ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿರುವ ಜಿಂದಾಲ್ ಕಂಪನಿಗೆ ಭೂಮಿ ಕೊಡುತ್ತಿರುವ ವಿಚಾರ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿಲ್ಲ. ಆದರೆ ಜಿಂದಾಲ್ ಕಂಪನಿ ಕನ್ನಡಿಗರಿಗೆ ಉದ್ಯೋಗ ನೀಡುವ ಕುರಿತು ಚರ್ಚೆ ನಡೆದಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ಜಿಂದಾಲ್ನಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕುರಿತು ಚರ್ಚೆ: ಕೃಷ್ಣಬೈರೇಗೌಡ
ಜಿಂದಾಲ್ ಕಂಪನಿ ಸ್ಥಳೀಯರಿಗೆ ಕೆಲಸ ಕೊಟ್ಟಿದೆಯೇ, ಇಲ್ಲವೇ ? ಎಂಬುದನ್ನು ಖಚಿತಪಡಿಸಿಕೊಳ್ಳುವುದರ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಮಾಹಿತಿ ನೀಡಿದ ಅವರು, ಜಿಂದಾಲ್ ಕಂಪನಿ ಸ್ಥಳೀಯರಿಗೆ ಕೆಲಸ ಕೊಟ್ಟಿದೆಯೇ, ಇಲ್ಲವೇ? ಎಂಬುದನ್ನು ಖಚಿತಪಡಿಸಿಕೊಳ್ಳುವುದರ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಕುರೇಕುಪ್ಪ, ಜೆಎಸ್ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಸಂಸ್ಥೆಗೆ ಭೂಮಿಯನ್ನು ಲೀಸ್ಗೆ ಬದಲಾಯಿಸಿ, ಕ್ರಯಪತ್ರ ಮಾಡಿಕೊಡಲು ಕಳೆದ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಹಿಂದೆ ಈ ಭೂಮಿಯನ್ನು 10 ವರ್ಷಗಳ ಲೀಸ್ಗೆ ನೀಡಲಾಗಿತ್ತು. 2006 ರಲ್ಲಿ ಬಿಜೆಪಿ ಸರ್ಕಾರವಿದ್ದಾಗಲೇ ಲೀಸ್ ಕಂ ಸೇಲ್ ಒಪ್ಪಂದವಾಗಿತ್ತು ಎಂದರು.
ವಿವಿಧ ಖಾಸಗಿ ಕಂಪನಿಗಳಲ್ಲಿ ಸರೋಜಿನಿ ಮಹಿಷಿ ವರದಿ ಅನ್ವಯ ಕನ್ನಡಿಗರಿಗೆ ಕೆಲಸ ಸಿಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಹಾಗಾಗಿ, ಈ ಬಗ್ಗೆ ಇಂದಿನ ಸಭೆಯಲ್ಲಿ ಸಂಪುಟದ ಸಹೋದ್ಯೋಗಿಗಳು ಚರ್ಚೆ ನಡೆಸಿದ್ದಾರೆ. ಜಿಂದಾಲ್ ಕಂಪನಿ ಇರುವ ಪ್ರದೇಶದಲ್ಲಿ ಖನಿಜ ಸಂಪತ್ತು ಇದೆ ಎಂದು ಕೆಲವರು ಹೇಳಿದ್ದಾರೆ. ಆದರೆ, ಒಂದು ವೇಳೆ ಇದ್ದರೂ ಅದು ಸರ್ಕಾರದ ಸ್ವತ್ತು. ಭೂಮಿ ಸೇಲ್ ಆಗಿದ್ದರೂ, ಭೂಮಿ ಒಳಗಿರುವ ಸಂಪತ್ತು ಸರ್ಕಾರಕ್ಕೆ ಸೇರುತ್ತದೆ. ಇನ್ನು ಕಾರ್ಖಾನೆ ಒಳಗೆ ಇರುವ ಜಾಗದಲ್ಲಿ ಮೈನಿಂಗ್ ಮಾಡಲು ಹೇಗೆ ಸಾಧ್ಯ? ಆ ಸನ್ನಿವೇಶ ಉದ್ಭವಿಸುವುದಿಲ್ಲ ಎಂದು ಹೇಳಿದರು.