ಚಾಮರಾಜನಗರ:ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾದರೆ ಚಾಮರಾಜನಗರದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಚಂದನ ವಾಹಿನಿಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ.ಮಹೇಶ್ ಜೋಶಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆ ಮಾಡಲು ಈ ಬಾರಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೇವಾ ಆಕಾಂಕ್ಷಿಯಾಗಿದ್ದೇನೆ ಹೊರತು ಅಭ್ಯರ್ಥಿಯಲ್ಲ. ಚಾಮರಾಜನಗರ ಜಿಲ್ಲೆಯು ಜನಪದ ಕಲೆಗಳ ತವರೂರಾಗಿದ್ದು ಇಂತಹ ಐತಿಹಾಸಿಕ ಜಾನಪದ ನಾಡಲ್ಲಿ ಸಾಹಿತ್ಯ ಸಮ್ಮೇಳನ ಮಾಡುವುದು ನನ್ನ ಗುರಿಯಾಗಿದೆ ಎಂದರು.
ರಾಜ್ಯಾದ್ಯಂತ ಇದುವರೆಗೆ ಯಾದಗಿರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರದಲ್ಲಿ ಸಮ್ಮೇಳನಗಳು ನಡೆದಿಲ್ಲ. ಮುಂಬರುವ ಕಸಾಪ ರಾಜ್ಯಾಧ್ಯಕ್ಷ ಚುನಾವಣೆಯಲ್ಲಿ ನಾನು ಸ್ಪರ್ಧಿಸಿ ಜಯಗಳಿಸಿದರೆ ಚಾಮರಾಜನಗರಲ್ಲಿ ಸಮ್ಮೇಳನ ಮಾಡಿಯೇ ತೀರುತ್ತೇನೆ ಎಂದರು.