ಬೀರಿದ್ದು, 25 ಸಾವಿರ ಪ್ರದರ್ಶನಗಳ ಹಣದಿಂದ ಕಟ್ಟಿದ ಮನೆಯನ್ನೇ ಮಾರುವ ಸಂಕಷ್ಟ ಇವರಿಗೆ ಎದುರಾಗಿದೆ.
ಜಿಲ್ಲೆಯ ದೇವಗಿರಿಯ ಅಶೋಕ್ ಬಸ್ತಿ ಎಂದರೇ ಬಹುಶಃ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಆದರೆ ಜ್ಯೂನಿಯರ್ ರಾಜಕುಮಾರ್ ಅಂದ್ರೆ ಸಾಕು, ಜನ ಗುರುತಿಸುವುದು ಅಶೋಕ ಬಸ್ತಿ ಅವರನ್ನು. ಹೌದು, ಡಾ.ರಾಜಕುಮಾರ್ ಹೋಲಿಕೆ, ಅವರಂತೆ ಮಾತು ಅವರನ್ನ ಹೋಲುವ ವ್ಯಕ್ತಿಗಳಲ್ಲಿ ಇವರು ಸಹ ಒಬ್ಬರು. ರಾಜ್ಯದಲ್ಲಿ ಹಲವು ಜನ ತಾವು ಜ್ಯೂನಿಯರ್ ರಾಜಕುಮಾರ್ ಎಂದು ಕರೆದುಕೊಳ್ಳುವುದುಂಟು. ಆದರೆ ನಟನೆಯ ಮೂಲಕ ಪ್ರೇಕ್ಷಕರಿಂದ ಸೈ ಎನಿಸಿಕೊಂಡವರು ಅಶೋಕ್ ಬಸ್ತಿ.
ರಾಜ್ಯ ದೇಶ ವಿದೇಶಗಳಲ್ಲಿ ಜ್ಯೂನಿಯರ್ ರಾಜಕುಮಾರ್ ಆಗಿ ಇವರು ಸುಮಾರು 25 ಸಾವಿರ ಪ್ರದರ್ಶನಗಳನ್ನ ನೀಡಿದ್ದಾರೆ. ತಮ್ಮದೇ ಗರಡಿಯಲ್ಲಿ ಹಲವು ಜ್ಯೂನಿಯರ್ ನಟರನ್ನ ಬೆಳೆಸಿದ್ದಾರೆ. ತಮ್ಮ ಪ್ರದರ್ಶನಗಳಿಂದ ಮನೆಮಾತಾಗಿದ್ದ ಜ್ಯೂನಿಯರ್ ರಾಜಕುಮಾರ್ ಜಿಲ್ಲೆಯ ಬಸವೇಶ್ವರ ನಗರದಲ್ಲಿ ಮನೆ ಕಟ್ಟಿಸಿಕೊಂಡಿದ್ದಾರೆ. ಅದಕ್ಕೆ ಅಭಿಮಾನಿ ದೇವರುಗಳ ಕೃಪೆ ಎಂದು ಹೆಸರಿಟ್ಟಿದ್ದಾರೆ. ಆದರೆ ಕಳೆದ ಎರಡು ತಿಂಗಳಿಂದ ಕೊರೊನಾ ಶುರುವಾದ ಮೇಲೆ ಇವರು ಯಾವ ಪ್ರದರ್ಶನವನ್ನು ನೀಡಲು ಸಾಧ್ಯವಾಗದ ಪರಿಣಾಮ ಈ ಕಲಾವಿದ ಮನೆಯನ್ನೇ ಮಾರುವ ಚಿಂತನೆಯಲ್ಲಿದ್ದಾರೆ.
ಇವರಿಗೆ ಮನೆ ಮಾರಾಟ ಮಾಡುವುದು ಸ್ವಲ್ಪವೂ ಇಷ್ಟವಿಲ್ಲ. ಆದರೆ ಏನು ಮಾಡುವುದು ಪ್ರಸ್ತುತ ಸಂದರ್ಭದಲ್ಲಿ ಅನಿವಾರ್ಯ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಬೇಕಾದರೇ ಯಾರಾದರು ಕಲಾಪ್ರೇಮಿಗಳು ಹಣ ಕೊಟ್ಟು ಮನೆ ಇಟ್ಟುಕೊಳ್ಳಲಿ. ನಂತರ ಬಿಡಿಸಿಕೊಳ್ಳುವೆ ಎನ್ನುವ ಇಂಗಿತವನ್ನ ಸಹ ಅಶೋಕ ಬಸ್ತಿ ವ್ಯಕ್ತಪಡಿಸಿದ್ದಾರೆ. ತಾನು ಮತ್ತೆ ಬಣ್ಣ ಹಚ್ಚಿ ಪ್ರದರ್ಶನಕ್ಕೆ ನಿಂತರೆ ಸಾಕು, ಈಗಿರುವ ಸಾಲವನ್ನ ವರ್ಷದಲ್ಲಿ ತೀರಿಸುತ್ತೇನೆ ಎಂಬ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ. ಯಾರಾದರು ಕಲಾಪ್ರೇಮಿಗಳು ಜ್ಯೂನಿಯರ್ ರಾಜ್ ನೆರವಿಗೆ ಬರಬೇಕಿದೆ.