ಬಾಗಲಕೋಟೆ:ವಿದ್ಯೆ ಕಲಿಯಲು ನಿರ್ಧಿಷ್ಟವಾದ ಸ್ಥಳ ಬೇಕೆಂದೇನಿಲ್ಲ. ಮನಸ್ಸೊಂದಿದ್ದರೆ ಎಲ್ಲಿ ಬೇಕಾದರೂ ಓದಿ ಸಾಧನೆ ಮಾಡಬಹುದು ಎಂಬುದನ್ನು ಹೊಸೂರು ಯುವಕರು ಮಾಡಿ ತೋರಿಸಿದ್ದಾರೆ.
ಶೌಚಾಲಯ ಬಂದ್ ಮಾಡಿ ಬೇರೆ ಸುಸಜ್ಜಿತವಾದ ಶೌಚಾಲಯ ನಿರ್ಮಿಸಿದ್ದರಿಂದ ಇದು ನಿರುಪಯುಕ್ತವಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಇದನ್ನು ಮನಗಂಡ ಸ್ಥಳೀಯ ಯುವಕರು ಸಣ್ಣಪುಟ್ಟ ದುರಸ್ತಿಗಳನ್ನು ಮಾಡಿ, ಸ್ವಚ್ಛಗೊಳಿಸಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ನಿತ್ಯ ಓದಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ.
ಶೌಚಾಲಯವೆಂದರೆ ಮೂಗುಮುರಿಯುವವರ ನಡುವೆ ಅಸಹ್ಯ ಪಟ್ಟುಕೊಳ್ಳದೆ ಅದನ್ನೇ ಜ್ಞಾನಾರ್ಜನೆ ಕೇಂದ್ರವನ್ನಾಗಿ ರೂಪಿಸಿದ್ದಾರೆ. ಬಿಎಡ್ ಮುಗಿಸಿದ ವಿದ್ಯಾವಂತ ಯುವಕರು ತಮ್ಮ ಬಿಡುವಿನ ಸಮಯದಲ್ಲಿ ಮಕ್ಕಳಿಗೆ ನಿತ್ಯ ಪಾಠ ಮಾಡುತ್ತಾರೆ. ಪ್ರತಿ ಭಾನುವಾರ ಮನರಂಜನೆ ಮೂಲಕ ವಿದ್ಯಾರ್ಥಿಗಳಲ್ಲಿ ಪಠ್ಯೇತರ ಚಟುವಟಿಕೆಗಳ ಕಡೆ ಒಲವು ಮೂಡಿಸುತ್ತಿದ್ದಾರೆ. ಇದರ ಜೊತೆಗೆ ಪರಿಸರದ ಬಗ್ಗೆ ಅರಿವು ಸಹ ಮೂಡಿಸಲಾಗುತ್ತಿದೆ.
ಕೆಲವೇ ದಾನಿಗಳು ಮಾತ್ರ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಉಡುಗರೆಯಾಗಿ ನೀಡಿದ್ದಾರೆ. ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಇವು ಸಾಲುವುದಿಲ್ಲ. ಒಂದು ದಿನ ಪತ್ರಿಕೆ ಮಾತ್ರವೇ ನಿತ್ಯ ಬರುತ್ತದೆ. ಹೆಚ್ಚಿನ ಕೊಡುಗೆ ನೀಡಲು ಯಾರದರೂ ಮುಂದೆ ಬಂದರೆ ತುಂಬಾ ಅನುಕೂಲವಾಗುತ್ತದೆ ಎನ್ನುತ್ತಾರೆ ಯುವಕರು.