ಚಾಮರಾಜನಗರ: ಬೇಟೆ ಆಡುವುದು ಹೇಗೆ, ಕಾಡುಹಂದಿಯ ರುಚಿಕರ ಖಾದ್ಯ, ದಂತ, ವನ್ಯಜೀವಿ ಚರ್ಮಗಳ ವಸ್ತು ಮಾರಾಟಕ್ಕಿದೆ. ಬೇಟೆ ಆಡುವ ಬಗೆ ಹೀಗೆ ಎಂದು ಯೂಟ್ಯೂಬ್ ಸೇರಿದಂತೆ ಹತ್ತಾರು ವೆಬ್ ಸೈಟ್ಗಳಲ್ಲಿ ಕಾಣಸಿಗುವ ವಿಡಿಯೋ ಹಾಕಿದವರನ್ನು ಬೇಟೆಯಾಡಲು ಅರಣ್ಯ ಇಲಾಖೆ ಮುಂದಾಗಿದೆ.
ಚಾಮರಾಜನಗರ ವೃತ್ತದ ಸಿಸಿಎಫ್ ಮನೋಜ್ ಕುಮಾರ್ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಲು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು ಜಿಲ್ಲಾ ಮಟ್ಟದಲ್ಲೇ ಮೊದಲು ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿಲು ಮುಂದಾಗಿದ್ದಾರೆ.
ವನ್ಯಜೀವಿಗಳ ಬೇಟೆಗೆ ಪ್ರೇರೆಪಿಸುವುದು ಕೂಡ ಅರಣ್ಯ ಅಪರಾಧವಾಗಿರುವುದರಿಂದ ಬೇಟೆಯಾಡುವ ವಿಡಿಯೋಗಳನ್ನು ಅಪ್ಲೋಡ್ ಮಾಡುವುದು, ಬೇಟೆಯಾಡಿ ಅಡುಗೆ ಮಾಡುವ ವಿಡಿಯೋಗಳು, ವಿವಿಧ ವನ್ಯಜೀವಿ ಉತ್ಪನ್ನಗಳ ಬೆಲೆಗಳು ಮತ್ತು ಮಾರಾಟಕ್ಕೆ ಯತ್ನ, ಬೇಟೆಯ ವಿಧಾನಗಳು ಮುಂತಾದವುಗಳ ವಿಡಿಯೋ ಅಪ್ಲೋಡ್ ಮಾಡುವವರ ಮೇಲೆ ಹದ್ದಿನ ಕಣ್ಣಿಡಲು ಮುಂದಾಗಿದ್ದಾರೆ.
ಹಂಟಿಂಗ್ ವಿಡಿಯೋ ಹಾಕಿದವರ ಬೇಟೆಯಾಡಲು ಮುಂದಾದ ಅರಣ್ಯ ಇಲಾಖೆ ಏನಿದು ತಂತ್ರಾಂಶ?:ಬೇಟೆಗೆ ಸಂಬಂಧಿಸಿದ ವಿಡಿಯೋಗಳು ಅಪ್ಲೋಡ್ ಮಾಡಿದ ಕೂಡಲೇ ಅರಣ್ಯ ಇಲಾಖೆಯ ಕಂಟ್ರೋಲ್ ರೂಮಿಗೆ ಅಲರ್ಟ್ ಮೆಸೇಜ್ ಬರಲಿದೆ. ನೆಟ್ವರ್ಕ್ನ ಐಪಿ ಅಡ್ರೆಸ್, ವಿಡಿಯೋದಲ್ಲಿರುವ ಅಪರಾಧ ಅಂಶಗಳ ವಿವರ ಕ್ಷಣ ಮಾತ್ರದಲ್ಲೇ ಅರಣ್ಯಾಧಿಕಾರಿಗಳ ಗಮನಕ್ಕೆ ಬರಲಿದೆ.
ವೆಬ್ಸೈಟ್ಗಳು, ಸಾಮಾಜಿಕ ಜಾಲತಾಣಗಳ ಮೂಲಕ ಮಾರಾಟಕ್ಕೆ ಯತ್ನಿಸುವವರ ಕುರಿತು ಅರಣ್ಯ ಇಲಾಖೆಗೆ ಅಲರ್ಟ್ ಮೆಸೇಜ್ ಬರುವಂತೆ ತಂತ್ರಾಂಶ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಈ ಕುರಿತು ಚಾಮರಾಜನಗರ ಸಿಸಿಎಫ್ ಮನೋಜ್ ಕುಮಾರ್ ಮಾತನಾಡಿ, ಈಗಾಗಲೇ ಅರಣ್ಯ ಇಲಾಖೆಯು ಕ್ಷಿಪ್ರ ಕಾರ್ಯಪಡೆಯನ್ನು ರಚಿಸಲಾಗಿದೆ.
ಅವರಿಗೆ ಪ್ರತ್ಯೇಕ ವಾಹನ,ಕಾರ್ಯಾಚರಣೆಗೆ ಬಳಸುವ ಸಾಧನಗಳು ಕೂಡ ಶೀಘ್ರವೇ ವಿಲೇವಾರಿ ಆಗಲಿದೆ. ಅರಣ್ಯ ಅಪರಾಧ ತಡೆಯಲು ಹೊಸ ತಂತ್ರಾಂಶ ಅಭಿವೃದ್ಧಿಪಡಿಸಲು ಚಿಂತನೆ ನಡೆದಿದೆ. ಇದು ದೇಶದ ಮಟ್ಟದಲ್ಲೇ ನಡೆದರೆ ಎಲ್ಲಾ ರಾಜ್ಯಗಳಿಗೂ ಉಪಯೋಗವಾಗಲಿದೆ. ಈ ಸಂಬಂಧ ಮೇಲಾಧಿಕಾರಿಗಳ ಗಮನ ಸೆಳೆದಿದ್ದೇನೆ ಎಂದರು.