ಕರ್ನಾಟಕ

karnataka

By

Published : Mar 23, 2022, 8:59 AM IST

ETV Bharat / state

ಜೆಸಿಬಿಯಿಂದ ಕಾಡಾನೆಗಳನ್ನು ಹಿಂಸಿಸಿ ವಿಕೃತಿ ಮೆರೆದ ಕಿಡಿಗೇಡಿಗಳು: ವಿಡಿಯೋ ವೈರಲ್​

ಚಿಕ್ಕಮಗಳೂರಿನ ಭದ್ರಾ ಸಂರಕ್ಷಿತ ಅಭಯಾರಣ್ಯದ ತಣಿಗೆಬೈಲು‌ ಪ್ರದೇಶದಲ್ಲಿ ಕಾಡಾನೆಗಳಿಗೆ ಜೆಸಿಬಿ ಯಂತ್ರದ ಮೂಲಕ ತೊಂದರೆ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ವಿಡಿಯೋ ವೈರಲ್​
ವಿಡಿಯೋ ವೈರಲ್​

ಚಿಕ್ಕಮಗಳೂರು: ಇತ್ತೀಚೆಗೆ ಕಾಡಿನಿಂದ ನಾಡಿನತ್ತ ವನ್ಯಜೀವಿಗಳು ಮುಖ ಮಾಡುತ್ತಿವೆ. ಸ್ವಚ್ಛಂದವಾಗಿ ಓಡಾಟ ನಡೆಸುವ ವನ್ಯಜೀವಿಗಳ ಆವಾಸಸ್ಥಾನವಾಗಿರುವ ಅಭಯಾರಣ್ಯದಲ್ಲಿ ಕಿಡಿಗೇಡಿಗಳು ವಿಕೃತವಾಗಿ ಕಾಡು ಪ್ರಾಣಿಗಳಿಗೆ ಕಿರುಕುಳು ನೀಡಿದ್ದಾರೆ. ಚಿಕ್ಕಮಗಳೂರಿನ ಭದ್ರಾ ಸಂರಕ್ಷಿತಾ ಅಭಯಾರಣ್ಯದ ತಣಿಗೆಬೈಲು‌ ಪ್ರದೇಶದಲ್ಲಿ ಕಾಡಾನೆಗಳಿಗೆ ಜೆಸಿಬಿ ಯಂತ್ರದ ಮೂಲಕ ತೊಂದರೆ ಕೊಟ್ಟಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಡಾನೆಗಳು ಓಡಾಟ ನಡೆಸುತ್ತಿರುವ ವೇಳೆ ಜೆಸಿಬಿಯಂತ್ರ ರಸ್ತೆಗೆ ಅಡ್ಡವಾಗಿ ಬಂದಿದೆ. ಆ ಜೆಸಿಬಿ ಯಂತ್ರದ ಚಾಲಕ ಕಾಡಾನೆಗಳ ಹಿಂಡು ನೋಡಿ ಹಿಂದೆ ಹೋಗುವುದನ್ನು ಬಿಟ್ಟು ಅವುಗಳನ್ನು ಎದುರಿಸುವ ಪ್ರಯತ್ನ ಮಾಡಿದ್ದಾನೆ. ಪುಟ್ಟ ಮರಿಯೊಂದಿಗೆ ಕಾಡಾನೆ ಮುಂದಕ್ಕೆ ಹೋಗುವ ಪ್ರಯತ್ನ ನಡೆಸುತ್ತದೆ. ಆದರೆ, ಜೆಸಿಬಿ ಯಂತ್ರದ ಶಬ್ಧಕ್ಕೆ ಅದು ಹಿಂದಕ್ಕೆ ಹೋಗುತ್ತದೆ. ಇದನ್ನು ಕಿಡಿಗೇಡಿಗಳು ವಿಡಿಯೋ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ವೈರಲ್​ ವಿಡಿಯೋ

ಅಭಯಾರಣ್ಯದಲ್ಲಿ ಕೆಲಸ ಮಾಡುವಾಗ ಯಂತ್ರಗಳ ಬಳಕೆ‌‌‌ಗೆ ಅನುಮತಿ ನೀಡಿದ್ದಕ್ಕೆ ಅರಣ್ಯ ಇಲಾಖೆ ಟೀಕೆಗೆ ಗುರಿಯಾಗುತ್ತಿದೆ.‌ ಇದರ ನಡುವೆ ರಸ್ತೆಯನ್ನು ಅಭಿವೃದ್ದಿಪಡಿಸುವ ಕೆಲಸವನ್ನು ಖಾಸಗಿ ವ್ಯಕ್ತಿಗಳಿಗೆ ಟೆಂಡರ್ ಮೂಲಕ ವಹಿಸಿಕೊಡಲಾಗಿದೆ. ಗುತ್ತಿಗೆದಾರರು ಅಭಯಾರಣ್ಯದೊಳಗೆ ಜೆಸಿಬಿ ಬಳಸಿ ರಸ್ತೆ ಅಭಿವೃದ್ಧಿ ಪಡಿಸುತ್ತಿದ್ದರೂ ಯಾವುದೇ ಆಕ್ಷೇಪವನ್ನು ಅರಣ್ಯ ಇಲಾಖೆ‌ ಸಿಬ್ಬಂದಿ ವ್ಯಕ್ತಪಡಿಸಿಲ್ಲ. ತದನಂತರ ಎಚ್ಚೆತ್ತುಕೊಂಡ ಇಲಾಖೆ, ಘಟನೆಗೆ ಸಂಬಂಧಿಸಿದಂತೆ ಒಬ್ಬನ ವಿರುದ್ಧ ಪ್ರಕರಣ ದಾಖಲು ಮಾಡಿದೆ.

ಅಭಯಾರಣ್ಯದ ವ್ಯಾಪ್ತಿಯೊಳಗೆ ವನ್ಯಜೀವಿಗಳು ಮುಕ್ತವಾಗಿ ಸಂಚರಿಸಬೇಕು, ಅವುಗಳಿಗೆ ಯಾರೂ ಕೂಡ ತೊಂದರೆ ಕೊಡಬಾರದು. ಈ ನಿಟ್ಟಿನಲ್ಲಿ ಅಭಯಾರಣ್ಯದ ವ್ಯಾಪ್ತಿಯೊಳಗೆ ಯಾವುದೇ ಕೆಲಸವನ್ನು ಮಾಡುವಾಗ ಅರಣ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಜೆಸಿಬಿ ಸೇರಿದಂತೆ ಯಂತ್ರಗಳ ಬಳಕೆಗೆ ಸಾಧ್ಯವಾದಷ್ಟು ಬ್ರೇಕ್ ಹಾಕಿ ಮನುಷ್ಯರ‌ ಕೈಯಿಂದಲೇ ಕೆಲಸ ಮಾಡಿಸುವತ್ತ ಇಲಾಖೆ‌ ಕ್ರಮಕೈಗೊಳ್ಳಬೇಕು. ಅದನ್ನ ಬಿಟ್ಟು ವನ್ಯ ಜೀವಿಗಳಿಗೆ ತೊಂದರೆ ಕೊಡುವ ಕೆಲಸವನ್ನು ‌ಮಾಡಬಾರದು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.‌

ಇದನ್ನೂ ಓದಿ;ಇಂದು ಕೂಡ ಪೆಟ್ರೋಲ್‌, ಡೀಸೆಲ್‌ ಲೀಟರ್‌ಗೆ ತಲಾ 80 ಪೈಸೆ ಏರಿಕೆ; ಬೆಂಗಳೂರಿನಲ್ಲಿ ತೈಲ ಬೆಲೆ ಹೀಗಿದೆ..

ABOUT THE AUTHOR

...view details