ಬೆಳಗಾವಿ: ರಾಜ್ಯ ಸರ್ಕಾರ ಗಣೇಶೋತ್ಸವ ಆಚರಣೆಗೆ ಹೇರಿರುವ ಕೆಲವು ಷರತ್ತು ಬದ್ಧ ಅನುಮತಿಗೆ ಕುಂದಾನಗರಿಯಲ್ಲಿ ಗಣೇಶ ಮಹಾಮಂಡಲದವರು ವಿರೋಧ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಷರತ್ತಿಗೆ ಮಹಾಮಂಡಲದ ಅಧ್ಯಕ್ಷ ವಿಜಯ ಜಾಧವ್ ಹೀಗಂತಾರೆ.. ಈ ಕುರಿತು ಈಟಿವಿ ಭಾರತದೊಂದಿಗೆ ಬೆಳಗಾವಿಯ ಲೋಕಮಾನ್ಯ ತಿಲಕ್ ಗಣೇಶ ಮಹಾಮಂಡಲದ ಅಧ್ಯಕ್ಷ ವಿಜಯ ಜಾಧವ್ ಮಾತನಾಡಿದ್ದಾರೆ. ರಾಜ್ಯ ಸರ್ಕಾರ ಗಣೇಶ ಮೂರ್ತಿಯನ್ನು ಕೇವಲ 5 ದಿನಗಳ ಕಾಲ ಮಾತ್ರ ಕೂರಿಸಬೇಕು. ಯಾವುದೇ ಮೆರವಣಿಗೆ ನಡೆಸದಿರಲು ಸರ್ಕಾರ ಆದೇಶ ಹೊರಡಿಸಿದೆ.
ಇದಕ್ಕೆ ನಮ್ಮ ವಿರೋಧವಿದೆ. ನಾವು ಹತ್ತು ದಿನಗಳ ಕಾಲ ಗಣೇಶೋತ್ಸವ ಆಚರಣೆ ಮಾಡೇ ಮಾಡ್ತೇವಿ. ಸರ್ಕಾರ ಬೇಕಾದಷ್ಟು ರೂಲ್ಸ್ ಮಾಡಲಿ, ಗಣೇಶೋತ್ಸವ ಆಚರಿಸುವ ಕಾರ್ಯಕರ್ತರಿಗೆ ಕೊರೊನಾ ಗಂಭೀರತೆ ಬಗ್ಗೆ ಅರಿವಿದೆ. ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಆಚರಣೆ ಮಾಡಲಾಗುವುದು ಎಂದರು.
ಸರ್ಕಾರ ಹೇಳುವ ಕೊರೊನಾ ನಿಯಮಾವಳಿ ಪಾಲನೆ ಮಾಡೋದು ಎಲ್ಲರಿಗೂ ಗೊತ್ತಿದೆ. ಪ್ರತಿವರ್ಷ ಆಚರಣೆ ಮಾಡುವ ಗಣೇಶ ಉತ್ಸವದಲ್ಲಿ ಇಪ್ಪತ್ತರಿಂದ ಮೂವತ್ತರಷ್ಟು ನಿಯಮಗಳನ್ನು ಹಾಕಿರುತ್ತಾರೆ. ನಾವು ಹಿಂದೂಸ್ಥಾನದಲ್ಲಿ ಗಣಪತಿ ಉತ್ಸವ ಮಾಡ್ತಿದ್ದೇವೆ. ನಮ್ಮ ರಾಜ್ಯದಲ್ಲಿಯೇ ಇಷ್ಟೊಂದು ಕಠಿಣ ನಿಯಮ ಹಾಕಿದ್ರೆ ಬೇರೆ ದೇಶದಲ್ಲಿನ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.
ಓದಿ: ರಾಜ್ಯದಲ್ಲಿಂದು 1,117 ಮಂದಿಗೆ ಕೋವಿಡ್ ಸೋಂಕು; ಬೆಂಗಳೂರಿನಲ್ಲಿ ಗುಣಮುಖರ ಸಂಖ್ಯೆ ಹೆಚ್ಚು