ಹಾಸನ:ಅಪ್ರಾಪ್ತೆಯನ್ನು ಪ್ರೀತಿಸಿ, ಕಿರುಕುಳ ನೀಡಿದ್ದಲ್ಲದೆ ತನ್ನ ಧರ್ಮಕ್ಕೆ ಮತಾಂತರ ಆಗು ಅಂತಾ ಬಲವಂತ ಮಾಡಿದ ಆರೋಪದ ಮೇಲೆ ಯುವಕನೊಬ್ಬನನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯೂನಿಸ್ (24) ಎಂಬಾತನೆ ಬಂಧಿತ ಆರೋಪಿ. ಕೆಲ ಸಂಘಟನೆಗಳು ಪೊಲೀಸರಿಗೆ ಮಾಹಿತಿ ನೀಡಿ ಅವರ ನೆರವಿನಿಂದ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ. ಬಾಲಕಿಯ ಹೇಳಿಕೆ ಪಡೆದು ತನಿಖೆ ಆರಂಭಿಸಿದ ಪೊಲೀಸರು, ಕೇವಲ 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಆರೋಪಿಯನ್ನ ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಆರೋಪಿ ವಿರುದ್ಧ ಪೋಕ್ಸೋ ಮತ್ತು ಮತಾಂತರ ಯತ್ನದಡಿ ಪ್ರಕರಣ ದಾಖಲಾಗಿದೆ.
ಬಾಲಕಿಯ ಪ್ರೀತಿಸಿ ಮತಾಂತರ ಯತ್ನ ಆರೋಪಿ ಬಂಧನ ಬಾಲಕಿಯ ದೂರಿನಲ್ಲಿ ಏನಿದೆ?
ಆರೋಪಿ ಯೂನಿಸ್ ತನ್ನ ಮನೆಯ ಹತ್ತಿರದ ನಿವಾಸಿಯಾಗಿದ್ದು, ಒಂದು ವರ್ಷದ ಹಿಂದೆ ತನಗೆ ಪರಿಚಯವಾಗಿದ್ದ. ಆತನೇ ಒಂದು ಮೊಬೈಲ್ ಕೊಡಿಸಿದ್ದ. ನಾವಿಬ್ಬರೂ ಪ್ರತಿ ದಿನ ಮೊಬೈಲ್ನಲ್ಲಿ ಮಾತನಾಡುತ್ತಿದ್ದು, ಪರಸ್ಪರ ಪ್ರೀತಿಸುತ್ತಿದ್ದೆವು. ಅಲ್ಲದೆ ಮನೆಯವರಿಗೆ ತಿಳಿಯದೆ ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಆತನೊಂದಿಗೆ ತೆರಳಿದ್ದೆ. ಆದರೆ ಅಲ್ಲಿ ಆತ ತನಗೆ ದೈಹಿಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ತಾನು ಮನೆಯವರಿಗೆ ತಿಳಿಸಿರಲಿಲ್ಲ. ಬಳಿಕ ಇತ್ತೀಚೆಗೆ ಆತ ತನ್ನ ಧರ್ಮ ಬೇರೆಯಾಗಿರುವುದರಿಂದ ಮನೆಯಲ್ಲಿ ನಮ್ಮ ಮದುವೆಗೆ ಒಪ್ಪಲ್ಲ. ಎಲ್ಲಿಯಾದರೂ ಬೇರೆಡೆಗೆ ಓಡಿ ಹೋಗಿ ಮದುವೆಯಾಗೋಣ. ನಿನ್ನನ್ನು ನಮ್ಮ ಜಾತಿಗೆ ಸೇರಿಸಿಕೊಳ್ಳುತ್ತೇನೆ ಎಂದಿದ್ದ. ಆದರೆ ನಾನು ಅದಕ್ಕೆ ಒಪ್ಪಲಿಲ್ಲ. ಅಲ್ಲದೆ ನಾನು ಮನೆಯವರಿಗೆ ನಡೆದಿದ್ದನ್ನೆಲ್ಲ ತಿಳಿಸಿದ್ದು, ತನಗೆ ಕಿರುಕುಳ ನೀಡಿದ ಹಾಗೂ ತನ್ನನ್ನು ಬೇರೆಡೆಗೆ ಅಪಹರಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಹಾಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಬಾಲಕಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಲವ್ ಜಿಹಾದ್ ಆರೋಪ:
ಈ ಬಗ್ಗೆ ಯುವ ಬ್ರಿಗೇಡ್ ಮುಖಂಡ ಧರಣೇಶ್ ಮಾತನಾಡಿ, ಇದೊಂದು ಲವ್ ಜಿಹಾದ್ ಯತ್ನ ಪ್ರಕರಣವಾಗಿದೆ. ಬಾಲಕಿಯ ಮತಾಂತರ ಮಾಡುವ ಉದ್ದೇಶದಿಂದ ಹೆಸರು ಬದಲಾಯಿಸಲು ಯತ್ನಿಸಲಾಗಿದೆ. ಪೋಷಕರೂ ಕೂಡ ತಮ್ಮ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ತಪ್ಪಿತಸ್ಥರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.