ಬೆಳಗಾವಿ:ನಮ್ಮ ಸಮಾಜದ ಶಾಪಕ್ಕೆ ಹಿಂದಿನ ಸಮ್ಮಿಶ್ರ ಸರ್ಕಾರ ಉರುಳಿತು. ವಾಲ್ಮೀಕಿ ಸಮಾಜದ ಶಾಪಕ್ಕೆ ನೀವೂ ಒಳಗಾಗಬೇಡಿ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ವಾಲ್ಮೀಕಿ ಸಮುದಾಯದ ಶಾಪಕ್ಕೆ ಒಳಗಾಗಬೇಡಿ: ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ವಾಲ್ಮೀಕಿ ಸ್ವಾಮೀಜಿ
ಮೀಸಲಾತಿ ಹೆಚ್ಚಿಸಲು ಆಗ್ರಹಿಸಿ ಅ. 20 ರಿಂದ ಫ್ರೀಡಂ ಪಾರ್ಕ್ನಲ್ಲಿ 10 ದಿನ ಧರಣಿ ನಡೆಸುತ್ತೇನೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅ. 31 ಕ್ಕೆ ಬೆಂಗಳೂರು ಚಲೋ ಆರಂಭಿಸಿ, ನಮ್ಮ ಸಾಂವಿಧಾನಿಕ ಹಕ್ಕು ಪಡೆಯಲು ಹೋರಾಡುತ್ತೇವೆ ಎಂದು ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಎಸ್ಟಿ ಮೀಸಲಾತಿ ಹೆಚ್ಚಿಸುವಂತೆ ಇಲ್ಲಿನ ವಾಲ್ಮೀಕಿ ಭವನದಲ್ಲಿ ಮುಖಂಡರ ಜತೆಗೆ ನಡೆದ ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯಕ್ಕೆ ನೀಡಿದ್ದ ಭರವಸೆಗಳನ್ನು ಬಿಜೆಪಿ ಸರ್ಕಾರ ಮರೆತಿದೆ. ಬೇಡಿಕೆ ಈಡೇರಿಕೆಗೆ ಉಗ್ರ ಹೋರಾಟ ಮಾಡಲಾಗುವುದು. ಈವರೆಗೆ ರಾಜಕೀಯ ಪಕ್ಷಗಳು ಮತಬ್ಯಾಂಕ್ಗಾಗಿ ಸಮಾಜವನ್ನು ಸೀಮಿತಗೊಳಿಸಿವೆ. ರಾಜ್ಯದಲ್ಲಿ 50 ಲಕ್ಷದಷ್ಟು ವಾಲ್ಮೀಕಿ ಸಮುದಾಯದವರಿದ್ದಾರೆ. ಶೈಕ್ಷಣಿಕವಾಗಿ ನಮ್ಮ ಸಮುದಾಯ ಕಳೆದ 48 ವರ್ಷಗಳಿಂದ ಹೋರಾಟ ಮಾಡುತ್ತಿದೆ. ವಾಲ್ಮೀಕಿ ಸಮುದಾಯಕ್ಕೆ ಶೇ.3 ರಿಂದ ಶೇ. 7.5ಕ್ಕೆ ಹೆಚ್ಚಿಸಬೇಕು ಎಂದು ದಶಕಗಳಿಂದ ಹೋರಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆಡಳಿತದಲ್ಲಿರುವ ಯಾವ ಸರ್ಕಾರಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಸಿಎಂ ಪ್ರತಿನಿಧಿಸುವ ಶಿವಮೊಗ್ಗದ ಶಿಕಾರಿಪುರ ತಾಲೂಕಿನಿಂದಲೇ ಮೀಸಲಾತಿ ಹೆಚ್ಚಳ ಹೋರಾಟದ ಸಮಾಲೋಚನೆ ಸಭೆಗೆ ಚಾಲನೆ ನೀಡಿದ್ದೇನೆ. ಮೀಸಲಾತಿ ಹೆಚ್ಚಿಸಲು ಆಗ್ರಹಿಸಿ ಅ. 20 ರಿಂದ ಫ್ರೀಡಂ ಪಾರ್ಕ್ನಲ್ಲಿ 10 ದಿನ ಧರಣಿ ನಡೆಸುತ್ತೇನೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅ. 31 ಕ್ಕೆ ಬೆಂಗಳೂರು ಚಲೋ ಆರಂಭಿಸಿ, ನಮ್ಮ ಸಾಂವಿಧಾನಿಕ ಹಕ್ಕು ಪಡೆಯಲು ಹೋರಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಎಸ್ಟಿ ಸಮಾಜಕ್ಕೆ ಮೀಸಲಾತಿ ಹೆಚ್ಚಿಸಲು ಹೋರಾಟಕ್ಕೆ ಹಿಂದಿನ ಸಮ್ಮಿಶ್ರ ಸರ್ಕಾರ ಮಣೆ ಹಾಕಲಿಲ್ಲ. ಇಡೀ ಸಮಾಜದ ಶಾಪವೇ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಯಿತು. ಇನ್ನು ಅಧಿಕಾರಕ್ಕೆ ಬರುವ ಮುಂಚೆ ಲಿಂಗಸೂರಲ್ಲಿ ನಡೆದಿದ್ದ ಸಮಾವೇಶದಲ್ಲಿ ಬಿ.ಎಸ್.ಯಡಿಯೂರಪ್ಪನವರು ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದು 24 ಗಂಟೆಗಳಲ್ಲಿ ಎಸ್ಟಿ ಸಮಾಜಕ್ಕೆ ಮೀಸಲಾತಿ ಹೆಚ್ಚಿಸುವುದಾಗಿ ಘೋಷಿಸಿದ್ದರು. ಆದರೀಗ ಅಧಿಕಾರಕ್ಕೆ ಬಂದು ವರ್ಷ ಉರಳಿದರೂ ಮೀಸಲಾತಿ ಹೆಚ್ಚಿಸಿಲ್ಲ ಏಕೆ?, ಸಮುದಾಯದ ಶಾಪಕ್ಕೆ ಒಳಗಾಗಬೇಡಿ ಎಂದು ಬಿಜೆಪಿ ಸರ್ಕಾರಕ್ಕೆ ಎಚ್ಚರಿಸಿದರು