ಹುಬ್ಬಳ್ಳಿ :ಕೈಯಲ್ಲಿ ಚೆಕ್, ಒಂದಿಷ್ಟು ದಾಖಲೆ ಪತ್ರ ಹಿಡಿದುಕೊಂಡು ಆತಂಕದಿಂದ ನಿಂತಿರುವ ಜನರು. ಇವರೆಲ್ಲ ವಿಜಯಪುರ ಜಿಲ್ಲೆಯ ಸಿಂದಗಿಯವರು. ಎಲ್ಲವು ಸರಿಯಾಗಿ ನಡೆದಿದ್ದರೆ, ಇವರೆಲ್ಲ ಸಿಂದಗಿಯಲ್ಲೆ ತಮ್ಮ ಕುಟುಂಬದವರ ಜತೆಗೆ ಬಾಳುತ್ತಿದ್ದರು. ಆದ್ರೆ ಇವರೆಲ್ಲ ಸಿಂದಗಿ ಬಿಟ್ಟು ಮೂರು ವರ್ಷಗಳಾಗಿದೆ. ಮನೆಯವರನ್ನ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಹೊಟ್ಟೆಪಾಡಿಗಾಗಿ ಊರೂರು ಅಲೆಯುತ್ತಿದ್ದಾರೆ.
ಹೌದು ಇದಕ್ಕೆಲ್ಲ ಕಾರಣ ಹುಬ್ಬಳ್ಳಿ ಕಂಪನಿಯೊಂದು ನಡೆಸಿದ ಬಹುಕೋಟಿ ವಂಚನೆ ಪ್ರಕರಣ. ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿದ್ದ ಸ್ಮಾರ್ಟ್ ಲೈಟ್ ಫುಡ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿ ನಂಬಿದ್ದ ಇವರೆಲ್ಲ, ಸಿಂದಗಿಯಲ್ಲಿ ಜನರಿಂದ ಹಣ ಹೂಡಿಕೆ ಮಾಡಿಸಿದ್ದರು. ಫಿಗ್ಮಿ, ಆರ್ ಡಿ, ಎಫ್ಡಿಯಾಗಿ ಹಣ ಹಾಕಿಸಿದ್ದರು. ಆದರೆ ಕಂಪನಿ ಗ್ರಾಹಕರಿಗೆ ಹಣ ನೀಡದೆ ಬಾಗಿಲು ಹಾಕಿದ್ದರಿಂದ, ಜನರ ಕಾಟ ತಾಳದೆ ಇವರೆಲ್ಲ ಊರು ಬಿಟ್ಟಿದ್ದಾರೆ.
ಬ್ಲೇಡ್ ಕಂಪನಿ ಖೆಡ್ಡಕ್ಕೆ ಬಿದ್ದ ಸಿಂದಗಿ ಜನ ಆ ಕಂಪನಿಗೆ ದಿವಾಕರ ನಾಯಕ ಎಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರನ್ನ ನಂಬಿ ಸಿಂದಗಿಯಲ್ಲಿ ನೂರಾರು ಜನರು ಕಂಪನಿಗೆ ಏಜೆಂಟರಾಗಿ ಕೆಲಸ ಮಾಡುತ್ತಿದ್ದರು. ಜನರಿಂದ ಕಂಪನಿಗೆ ಹಣ ತುಂಬಿಸಿದ್ದರು. ಆದ್ರೆ ಏಕಾ ಏಕಿ ಕಂಪನಿ ಬಾಗಿಲು ಮುಚ್ಚಿದ್ದು ನಾಲ್ಕು ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದೆ. ಗ್ರಾಹಕರಿಗೆ ಕಂಪನಿ ನೀಡಿದ ಚೆಕ್ ಬೌನ್ಸ್ ಆಗುತ್ತಿದ್ದಂತೆ, ಗ್ರಾಹಕರೆಲ್ಲ ತಮ್ಮ ಹಣ ಕೊಡಿಸುವಂತೆ ಏಜೆಂಟರ ಹಿಂದೆ ಬಿದ್ದಿದ್ದಾರೆ. ಗ್ರಾಹಕರಿಗೆ ಉತ್ತರಿಸಲಾಗದೆ ಏಜೆಂಟರೆಲ್ಲ ಮನೆ ಬಿಟ್ಟು ಊರುರು ಅಲೆಯುತ್ತಿದ್ದಾರೆ. ಹುಬ್ಬಳ್ಳಿ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾದ್ರು ಇನ್ನು ಮಾತ್ರ ನ್ಯಾಯ ಸಿಕ್ಕಿಲ್ಲ.
ಕಂಪನಿಯನ್ನ ನಂಬಿ ಜನ ಹಣ ಹೂಡಿಕೆ ಮಾಡಿಸಿದವರು ಇಂದು ಮನೆ ಬಿಟ್ಟು ಅಲೆಯುತ್ತಿದ್ದಾರೆ. ರಾಜ್ಯದಲ್ಲಿ ಮತ್ತೊಂದು ಬಹುಕೋಟಿ ವಂಚನೆ ಹಗರಣ ಈ ಮೂಲಕ ಬೆಳಕಿಗೆ ಬಂದಿದೆ. ಇಂತಹ ಪ್ರಕರಣಗಳು ಮತ್ತೆ ಮತ್ತೆ ನಡೆಯುತ್ತಿದ್ದು, ಮೋಸ ಹೋಗುವವರು ಇರೋವರೆಗೆ ಇಂತಹ ಮೋಸ ಮಾಡುವ ಕಂಪನಿಗಳಿಗೆ ಇನ್ನೂ ಹೆಚ್ಚುತ್ತಲೇ ಬರುತ್ತವೇ. ಇಂತಹ ಕಂಪನಿಗಳಿಗೆ ಬ್ರೇಕ್ ಹಾಕಲು ಸಾಧ್ಯವಿಲ್ಲವೇ! ಇನ್ನಾದರೂ ಸರ್ಕಾರ ಇಂತಹ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡ್ರೆ ಈ ರೀತಿಯ ಘಟನೆಗಳು ಕಡಿಮೆ ಆಗುತ್ತವೆ.