ಕರ್ನಾಟಕ

karnataka

By

Published : Jun 20, 2022, 7:38 PM IST

ETV Bharat / state

ಅಗ್ನಿಪಥ್​ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ದೊಡ್ಡ ಷಡ್ಯಂತ್ರ ನಡೆಯುತ್ತಿದೆ: ಜಗದೀಶ್​​ ಶೆಟ್ಟರ್​

ಅಗ್ನಿಪಥ ಯೋಜನೆಯ ಕುರಿತು ಹಿಂಸಾಚಾರ ಪ್ರತಿಭಟನೆಯಲ್ಲಿ ಷಡ್ಯಂತ್ರದಂತಿದ್ದು, ಇದರಲ್ಲಿ ಭಾಗಿಯಾದವರಿಗೆ ಮುಂದೆ ಸೈನ್ಯಕ್ಕೆ ಸೇರಲು ಕಪ್ಪು ಚುಕ್ಕೆ ಇದ್ದಹಾಗೆ. ಆದ ಕಾರಣ ಯಾವುದೇ ಕಾರಣಕ್ಕೂ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿ ನಿಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳದಂತೆ ಜಗದೀಶ್​ ಶೆಟ್ಟರ್​ ಯುವಕರಿಗೆ ಕಿವಿಮಾತು ಹೇಳಿದರು.

jagadish
ಜಗದೀಶ್​

ಹುಬ್ಬಳ್ಳಿ: ಅಗ್ನಿಪಥ ವಿರೋಧಿಸಿ ನಡೆಯುತ್ತಿರುವ ಹಿಂಸಾಚಾರ ಪ್ರತಿಭಟನೆಯಲ್ಲಿ ದೊಡ್ಡ ಕುತಂತ್ರ, ಷಡ್ಯಂತ್ರ ಇದೆ. ಹಿಂಸಾಚಾರದ ಪ್ರತಿಭಟನೆ ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಬದಲಾವಣೆ ತರುವ ಕೆಲಸವನ್ನು ಮಾಡುತ್ತಿದ್ದಾರೆ. ರಾಷ್ಟ್ರದ ನಾಗರಿಕರಲ್ಲಿ ಸುರಕ್ಷತೆಯ ಭಾವನೆಯನ್ನು ತರುವ ಕೆಲಸ ಮಾಡುತ್ತಿದ್ದಾರೆ. ಅಗ್ನಿಪಥ್ ಯೋಜನೆಯನ್ನು ಹತ್ತಾರು ವರ್ಷಗಳ ಹಿಂದೆಯೇ ಅನುಷ್ಠಾನ ಮಾಡಬೇಕಿತ್ತು. ಆದರೆ ಆ ಧೈರ್ಯವನ್ನು ಯಾರು ಮಾಡಿರಲಿಲ್ಲ ಎಂದು ಹರಿಹಾಯ್ದಿದ್ದಾರೆ.

ಸೇನಾ ಮುಖ್ಯಸ್ಥರು ಈಗಾಗಲೇ ಮಾಧ್ಯಮದ ಮೂಲಕ ಅಗ್ನಿಪಥದ ಪ್ರಯೋಜನೆಗಳೇನು ಎಂಬುದನ್ನು ಜನರಿಗೆ ತಿಳಿಸಿದ್ದಾರೆ. ನಾಲ್ಕು ವರ್ಷಗಳ ಸೇವಾವಧಿ ಮುಗಿದ ಮೇಲೆ ಯಾವೆಲ್ಲ ಸೌಲಭ್ಯಗಳು ಮತ್ತು ಮೀಸಲಾತಿಗಳು ಸಿಗುತ್ತವೆ ಎಂಬುದರ ಬಗ್ಗೆ ಸ್ಪಷ್ಟವಾಗಿ ವಿವರಿಸಿದ್ದಾರೆ. ಅಗ್ನಿಪಥ ಯೋಜನೆ ಕುರಿತು ಯಾವುದೇ ವಿರೋಧಗಳಿದ್ದರೇ ಅದನ್ನು ಶಾಂತವಾಗಿ ಹೇಳುವ ಕೆಲಸ ಮಾಡಬೇಕಿತ್ತು. ಸರ್ಕಾರದ ಸಚಿವರು ಅಥವಾ ಸ್ವತಃ ಪ್ರಧಾನಮಂತ್ರಿಗೆ ಸಮಯ ಕೇಳಿದರೇ ಅವರು ಸಮಯ ಕೊಡಬಹುದಿತ್ತು. ಅವರೊಂದಿಗೆ ಸಮಾಲೋಚನೆ ನಡೆಸಿಕೊಂಡು ಅದರಲ್ಲಿನ ನೂನ್ಯತೆಗಳ ಬಗ್ಗೆ ಹೇಳಬಹುದಿತ್ತು. ಅದನ್ನು ಬಿಟ್ಟು ಅಗ್ನಿಪಥ ಯೋಜನೆ ಘೋಷಣೆ ಮಾಡಿ 24 ಗಂಟೆಯಲ್ಲಿ ದೇಶಾದ್ಯಂತ ಹಿಂಸಾಚಾರ ಮಾಡಿ ಕಾನೂನು ಕೈಗೆತ್ತಿಕೊಳ್ಳತ್ತಾರೆಂದರೇ ಇದರ ಹಿಂದೆ ದೊಡ್ಡ ಕುತಂತ್ರ ಷಡ್ಯಂತ್ರ ಇದೆ ಎಂದು ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಷಡ್ಯಂತ್ರ ಮಾಡುವವರಿಗೆ ಯಾವ ಯುವಕರು ಮರುಳಾಗಬಾರದು. ಅದರಿಂದ ಯಾರು ಹಿಂಸಾಚಾರದಲ್ಲಿ ಭಾಗಿಯಾಗುತ್ತಾರೆ. ಅವರು ಮುಂದೆ ಸೈನ್ಯಕ್ಕೆ ಸೇರಬೇಕೆಂದರೆ ಅದಕ್ಕೆ ರೆಡ್ ಮಾರ್ಕ್ ಬಿದ್ದ ಹಾಗೆ. ಹೀಗಾಗಿ ಇದಕ್ಕೆ ಯುವಕರು ಅವಕಾಶ ಮಾಡಿಕೊಡಬಾರದು. ಒಳ್ಳೆಯ ರೀತಿಯ ಸಭ್ಯ ನಾಗರಿಕರ ಹಾಗೇ ವರ್ತನೆ ಮಾಡಿ ಮುಂದಿನ ಭವಿಷ್ಯ ನೋಡಿಕೊಳ್ಳಬೇಕು ಎಂದು ಪ್ರತಿಭಟನಾ ನಿರತ ಯುವಕರಿಗೆ ಶೆಟ್ಟರ್​ ಕಿವಿಮಾತು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಸದುದ್ದೇಶದಿಂದ ದೇಶದ ರಕ್ಷಣೆ ಜನರ ರಕ್ಷಣೆಗಾಗಿ ಅಗ್ನಿಪಥ ಯೋಜನೆ ಜಾರಿಗೆ ತಂದಿದ್ದಾರೆ. ಆದರೆ ರಾಜಕೀಯ ಕಾರಣದಿಂದ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

ಈ ಹಿಂದೆಯೂ ಕೃಷಿ ಕಾಯ್ದೆಗಳನ್ನು ಅನುಷ್ಠಾನಗೊಳಿಸಬಹುದಿತ್ತು. ಆದರೆ ಹೊಸ ಪ್ರಯೋಗವನ್ನು ಅನುಷ್ಠಾನ ಮಾಡಲು ವಿರೋಧ ಪಕ್ಷಗಳು ಅವಕಾಶ ಮಾಡಿಕೊಡಲು ಹಿಂದೇಟು ಹಾಕುತ್ತಿವೆ. ಹಳೇ ವ್ಯವಸ್ಥೆ ಮುಂದುವರೆಯಲಿ ದಲ್ಲಾಳಿ ವ್ಯವಸ್ಥೆ ಮುಂದುವರೆಯಲಿ ಎನ್ನುವುದು ಕಾಂಗ್ರೆಸ್ ವಿಚಾರ. ಹೀಗಾಗಿ ಕಾಂಗ್ರೆಸ್ ಪಕ್ಷ ಅಗ್ನಿಪಥ ವಿರೋಧದಲ್ಲೂ ಭಾಗಿಯಾಗಿದೆ ಎಂದರು. ಕಾಂಗ್ರೆಸ್ ನವರು ಈವರೆಗೆ ದೇಶವನ್ನು ಅಶಕ್ತ ಮಾಡುತ್ತಾ ಬಂದಿದ್ದಾರೆ. ನೆಹರೂ, ಇಂದಿರಾಗಾಂಧಿ ಕಾಲದಿಂದಲೂ ಕಾಂಗ್ರೆಸ್ ನವರಿಗೆ ದೇಶದ ಬಗ್ಗೆ ಮತ್ತು ರಕ್ಷಣೆ ಬಗ್ಗೆ ಕಾಳಜಿ ಇಲ್ಲ ಎಂದು ಶೆಟ್ಟರ್​ ವಾಗ್ದಾಳಿ ನಡೆಸಿದರು.

ಮಾಜಿ ಪ್ರಧಾನಿ ದಿ. ಜವಾಹರಲಾಲ್ ನೆಹರು ಅವರ ಅಧಿಕಾರವಧಿಯಲ್ಲಿ ಎಷ್ಟು ಭೂಮಿಯನ್ನು ಕಳೆದುಕೊಂಡಿದ್ದೇವೆ. ಪಾಕ್ ಆಕ್ರಮಿತ ಕಾಶ್ಮೀರ ರಕ್ಷಣೆ ಮಾಡಲು ಅವರ ಕೈಯಲ್ಲಿ ಆಗಲಿಲ್ಲ. ಇದೀಗ ಜಮ್ಮು ಕಾಶ್ಮೀರದಲ್ಲಿ ಬದಲಾವಣೆ ತರುವ ಕೆಲಸವನ್ನು ಬಿಜೆಪಿ ಮಾಡಿದೆ. ಬದಲಾವಣೆಗೆ ಸ್ಪಂದನೆ ಮಾಡುವಂತಹದ್ದು, ರಚನಾತ್ಮಕ ಸಲಹೆ ಕೊಡುವುದನ್ನು ಬಿಟ್ಟು ಬೀದಿಗಿಳಿದು ಹೋರಾಟ ಮಾಡುವ ಪ್ರವೃತ್ತಿ ಕಾಂಗ್ರೆಸ್ಸಿನದ್ದು. ಇದೇ ದೇಶವನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಚಾಲಕ ರಹಿತ ಮೆಟ್ರೋ ರೈಲು ಚಾಲನೆಗೆ ಬಿ.ಎಂ.ಆರ್.ಸಿ.ಎಲ್ ಸಿದ್ಧತೆ

ABOUT THE AUTHOR

...view details