ಕರ್ನಾಟಕ

karnataka

By

Published : Mar 17, 2023, 5:19 PM IST

ETV Bharat / state

ರಾಜ್ಯದಲ್ಲಿ ಇದೇ ಮೊದಲು; ಹುಬ್ಬಳ್ಳಿ ಕಿಮ್ಸ್​ನಲ್ಲಿ ಹೊಂದಾಣಿಕೆಯಾಗದ ರಕ್ತದ ಗುಂಪಿನ ಕಿಡ್ನಿ ಕಸಿ ಯಶಸ್ವಿ..

ಕರ್ನಾಟಕದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆ ಹುಬ್ಬಳ್ಳಿಯ ಕಿಮ್ಸ್​ನಲ್ಲಿ​ ಹೊಂದಾಣಿಕೆಯಾಗದ ರಕ್ತದ ಗುಂಪಿನ ಕಿಡ್ನಿ ಕಸಿ ಯಶಸ್ವಿಯಾಗಿದೆ.

huballi kims hospital
ಹುಬ್ಬಳ್ಳಿ ಕಿಮ್ಸ್​ನಲ್ಲಿ ಮೊದಲ ಬಾರಿಗೆ ಹೊಂದಾಣಿಕೆಯಾಗದ ರಕ್ತದ ಗುಂಪಿನ ಕಿಡ್ನಿ ಕಸಿ ಯಶಸ್ವಿ

ಹುಬ್ಬಳ್ಳಿ:ಇದೇ ಮೊದಲ ಬಾರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಹೊಂದಾಣಿಕೆಯಾಗದ ರಕ್ತದ ಗುಂಪಿನ ಕಿಡ್ನಿ ಕಸಿ ಯಶಸ್ವಿಯಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಈ ತರಹದ ಶಸ್ತ್ರಚಿಕಿತ್ಸೆ ನಡೆದಿದೆ ಎಂದು ಕಿಮ್ಸ್​ನ ನಿರ್ದೇಶಕರಾದ ಡಾ.ರಾಮಲಿಂಗಪ್ಪ ಅಂತರಥಾನಿ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬೇರೆ ರಾಜ್ಯ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹೊಂದಾಣಿಕೆಯಾಗದ ರಕ್ತದ ಗುಂಪಿನ ಕಿಡ್ನಿ‌ ಕಸಿ ಮಾಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಈ ತರಹದ ಕಿಡ್ನಿ ಕಸಿಯ ಶಸ್ತ್ರಚಿಕಿತ್ಸೆಯನ್ನು ಕೈಗೊಂಡಿದ್ದು, ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದರು.

ಈ ಶಸ್ತ್ರ ಚಿಕಿತ್ಸೆಯನ್ನು ನಿರಂತರ 3 ಗಂಟೆಗಳ ಕಾಲ ನಡೆಸಲಾಗಿದೆ, ಈಗ ರೋಗಿ ಆರೋಗ್ಯವಾಗಿದ್ದು, ಶಸ್ತ್ರ ಚಿಕಿತ್ಸೆಯಾದ 42 ಗಂಟೆಗಳಲ್ಲಿ ಚೇತರಿಸಿಕೊಂಡಿದ್ದಾರೆ. ಇಂದಿನ ವೈದ್ಯಕೀಯ ಬೆಳವಣಿಗೆಯಿಂದಾಗಿ ಈ ಶಸ್ತ್ರ ಚಿಕಿತ್ಸೆ ನಡೆಸಲು ಸಾಧ್ಯವಾಯಿತು. 2.70 ಲಕ್ಷ ರೂ. ವೆಚ್ಚದಲ್ಲಿ ಈ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಸಾಮಾನ್ಯವಾಗಿ ಈ ಚಿಕಿತ್ಸೆಗೆ ರೂ. 3.90 ಲಕ್ಷ ಖರ್ಚಾಗುತ್ತದೆ ಎಂದು ಹೇಳಿದರು.

ಮೂತ್ರಪಿಂಡ ವಿಭಾಗದ ಮುಖ್ಯಸ್ಥರಾದ ಡಾ.ವೆಂಕಟೇಶ ಮೊಗೆರ, ಡಾ. ಮಲಗೌಡ ಪಾಟೀಲ, ಡಾ.ವಿವೇಕ ಗಾಣಿಗೇರ, ಮೂತ್ರ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರವಿರಾಜ ರಾಯ್ಕರ, ಡಾ. ಜೈದೀಪ್ ರಟಕಲ್, ಡಾ. ಮಂಜುಪ್ರಸಾದ ಜಿ.ಬಿ, ಡಾ.ಸಂಪತ್ತಕುಮಾರ ಎನ್.ಜಿ., ಡಾ. ಚೇತನ್ ಹೊಸಕಟ್ಟಿ, ಅರಿವಳಿಕೆ ವಿಭಾಗದ ಡಾ.ಮಾಧುರಿ ಕುರಡಿ, ಡಾ. ಶೀತಲ್ ಹಿರೇಗೌಡರ, ಡಾ.ರೂಪ, ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪುರುಷೋತ್ತಮ ರೆಡ್ಡಿ ಮತ್ತು ಶಿವಾನಂದ ಹೊನಕೇರಿ ಅವರನ್ನೊಳಗೊಂಡ ತಂಡ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ತಂಡದವರಿಗೆ ಅಭಿನಂದನೆಗಳನ್ನು ತಿಳಿಸಿದರು.

ಮೂತ್ರಪಿಂಡ ವಿಭಾಗದ ಮುಖ್ಯಸ್ಥರಾದ ಡಾ ವೆಂಕಟೇಶ ಮೊಗೆರ ಮಾತನಾಡಿ, ಶಸ್ತ್ರ ಚಿಕಿತ್ಸೆ ಪೂರ್ವದಲ್ಲಿ ರೋಗಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಯಿತು. ರೋಗಿ ಅಭಿಷೇಕ್ ಬೋಗಾರ್ ಅವರಿಗೆ ಅವರ ತಾಯಿ ಪದ್ಮಾವತಿ ಅವರು ಕಿಡ್ನಿ ನೀಡಿದ್ದಾರೆ. ಅಭಿಷೇಕ್ ಅವರ ರಕ್ತದ ಗುಂಪು ಎ ಪಾಸಿಟಿವ್ ಆಗಿತ್ತು, ಪದ್ಮಾವತಿ ಅವರು ಬಿ ಪಾಸಿಟಿವ್ ರಕ್ತದ ಗುಂಪು ಹೊಂದಿದ್ದರು. ಹೀಗಾಗಿ ಶಸ್ತ್ರಚಿಕಿತ್ಸೆಯು ವೈದ್ಯರ ತಂಡಕ್ಕೆ ಸವಾಲಾಗಿ ಪರಿಣಮಿಸಿತ್ತು ಎಂದು ಅವರು ತಿಳಿಸಿದರು.

ಇನ್ನು ಪತ್ರಿಕಾಗೋಷ್ಠಿಯಲ್ಲಿ ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ, ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ ರೆಡ್ಡಿ, ಡಾ.ಚೇತನ ಹೊಸಕಟ್ಟಿ, ಶಿವಾನಂದ ಹೊನಕೇರಿ ಸೇರಿದಂತೆ ವೈದ್ಯರು, ಪ್ರಾಧ್ಯಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ:ನಿಮಗಿರುವುದು H3N2 ವೈರಸ್​ ಅಥವಾ ಕೋವಿಡ್​​; ಪತ್ತೆ ಮಾಡುವುದು ಹೇಗೆ?

ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಿ ದಾಖಲೆ ಬರೆದಿದ್ದ ಹುಬ್ಬಳ್ಳಿ ಕಿಮ್ಸ್:ಕಳೆದ ವರ್ಷ ಉತ್ತರ ಕರ್ನಾಟಕದ ಮೊದಲ ಕಾಕ್ಲಿಯರ್ ಇಂಪ್ಲಾಂಟ್ ಎಂಬ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯು ಹೊಸ ದಾಖಲೆ ಬರೆದಿತ್ತು. ನಗರದ ಕಿರೇಸೂರು ಗ್ರಾಮದ 5 ವರ್ಷದ ಬಾಲಕ ಶ್ರವಣ ದೋಷದ ಜೊತೆಗೆ ಮೂಕನಾಗಿದ್ದ. ಬಾಲಕನನ್ನು ತಪಾಸಣೆ ನಡೆಸಿದ ವೈದ್ಯಕೀಯ ತಂಡವು, ಬೆಂಗಳೂರಿನ ಇಎನ್‌ಟಿ ಶಸ್ತ್ರ ಚಿಕಿತ್ಸಕ ಡಾ.ಶಂಕರ ಮಡಿಕೇರಿ, ಕಿಮ್ಸ್ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಗದಗ, ಅರಿವಳಿಕೆ ವಿಭಾಗದ ಡಾ. ಮಾಧುರಿ, ಡಾ.ಜ್ಯೋತಿ ಸೇರಿ ವೈದ್ಯಕೀಯ ಸಿಬ್ಬಂದಿ ನೇತೃತ್ವದ ತಂಡ ಶಸ್ತ್ರಚಿಕಿತ್ಸೆ ನಡೆಸಿ ವಿಶೇಷ ಸಾಧನವನ್ನು, ಬಾಲಕನಿಗೆ ಅಳವಡಿಸಿತ್ತು.

ABOUT THE AUTHOR

...view details