ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಜುಲೈ 1ರಿಂದ ಭಕ್ತರಿಗೆ ಮುಕ್ತವಾಗಿದೆ.
ದೇವಸ್ಥಾನದ ಆಡಳಿತ ಮಂಡಳಿ ಕೆಲ ಷರತ್ತುಗಳನ್ನು ವಿಧಿಸಿ, ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿ ಕೊಟ್ಟಿದೆ. ಇದರ ಜೊತೆಗೆ ಊಟದ ವ್ಯವಸ್ಥೆ, ವಸತಿ ಗೃಹದ ವ್ಯವಸ್ಥೆಗಳನ್ನು ಕೆಲ ಷರತ್ತುಗಳನ್ವಯ ಭಕ್ತರಿಗೆ ನೀಡಲಾಗಿತ್ತು.
ಇಂದಿನಿಂದ ಹೊರನಾಡಿನಲ್ಲಿ ವಸತಿ ಗೃಹಗಳು ಬಂದ್ ಆದರೆ ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ದೇವಸ್ಥಾನದ ಆಡಳಿತ ಮಂಡಳಿ ಒಂದು ಮಹತ್ವದ ಪ್ರಕಟಣೆ ಹೊರಡಿಸಿದೆ. ಇಂದಿನಿಂದ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕ್ಷೇತ್ರದ ವಸತಿ ಗೃಹಗಳು ಸಿಗುವುದಿಲ್ಲ. ವಸತಿ ಗೃಹಗಳನ್ನು ಮುಂದಿನ ಸೂಚನೆವರೆಗೂ ಬಂದ್ ಮಾಡುವ ನಿರ್ಧಾರಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಬಂದಿದೆ.
ಆದರೆ ದೇವರ ದರ್ಶನ, ಪೂಜೆ ಹಾಗೂ ಪ್ರಸಾದ ವ್ಯವಸ್ಥೆ ಎಂದಿನಂತೆ ಮುಂದುವರೆಯಲಿದೆ. ಶ್ರೀ ಕ್ಷೇತ್ರಕ್ಕೆ ಬರುವಂತಹ ಭಕ್ತರು ಈ ವಿಚಾರವನ್ನು ತಿಳಿದು ತಮ್ಮ ಯಾತ್ರೆಯನ್ನು ಆಯೋಜನೆ ಮಾಡಿಕೊಳ್ಳಬೇಕೆಂದು ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಈ ಪ್ರಕಟಣೆ ಹೊರಡಿಸಿದೆ.