ಚಾಮರಾಜನಗರ :ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಧಾಮದಲ್ಲಿ ರಾಷ್ಟ್ರೀಯ ವನ್ಯಪ್ರಾಣಿಗಳ ಕ್ಯಾಮೆರಾ ಟ್ರ್ಯಾಪಿಂಗ್ ಗಣತಿ ಮೊದಲ ಹಂತ ಮುಕ್ತಾಯಗೊಂಡು 2ನೇ ಹಂತಕ್ಕೆ ಕಾಲಿಟ್ಟಿದೆ.
ಮಹದೇಶ್ವರಬೆಟ್ಟ ವನ್ಯಜೀವಿ ಧಾಮ ವಲಯ 906 ಎಕರೆ ವಿಸ್ತೀರ್ಣ ಹೊಂದಿದೆ. ಹನೂರು, ಮಹದೇಶ್ವರಬೆಟ್ಟ, ಪಿ.ಜಿ.ಪಾಳ್ಯ, ಪಾಲರ್, ರಾಮಾಪುರ, ಹೂಗ್ಯ ಒಟ್ಟು 6 ವಲಯಗಳಲ್ಲಿ ಗಣತಿ ಕಾರ್ಯಕ್ಕಾಗಿ 450 ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸುವ ಕಾರ್ಯಕ್ಕೆ ಅ.14ರಂದು ಡಿಎಫ್ವಿ ಏಡುಕೊಂಡಲು ನೇತೃತ್ವದಲ್ಲಿ ಚಾಲನೆ ಸಿಕ್ಕಿತ್ತು. 270 ಸಿಬ್ಬಂದಿಯನ್ನೊಳಗೊಂಡ ವಿವಿಧ ಕಡೆಗಳಲ್ಲಿ 300 ಕ್ಯಾಮೆರಾ ಅಳವಡಿಸಿ ಮೊದಲ ಹಂತದ ಗಣತಿ ಕಾರ್ಯ ಮುಕ್ತಾಯಗೊಂಡಿದೆ.
ಇದೀಗ 2ನೇ ಹಂತದ ಗಣತಿ ಕಾರ್ಯವನ್ನು ಮುಂದುವರೆಸಲಾಗಿದೆ. ಉಳಿದ 150 ಪ್ರದೇಶಗಳಲ್ಲಿ ಕ್ಯಾಮೆರಾ ಅಳವಡಿಸಿ ಬಳಿಕ ದತ್ತಾಂಶ ಶೇಖರಣೆ ಕಾರ್ಯ ನಡೆಯಲಿದೆ. ಕೇಂದ್ರ ಸರ್ಕಾರ ಹಾಗೂ ಅರಣ್ಯ ಇಲಾಖೆಯಿಂದ 3ನೇ ಹಂತದಲ್ಲಿ ಹುಲಿ ಹಾಗೂ ವನ್ಯಪ್ರಾಣಿಗಳ ಗಣತಿಯು ಸಹ ಜರುಗಲಿದೆ. ಕ್ಯಾಮೆರಾ ಸೇರಿದಂತೆ ಎಸ್ಡಿ ಕಾರ್ಡ್, ಲ್ಯಾಪ್ಟಾಪ್, ರಿಮೋಟ್ ಕಂಟ್ರೋಲ್ ಇತರೆ ಸಾಮಗ್ರಿಗಳನ್ನು ಬಳಕೆ ಮಾಡಿ ಗಣತಿ ಕಾರ್ಯ ಮಾಡಲಾಗುತ್ತಿದೆ.
ಉತ್ತಮ ಮಳೆಯಾಗಿರುವ ಹಿನ್ನೆಲೆ ಮೇವು ಸೇರಿದಂತೆ ನೂರಾರು ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಹಾಗಾಗಿ, ಅಲ್ಲಲ್ಲಿ ಹುಲಿ ಸೇರಿದಂತೆ ವನ್ಯಪ್ರಾಣಿಗಳು ಓಡಾಡಿರುವ ಗುರುತುಗಳು ಪತ್ತೆಯಾಗಿವೆ. ಇದರಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿ ಸಿಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.