ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಕೋವಿಡ್-19 ಪ್ರಕರಣಗಳು ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಪಟ್ಟಣದಲ್ಲಿ ಕಂಟೈನ್ಮೆಂಟ್ ವಲಯಗಳು ಹೆಚ್ಚಾಗುತ್ತಿವೆ. ಈಗಾಗಲೇ 6 ಕಂಟೈನ್ಮೆಂಟ್ಗಳನ್ನು ಗುರುತಿಸಿ ಸೀಲ್ಡೌನ್ ಮಾಡಲಾಗಿದ್ದು, ಪಟ್ಟಣದ ಮಹದೇವಪ್ರಸಾದ್ ನಗರದಲ್ಲಿ 3 ವಲಯ ಸೇರಿದಂತೆ ಗಾಡಿ ಕಾರ್ಖಾನೆ, ಕನಕದಾಸ ಬಡಾವಣೆ ಹಾಗೂ ಪೊಲೀಸ್ ಠಾಣೆ ಸೀಲ್ಡೌನ್ ಮಾಡಲಾಗಿದೆ.
ಗುಂಡ್ಲುಪೇಟೆ ಅಧಿಕವಾಗುತ್ತಿರುವ ಕೊರೊನಾ ಪ್ರಕರಣ: 6 ಕಂಟೈನ್ಮೆಂಟ್ ವಲಯ ಗುರುತಿಸಿ ಸೀಲ್ಡೌನ್ ಜನಸಂದಣಿ ಕಡಿಮೆಯಾಗಿಲ್ಲ: ಪಟ್ಟಣದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸಹ ಜನರು ಅನವಶ್ಯಕವಾಗಿ ತಿರುಗಾಡುವುದನ್ನು ನಿಲ್ಲಿಸಿಲ್ಲ. ಅಂತರವಾಗಲಿ, ಮಾಸ್ಕ್ ಬಳಸುವುದಾಗಲಿ ಮಾಡುತ್ತಿಲ್ಲ. ಎಂದಿನಂತೆ ಜನರು ವ್ಯವಹಾರ ನಡೆಸುತ್ತಿದ್ದಾರೆ. ಪೊಲೀಸರು, ಪುರಸಭೆಯ ಅಧಿಕಾರಿಗಳು, ತಾಲ್ಲೂಕು ಆಡಳಿತ ಕೊರೊನಾ ಪ್ರಾರಂಭದ ಹಂತದಲ್ಲಿ ಕೆಲಸ ಮಾಡಿದ ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಲಾಕ್ಡೌನ್ ಒತ್ತಾಯ: ತಮಿಳುನಾಡಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆ ಅಲ್ಲಿನ ಸಂಪರ್ಕ ಹೊಂದಿದವರಲ್ಲಿ ಸೋಂಕು ದೃಢವಾಗುತ್ತಿದೆ. ಹಾಗಾಗಿ ಗಡಿಯನ್ನು ಬಂದ್ ಮಾಡಬೇಕು. ತಮಿಳುನಾಡು ಮತ್ತು ಕೇರಳಕ್ಕೆ ಹೋಗುವ ವಾಹನಗಳು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಇರುವ ಗ್ರಾಮಗಳಲ್ಲಿ ನಿಲ್ಲಬಾರದು ಎಂಬ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕು ಎಂದು ಗ್ರಾಮೀಣ ಭಾಗದ ಜನರ ಒತ್ತಾಯವಾಗಿದೆ.
ಕೊರೊನಾ ಪ್ರಾರಂಭಿಕ ಹಂತದಲ್ಲಿರುವಾಗಲೇ ಇಲ್ಲಿನ ರೈತರು, ಪ್ರಗತಿಪರರು ಮತ್ತು ಸಾರ್ವಜನಿಕರು ತಮಿಳುನಾಡು ಮತ್ತು ಕೇರಳದ ಗಡಿಯನ್ನು ಬಂದ್ ಮಾಡಿ ಯಾವುದೇ ವಾಹನ ಒಳಗೆ ಬರದಂತೆ, ಹೊರಗೆ ಹೋಗದಂತೆ ಗಡಿಯನ್ನು ಮುಚ್ಚಿ ಎಂದು ಒತ್ತಾಯ ಮಾಡಿದ್ದರೂ ಸಹ ಜಿಲ್ಲಾಡಳಿತ ಕಿವಿಗೆ ಹಾಕಿಕೊಳ್ಳದ ಪರಿಣಾಮ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುತ್ತಿರುವುದಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಸಾರ್ವಜನಿಕರು ಓಡಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಎಷ್ಟೇ ಆತ್ಮೀಯರಿದ್ದರೂ ಸಹ ಅಂತರ ಕಾಯ್ದುಕೊಂಡು ವ್ಯವಹಾರ ನಡೆಸಬೇಕು. ಅವಶ್ಯಕತೆ ಇದ್ದಲ್ಲಿ ಮಾತ್ರ ಹೊರಗೆ ಬನ್ನಿ ಎಂದು ಪ್ರಗತಿಪರ ಚಿಂತಕ ಶ್ಯಾನಡ್ರಹಳ್ಳಿ ಕಾಂತರಾಜು ಅವರು ಮನವಿ ಮಾಡಿದ್ದಾರೆ.