ನೆಲ್ಯಾಡಿ(ದಕ್ಷಿಣ ಕನ್ನಡ): ಚಿಕಿತ್ಸೆ ಸಿಗದೇ ಗರ್ಭಿಣಿಯೊಬ್ಬರು ಸರಕಾರಿ ಆಸ್ಪತ್ರೆಗಳಿಗೆ ಅಲೆದಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ, ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗಿದ್ದು, ಅವರ ಮನೆಗೆ ಕಡಬ ತಹಶೀಲ್ದಾರ್ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಿದ್ದಾರೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ ಉಸ್ತುವಾರಿ ಸಚಿವರು ತನಿಖೆಗೆ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದೇ 18 ರಂದು ದಿನಪೂರ್ತಿ ಅಲೆದಾಟ ನಡೆಸಿದರೂ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೇ ನೆಲ್ಯಾಡಿಯ ಗರ್ಭಿಣಿಯೊಬ್ಬರು ಮನೆಗೆ ವಾಪಸ್ ಆಗಿರುವ ಪ್ರಕರಣವೊಂದರ ಕುರಿತು ಮಾಧ್ಯಮ ವರದಿಗಳು ಪ್ರಕಟಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕಂದಾಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಗರ್ಭಿಣಿ ನೋವಿಗೆ ಸ್ಪಂದನೆ ನೀಡಿದ್ದಾರೆ.
ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ ಜು.20ರಂದು ಬೆಳಿಗ್ಗೆಯೇ ಮಹಿಳೆಯ ಮನೆಯವರಿಗೆ ಫೋನ್ ಮಾಡಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆಸಿಕೊಂಡು ಮಹಿಳೆಗೆ 8 ನೇ ತಿಂಗಳಿನ ಸ್ಕ್ಯಾನಿಂಗ್ ಸೇರಿದಂತೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ಅವರು ಮಹಿಳೆಯ ಮನೆಗೆ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ.
ಸರಕಾರಿ ಆಸ್ಪತ್ರೆಗಳಿಗೆ ಅಲೆದಾಡಿದ ಗರ್ಭಿಣಿ ಮನೆಗೆ ಭೇಟಿ ನೀಡಿದ ಅಧಿಕಾರಿಗಳು ಘಟನೆ ಹಿನ್ನೆಲೆ:9 ತಿಂಗಳ ಗರ್ಭಿಣಿ ನೆಲ್ಯಾಡಿ ಗ್ರಾಮದ ದರ್ಖಾಸು ನಿವಾಸಿ ಕೂಲಿಕಾರ್ಮಿಕ ಆನಂದ ಎಂಬುವರ ಪತ್ನಿ ಗೀತಾ(30)ರವರು ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಜು.18ರಂದು ಚಿಕಿತ್ಸೆಗಾಗಿ ಬೆಳಗ್ಗೆ ನೆಲ್ಯಾಡಿ, ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಬಳಿಕ ಅಲ್ಲಿನ ವೈದ್ಯರ ಸೂಚನೆಯಂತೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿಂದ ಮಧ್ಯಾಹ್ನ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ತೆರಳಿ ಅಲ್ಲಿ ಚಿಕಿತ್ಸೆ ಸಿಗದೇ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ಎರಡೂ ಆಸ್ಪತ್ರೆಗಳ ಮಧ್ಯೆ ಮೂರ್ನಾಲ್ಕು ಬಾರಿ ಅಲೆದಾಟ ನಡೆಸಿದರೂ ಅವರಿಗೆ ಚಿಕಿತ್ಸೆ ಸಿಗಲಿಲ್ಲ.
ಕೊರೊನಾ ಭೀತಿಯಿಂದಾಗಿ ಟೆಸ್ಟ್ಗೆ ಮೊದಲು ಗರ್ಭಿಣಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯವರು ನಿರಾಕರಿಸಿದ್ದರು. ಇದರಿಂದಾಗಿ ತೀವ್ರ ತೊಂದರೆಗೆ ಸಿಲುಕಿ ತಡರಾತ್ರಿ ತನಕವೂ ವೆನ್ಲಾಕ್ ಆಸ್ಪತ್ರೆಯ ಜಗಲಿಯಲ್ಲೇ ಕಾಲ ಕಳೆದಿದ್ದ ಗೀತಾರನ್ನು ಬಳಿಕ ಅವರ ಮನೆಯವರು ಮತ್ತೆ ಮನೆಗೆ ಕರೆ ತಂದಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು. ಜು.20ರಂದು ಬೆಳಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈಯವರು ಮಹಿಳೆಯ ಮೈದುನ, ನೆಲ್ಯಾಡಿ ಗ್ರಾ.ಪಂ.ನಲ್ಲಿ ಸಿಬ್ಬಂದಿಯಾಗಿರುವ ಗಿರೀಶ್ ಅವರಿಗೆ ಕರೆ ಮಾಡಿ ಮಹಿಳೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತರುವಂತೆ ಹೇಳಿದ್ದರು.
ಅದರಂತೆ ಮನೆಯವರು ಗೀತಾರವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸೌಮ್ಯ ಅವರೂ ಮಹಿಳೆಯ ಮನೆಯವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಮಹಿಳೆ ಮನೆಗೆ ಭೇಟಿ ನೀಡಿ ಮಾತನಾಡಿದ ತಹಶೀಲ್ದಾರ್ ಅವರು, ಮಹಿಳೆಗೆ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ, ಸ್ಕ್ಯಾನಿಂಗ್ ಇತ್ಯಾದಿ ವ್ಯವಸ್ಥೆ ಮಾಡಲಾಗಿದೆ. ಜ್ವರ ಕಡಿಮೆಯಾಗಿದ್ದು, ಅವರು ಈಗ ಆರೋಗ್ಯವಾಗಿದ್ದಾರೆ. ಮಹಿಳೆಗೆ ಅಗತ್ಯ ವೈದ್ಯಕೀಯ ನೆರವು ನೀಡಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್ಮಲೆಯವರು ತಹಶೀಲ್ದಾರ್ ಜೊತೆಗಿದ್ದರು.
ಮಹಿಳೆಯ ಮನೆಯನ್ನು ಸಂಪರ್ಕಿಸುವ ಕಚ್ಛಾ ರಸ್ತೆ ಕೆಸರಿನಿಂದ ಕೂಡಿದ್ದು, ತಹಶೀಲ್ದಾರರ ವಾಹನ ಮುಂದಕ್ಕೆ ಸಾಗಲು ಅಸಾಧ್ಯವಾದ ಕಾರಣ ಅವರು ಸುಮಾರು 1 ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿಯೇ ಕ್ರಮಿಸಬೇಕಾದ ಘಟನೆಯೂ ನಡೆದಿದೆ. ಇನ್ನು ಮಹಿಳೆಗೆ ಚಿಕಿತ್ಸೆ ನೀಡದೆ ಅಲೆದಾಟ ನಡೆಸಿರುವ ಪ್ರಕರಣದ ಕುರಿತು ಜಿಲ್ಲಾ ಉಸ್ತವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಆದೇಶದಂತೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಉನ್ನತ ಮಟ್ಟದ ತನಿಖೆ ಆರಂಭಗೊಂಡಿದೆ ಎಂದು ವರದಿಯಾಗಿದೆ. ಚಿಕಿತ್ಸೆ ಸಿಗದೇ ತೊಂದರೆ ಅನುಭವಿಸಿದ ಮಹಿಳೆಯ ಪತಿ ಆನಂದ ಹಾಗೂ ಗೀತಾ ಅವರ ಜೊತೆ ಆಸ್ಪತ್ರೆಗೆ ತೆರಳಿದ್ದ ಅವರ ಅಕ್ಕ ಸುಂದರಿಯವರನ್ನು ಜು.21ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ತನಿಖಾ ತಂಡದ ಮುಂದೆ ಹಾಜರಾಗಿ ಹೇಳಿಕೆ ನೀಡಲು ತಿಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.