ಕರ್ನಾಟಕ

karnataka

ಭ್ರಷ್ಟ ಬಿಜೆಪಿ ಮಾಡಿದ್ದ ಅವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಜಾರಿಯಲ್ಲಿದೆ: ಸಚಿವ ಪ್ರಿಯಾಂಕ್ ಖರ್ಗೆ

''ಬಿಜೆಪಿಯ ನಾಲ್ಕು ವರ್ಷದ ಭ್ರಷ್ಟ ಆಡಳಿತದ ಅವ್ಯವಸ್ಥೆಯ ಫಲ ಈಗಲೂ ಜನರ ಜೀವ ಹಿಂಡುತ್ತಿದೆ. ಜಲಜೀವನ್ ಮಿಷನ್​ನಲ್ಲಿ ಪ್ರತಿ ಮನೆಗೂ ನೀರು ಕೊಟ್ಟೇ ಬಿಟ್ಟಿದ್ದೇವೆ ಎಂದು ಪ್ರಚಾರ ಮಾಡಿದ್ದ ಬಿಜೆಪಿ ಈಗ ತಮ್ಮ ಸುಳ್ಳನ್ನು ತಾವೇ ಬಯಲು ಮಾಡುತ್ತಿದ್ದಾರೆ'' ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

By

Published : Aug 3, 2023, 3:46 PM IST

Published : Aug 3, 2023, 3:46 PM IST

Priyank Kharge
ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು:''ನಮ್ಮ ಸರ್ಕಾರ ಬಂದು ಎರಡು ತಿಂಗಳಾಗಿದೆ. ಭ್ರಷ್ಟ ಬಿಜೆಪಿ ಮಾಡಿದ್ದ ಅವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಜಾರಿಯಲ್ಲಿದೆ‌'' ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ''ಮಳೆ ನಿಂತರೂ ಹನಿ ನಿಲ್ಲದು ಎಂಬ ಗಾದೆಯಂತೆ ಬಿಜೆಪಿಯ ನಾಲ್ಕು ವರ್ಷದ ಭ್ರಷ್ಟ ಆಡಳಿತದ ಅವ್ಯವಸ್ಥೆಯ ಫಲ ಈಗಲೂ ಜನರ ಜೀವ ಹಿಂಡುತ್ತಿದೆ. ಜಲಜೀವನ್ ಮಿಷನ್​ನಲ್ಲಿ ಪ್ರತಿ ಮನೆಗೂ ನೀರು ಕೊಟ್ಟೇ ಬಿಟ್ಟಿದ್ದೇವೆ ಎಂದು ಪ್ರಚಾರ ಮಾಡಿದ್ದ ಬಿಜೆಪಿ ಈಗ ತಮ್ಮ ಸುಳ್ಳನ್ನು ತಾವೇ ಬಯಲು ಮಾಡುತ್ತಿದ್ದಾರೆ. ಈ ಫ್ಯಾಕ್ಟ್ ಚೆಕ್ ಕೆಲಸವನ್ನು ಬಿಜೆಪಿ ಹೀಗೆಯೇ ಮುಂದುವರೆಸಲಿ'' ಎಂದು ಟೀಕಿಸಿದ್ದಾರೆ.

ಭ್ರಷ್ಟಾಚಾರದ ಮಿಷನ್- ಆರೋಪ: ಜಲಜೀವನ್ ಮಿಷನ್ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾಲು ಶೇ. 55, ಕೇಂದ್ರದ ಪಾಲು 45, ಬಿಜೆಪಿಯ ಭ್ರಷ್ಟಾಚಾರದ ಪಾಲು ಶೇ 40, ಮೋದಿಯವರಿಗೆ ಕ್ರೆಡಿಟ್ ಮಾತ್ರ ಶೇ 100ರಷ್ಟು ಇದೆ. ಬಿಜೆಪಿ ಅವಧಿಯಲ್ಲಿ ಜಲಜೀವನ್ ಮಿಷನ್ ಎನ್ನುವುದು "ಭ್ರಷ್ಟಾಚಾರದ ಮಿಷನ್" ಆಗಿತ್ತು. ಇದರ ಪರಿಣಾಮವನ್ನೇ ಇಂದಿಗೂ ರಾಜ್ಯದ ಜನತೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

''ಬಿಜೆಪಿ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರು ಭ್ರಷ್ಟಾಚಾರದ ಆರೋಪದಲ್ಲಿ ರಾಜೀನಾಮೆ ನೀಡಿದ್ದರು, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಶೇ 40 ಕಮಿಷನ್​ಗೆ ಗುತ್ತಿಗೆದಾರರೊಬ್ಬರು ಜೀವವನ್ನೇ ಬಿಡಬೇಕಾಯ್ತು. ನನ್ನ ಇಲಾಖೆಗೆ ಇಷ್ಟು ಗಾಢವಾಗಿ ಅಂಟಿರುವ ಕೊಳೆಯನ್ನು ಸ್ವಚ್ಛ ಮಾಡುತ್ತಿದ್ದೇನೆ'' ಎಂದಿದ್ದಾರೆ.

''ಬಿಜೆಪಿ ಅವಧಿಯಲ್ಲಿ ಪರ ರಾಜ್ಯಗಳತ್ತ ಮುಖ ಮಾಡಿದ್ದ ಉದ್ಯಮಗಳನ್ನು, ಹೂಡಿಕೆಗಳನ್ನು ಕರ್ನಾಟಕದತ್ತ ಕರೆತರುತ್ತಿದ್ದೇವೆ. ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ನಿರ್ಮಿಸುತ್ತಿದ್ದೇವೆ. ಅಜಾನ್, ಹಲಾಲ್, ಹಿಜಾಬ್ ಎಂಬ ಪ್ರಚೋದನೆಗೆ ಕನ್ನಡಿಗರು ಸಂಪೂರ್ಣ ತಿರಸ್ಕಾರದ ಉಡುಗೊರೆ ಕೊಟ್ಟಿದ್ದಾರೆ. ಬಿಜೆಪಿ ಮುಕ್ತ ದಕ್ಷಿಣ ಭಾರತವಾಗಿದೆ. ಆದರೂ ಬುದ್ಧಿ ಕಲಿಯದೆ ಸುಳ್ಳಿನ ಸೌಧ ಕಟ್ಟವುದನ್ನು ಮುಂದುವರೆಸಿದ ಬಿಜೆಪಿಯನ್ನು ದೇಶದ ಜನ ತಿರಸ್ಕರಿಸುವುದು ನಿಶ್ಚಿತ'' ಎಂದು ಕಿಡಿಕಾರಿದ್ದಾರೆ.

ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಗರಂ:''ಒಂದು ರಾಷ್ಟ್ರೀಯ ಪಕ್ಷವಾಗಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗದ್ದು, ಬಿಜೆಪಿಯ ರಾಜಕೀಯ ದಿವಾಳಿತನ. ಮೇಲ್ಮನೆ, ಕೆಳಮನೆಗಳಲ್ಲಿ ವಿರೋಧ ಪಕ್ಷದ ನಾಯಕನ ಕುರ್ಚಿ ಖಾಲಿ ಇದೆ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿ ಮೊದಲು ತಮ್ಮ ರಾಜಕೀಯ ದಾರಿದ್ರ್ಯವನ್ನು ನಿವಾರಣೆ ಮಾಡಿಕೊಳ್ಳಲಿ, ಸುಳ್ಳು ಆರೋಪಗಳನ್ನು ಮಾಡುತ್ತಾ ಜನರ ದಿಕ್ಕು ತಪ್ಪಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ'' ಎಂದು ಸಚಿವ ಪ್ರಿಯಾಂಕ್ ಖರ್ಗೆ ಗರಂ ಆಗಿದ್ದಾರೆ.

ಇದನ್ನೂ ಓದಿ:ಪ್ರಧಾನಿ ಮೋದಿ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ: ಅನುದಾನ ಬಿಡುಗಡೆ ಬಗ್ಗೆ ಮಾತುಕತೆ

ABOUT THE AUTHOR

...view details