ಚಾಮರಾಜನಗರ: ರಾಜ್ಯದ ಬಗ್ಗೆ ಗಂಭೀರತೆ, ಭಾಷೆ ಬಗ್ಗೆ ಗೌರವ ಇಟ್ಟುಕೊಂಡು ಇರುವುದಾದರೆ ಇರಿ, ಇಲ್ಲವೆಂದರೆ ರಾಜ್ಯ ಬಿಟ್ಟು ಹೋಗಿ ಎಂದು ಅನ್ಯಭಾಷಿಕ ವ್ಯಾಪಾರಿಗಳು, ಉದ್ಯಮಿಗಳಿಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
ಅನ್ಯ ಭಾಷಿಕ ವ್ಯಾಪಾರಿಗಳಿಗೆ ವಾಟಾಳ್ ನಾಗರಾಜ್ ಎಚ್ಚರಿಕೆ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ವಾಡಿಗಳು, ಗುಜರಾತಿಗಳು ಕನ್ನಡವನ್ನು ಕಲಿತು ಹಿಂದಿ ಒಲವು ಬಿಡಬೇಕು. ಇದು ಬಹಳ ಗಂಭೀರ ಎಚ್ಚರಿಕೆ. ಈ ರಾಜ್ಯದಲ್ಲಿ ಹೊಂದಿಕೊಂಡು ಹೋಗಬೇಕಾದರೆ ಕನ್ನಡ ಬಗ್ಗೆ ಗೌರವ, ಗಾಂಭೀರ್ಯ ಇರಬೇಕು. ಇಲ್ಲದಿದ್ದರೆ ರಾಜ್ಯ ಬಿಟ್ಟು ಹೋಗಬಹುದು ಎಂದರು.
ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆ ಮಾಡಬಾರದು. ಹಿಂದಿ ಹೇರಿಕೆ ನಿರಂತರವಾಗಿ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಹಿಂದಿ ಹೇರಿಕೆ ಬೇಡವೇ ಬೇಡ. ಹಿಂದಿ ಹೇರಿಕೆ ವಿರುದ್ಧ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ರಾಜ್ಯಾದ್ಯಂತ ತೀವ್ರ ಹೋರಾಟವನ್ನು ಆರಂಭ ಮಾಡುತ್ತೇವೆ. ಕರ್ನಾಟಕದಲ್ಲಿ ಕನ್ನಡವೇ ರಾಷ್ಟ್ರೀಯ ಭಾಷೆ. ಕನ್ನಡವನ್ನು ತೀವ್ರವಾಗಿ ಬೆಳೆಸಬೇಕಾದ ಅವಶ್ಯಕತೆ ಇದೆ ಎಂದರು.
ಮೈಸೂರು ದಸರಾ ಯಾವುದೇ ಕಾರಣಕ್ಕೂ ನಾಮಕಾವಸ್ಥೆಯಾಗಬಾರದು. ಅರಮನೆ ಪ್ರವೇಶ ಟಿಕೆಟ್ ದರ ಕಡಿಮೆಯಾಗಬೇಕು. ಚಿತ್ರಮಂದಿರ, ಬಾರ್ಗಳು ತೆರೆದಿದ್ದು, ಎಲ್ಲ ನಿಬಂಧನೆಗಳನ್ನು ಸರ್ಕಾರ ತೆರವುಗೊಳಿಸಿದೆ. ದಸರಾ ನಿಂತು 2 ವರ್ಷ ಆಗಿದೆ. ಆದ್ದರಿಂದ ಅರಮನೆಯಿಂದ ಬನ್ನಿ ಮಂಟಪದವರೆಗೆ ಸಂಪೂರ್ಣ ಮೆರವಣಿಗೆಯಾಗಿ ಅದ್ಧೂರಿ ದಸರಾ ಆಗಬೇಕು ಎಂದು ಆಗ್ರಹಿಸಿದರು.