ಕರ್ನಾಟಕ

karnataka

ETV Bharat / state

ದ.ಕ.ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಬಿಜೆಪಿ ಸಂಸದರು ವಿಫಲ: ಮಿಥುನ್ ರೈ

ಬಿಜೆಪಿ ಸಂಸದರು ದ.ಕ.ಜಿಲ್ಲೆಯ ಯುವಕ, ಯುವತಿಯರಿಗೆ ಉದ್ಯೋಗ ಸೃಷ್ಟಿಮಾಡುವಲ್ಲಿ‌ ವಿಫಲರಾಗಿದ್ದಾರೆ. ಅಲ್ಲದೆ ರಾಜಕೀಯಕ್ಕೋಸ್ಕರ ಇಲ್ಲಿನ ಸೌಹಾರ್ದತೆಗೆ ಧಕ್ಕೆ ತರುವಂತಹ ಕೆಲಸವಾಗುತ್ತಿದೆ. ನನಗೆ ಜಿಲ್ಲೆಯ ಜನತೆ ಆಶೀರ್ವದಿಸಿದರೆ ಉದ್ಯೋಗ ಸೃಷ್ಟಿ ಮಾಡುವುದರೊಂದಿಗೆ ಸೌಹಾರ್ದತೆಯನ್ನು ಬೆಸೆಯುವ ಕಾರ್ಯ ಮಾಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಭರವಸೆ ನೀಡಿದರು.

By

Published : Mar 24, 2019, 8:25 PM IST

ಮಿಥುನ್ ರೈ

ಮಂಗಳೂರು: 28 ವರ್ಷಗಳಿಂದ ನಮ್ಮ ದ.ಕ.ಜಿಲ್ಲೆಯಲ್ಲಿ ಬಿಜೆಪಿಯ ಸಂಸದರಿದ್ದರೂ ಉದ್ಯೋಗ ಸೃಷ್ಟಿಸುವಲ್ಲಿ‌ ವಿಫಲರಾಗಿದ್ದಾರೆ. ಹೀಗಾಗಿ ಇಲ್ಲಿನ ಯುವಕರು ಉದ್ಯೋಗ ಅರಸಿ ಹೊರ ನಗರ, ರಾಜ್ಯ, ದೇಶಗಳಿಗೆ ಹೋಗುವಂತಾಗಿದೆ ಎಂದು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಸದರು ಇಲ್ಲಿನ ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿಮಾಡುವಲ್ಲಿ‌ ವಿಫಲರಾಗಿದ್ದಾರೆ. ದ.ಕ.ಜಿಲ್ಲೆ ಸೌಹಾರ್ದತೆಯ ಪ್ರದೇಶವಾಗಿದ್ದು, ಆದರೆ ದುರದೃಷ್ಟವಶಾತ್ ರಾಜಕೀಯಕ್ಕೋಸ್ಕರ ಇಲ್ಲಿನ ಸೌಹಾರ್ದತೆಗೆ ಧಕ್ಕೆ ತರುವಂತಹ ಕೆಲಸವಾಗುತ್ತಿದೆ. ನನಗೆ ಜಿಲ್ಲೆಯ ಜನತೆ ಆಶೀರ್ವದಿಸಿ ದರೆ ಉದ್ಯೋಗ ಸೃಷ್ಟಿ ಮಾಡುವುದರೊಂದಿಗೆ ಸೌಹಾರ್ದತೆಯನ್ನು ಬೆಸೆಯುವ ಕಾರ್ಯ ಮಾಡುತ್ತೇನೆ ಎಂದರು.

ಮಿಥುನ್ ರೈ

ಅಲ್ಲದೆ ನನ್ನನ್ನು ಗೆಲ್ಲಿಸಿದರೆ ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆಗೂ ತಡೆ ನೀಡುವ ಕಾರ್ಯ ಮಾಡುವೆ. ಅಲ್ಲದೆ ಇಲ್ಲಿನ ಸಾಂಸ್ಕೃತಿಕ ನಗರಿಯನ್ನಾಗಿ ಮಾಡುವಲ್ಲಿಯೂ ಪ್ರಾಮಾಣಿಕ ಪ್ರಯತ್ನ ಮಾಡುವೆ. ಈ ಎಲ್ಲದಕ್ಕೂ ಮತದಾರರ ಆಶೀರ್ವಾದ ನನಗೆ ಬೇಕು ಎಂದು ಹೇಳಿದರು.

ಇನ್ನು ಯುವಕರಿಗೆ ಅವಕಾಶ ನೀಡಬೇಕೆಂದು ಎಲ್ಲಾ ರಾಷ್ಟ್ರೀಯ ಪಕ್ಷಗಳು ಭಾಷಣಗಳಲ್ಲಿ ಹೇಳುತ್ತವೆ. ಆದರೆ ಕಾಂಗ್ರೆಸ್ ಪಕ್ಷ ಯುವಕರ ಜೊತೆಗಿದೆ, ಯುವಕರಿಗೆ ಮನ್ನಣೆ ನೀಡುತ್ತದೆ ಎನ್ನುವುದಕ್ಕೆ ನನ್ನನ್ನು ಸಂಸದ ಸ್ಥಾನಕ್ಕೆ ಅಧಿಕೃತವಾಗಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದೇ ಸಾಕ್ಷಿ. ನಾಳೆ ಬೆಳಗ್ಗೆ 10.30ಕ್ಕೆ ನಗರದ ಪುರಭವನದಲ್ಲಿ ನಡೆಯುವ ಕಾಂಗ್ರೆಸ್-ಜೆಡಿಎಸ್ ಜಂಟಿ ಸಭೆಯ ಬಳಿಕ ಯುವ ಕಾರ್ಯಕರ್ತರ ಒಗ್ಗೂಡಿಸಿ, ಹಿರಿಯ ನಾಯಕರ ಆಶೀರ್ವಾದದೊಂದಿಗೆ ಮಧ್ಯಾಹ್ನ 12.49ಕ್ಕೆ ನಾಮಪತ್ರ ಸಲ್ಲಿಸಲಿದ್ದೇನೆ. ಜಿಲ್ಲೆಯ ಎಲ್ಲಾ ಮತದಾರರು ನನ್ನನ್ನು ಆಶೀರ್ವದಿಸಬೇಕು ಎಂದರು.

ABOUT THE AUTHOR

...view details