ಕರ್ನಾಟಕ

karnataka

ಎಐಸಿಸಿ ಅಧ್ಯಕ್ಷಗಾದಿ ಅಲಂಕರಿಸುತ್ತಾರಾ ಎರಡನೇ ಕನ್ನಡಿಗ, ದಲಿತ ನಾಯಕ ಖರ್ಗೆ !

By

Published : Oct 1, 2022, 5:41 PM IST

ಬೀದರ್ ಜಿಲ್ಲೆಯ ವರವಟ್ಟಿಯಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಮಲ್ಲಿಕಾರ್ಜುನ ಖರ್ಗೆ ಗುಲ್ಬರ್ಗಾದಲ್ಲಿ ತಮ್ಮ ಶಾಲಾ ಶಿಕ್ಷಣ ಮತ್ತು ಬಿಎ ಜೊತೆಗೆ ಕಾನೂನು ಮಾಡಿದರು. ರಾಜಕೀಯಕ್ಕೆ ಧುಮುಕುವ ಮೊದಲು ಅವರು ಸ್ವಲ್ಪ ಕಾಲ ಕಾನೂನು ಅಭ್ಯಾಸದಲ್ಲಿದ್ದರು.

Mallikarjuna Kharge
ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಕೊನೆಗೂ ಗಾಂಧಿ ಕುಟುಂಬದ ಪ್ರಾಬಲ್ಯ ತಾತ್ಕಾಲಿಕವಾಗಿ ಅಂತ್ಯಕಾಣುವ ಸಾಧ್ಯತೆ ಗೋಚರಿಸುತ್ತಿದ್ದು, ಪಕ್ಷದ ಅಧ್ಯಕ್ಷಗಾದಿಗೆ ಸ್ಪರ್ಧಿಸಿದವರಲ್ಲಿ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಸರ್ವೋಚ್ಛ ಸ್ಥಾನಕ್ಕೆ ಏರುವ ಸಾಧ್ಯತೆ ಹೆಚ್ಚಾಗಿ ಗೋಚರಿಸುತ್ತಿದೆ.

ಕಾಂಗ್ರೆಸ್‌ನ ಅಧ್ಯಕ್ಷೀಯ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿರುವ ಮಲ್ಲಿಕಾರ್ಜುನ ಖರ್ಗೆ ಜತೆ ರಾಷ್ಟ್ರೀಯ ನಾಯಕ ಶಶಿ ತರೂರ್ ಸಹ ಪ್ರಬಲ ಸ್ಪರ್ಧಿ. ಖರ್ಗೆ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಕಡೆಯ ಕ್ಷಣದಲ್ಲಿ ಸ್ಪರ್ಧಾ ಕಣಕ್ಕಿಳಿದಿರುವ ಖರ್ಗೆ ಆಯ್ಕೆಯಾದರೆ ರಾಜ್ಯದಿಂದ ಎಐಸಿಸಿ ಅಧ್ಯಕ್ಷಗಾದಿಗೆ ಏರಿದ ಎರಡನೇ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.

ಅಲ್ಲದೇ ಒಬ್ಬ ದಲಿತ ಸಮುದಾಯದ ವ್ಯಕ್ತಿ ಅಧ್ಯಕ್ಷಗಾದಿಗೆ ಏರುವ ಮೂಲಕ ತಳ ಸಮುದಾಯದ ನಾಯಕನಿಗೆ ಪಕ್ಷದ ಉನ್ನತ ಸ್ಥಾನ ನೀಡಿದ ಹೆಗ್ಗಳಿಕೆಯೂ ಕಾಂಗ್ರೆಸ್​ನದ್ದಾಗಲಿದೆ. ವಿಶೇಷ ಅಂದರೆ ಬಾಬು ಜಗಜೀವನ್ ರಾಮ್ ನಂತರ ಈ ಹುದ್ದೆಯನ್ನು ಅಲಂಕರಿಸುವ ದಲಿತ ನಾಯಕ ಎಂಬ ಹೆಗ್ಗಳಿಕೆ ಹೊಂದಲಿದ್ದಾರೆ. ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವುದು ಇವರ ಆಯ್ಕೆಗೆ ಇನ್ನೊಂದು ಕಾರಣವಾಗಲಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಜನಪ್ರಿಯ ನಾಯಕರಾಗಿ ಸೋಲಿಲ್ಲದ ಸರದಾರನಾಗಿ ಮೆರೆದಿದ್ದ ಖರ್ಗೆ 2019ರ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರು. ನಂತರ ರಾಜ್ಯಸಭೆಗೆ ಆಯ್ಕೆಯಾಗಿ ಹಾಲಿ ಪ್ರತಿಪಕ್ಷ ನಾಯಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯಕ್ಕೆ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಮಾತು ಸಾಕಷ್ಟು ಸಾರಿ ಕೇಳಿಬಂದಿತ್ತು.

ಆದರೆ ಅವಕಾಶ ಕೂಡಿಬಂದಿರಲಿಲ್ಲ. ರಾಜಕೀಯದಲ್ಲಿ 50 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರುವ ಖರ್ಗೆ ಸತತ ಒಂಬತ್ತು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಇತಿಹಾಸ ಹೊಂದಿದ್ದಾರೆ. 80 ವರ್ಷ ವಯಸ್ಸಿನ ಖರ್ಗೆ ಅವರು ಕಲಬುರುಗಿ ಮಾತ್ರವಲ್ಲದೇ, ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ದೊಡ್ಡ ಹೆಸರಾಗಿ ಗುರುತಾಗಿದ್ದಾರೆ.

ಖರ್ಗೆ ರಾಜಕೀಯ ಇತಿಹಾಸ:1969ರಲ್ಲಿ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದರು ಮತ್ತು ಗುಲ್ಬರ್ಗಾ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು. 2019ರ ಲೋಕಸಭೆ ಚುನಾವಣೆಯವರೆಗೂ ಖರ್ಗೆಯವರು ಸೋತೇ ಇರಲಿಲ್ಲ. ಗುರುಮಠಕಲ್​ ವಿಧಾನಸಭಾ ಕ್ಷೇತ್ರದಿಂದ ಸತತ ಒಂಬತ್ತು ಬಾರಿ ಗೆದ್ದಿದ್ದಾರೆ. 2009ರಲ್ಲಿ ಲೋಕಸಭಾ ಚುನಾವಣಾ ಕಣಕ್ಕೆ ಧುಮುಕಿದ್ದು, ಗುಲ್ಬರ್ಗಾ ಸಂಸತ್ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದಾರೆ.

ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಮತ್ತು ಕೇಂದ್ರ ಮಟ್ಟದಲ್ಲಿ ಮತ್ತು 2008ರ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 2014 ರಿಂದ 2019ರವರೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಖರ್ಗೆ ಅವರು ಪ್ರತಿಪಕ್ಷದ ನಾಯಕರಾಗಲು ಸಾಧ್ಯವಾಗಲಿಲ್ಲ, ಏಕೆಂದರೆ ಕಾಂಗ್ರೆಸ್ ಪಕ್ಷವು ಒಟ್ಟು ಸಂಖ್ಯೆಯ ಶೇಕಡಾ 10 ಕ್ಕಿಂತ ಕಡಿಮೆಯಿತ್ತು.

ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕೇಂದ್ರ ಕ್ಯಾಬಿನೆಟ್ ಸಚಿವ- ಕಾರ್ಮಿಕ ಮತ್ತು ಉದ್ಯೋಗ, ರೈಲ್ವೆ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಜೂನ್ 2020 ರಲ್ಲಿ, ಅವರು ಕರ್ನಾಟಕದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದರು ಮತ್ತು ಗುಲಾಂ ನಬಿ ಆಜಾದ್ ಅವರ ನಂತರ ಸಂಸತ್ತಿನ ಮೇಲ್ಮನೆಯಲ್ಲಿ 17 ನೇ ಪ್ರತಿಪಕ್ಷದ ನಾಯಕರಾಗಿದ್ದಾರೆ.

ಹುಟ್ಟು, ಬೆಳವಣಿಗೆ:ಬೀದರ್ ಜಿಲ್ಲೆಯ ವರವಟ್ಟಿಯಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಅವರು ಗುಲ್ಬರ್ಗಾದಲ್ಲಿ ತಮ್ಮ ಶಾಲಾ ಶಿಕ್ಷಣ ಮತ್ತು ಬಿಎ ಜೊತೆಗೆ ಕಾನೂನು ಮಾಡಿದರು. ರಾಜಕೀಯಕ್ಕೆ ಧುಮುಕುವ ಮೊದಲು ಅವರು ಸ್ವಲ್ಪ ಕಾಲ ಕಾನೂನು ಅಭ್ಯಾಸದಲ್ಲಿದ್ದರು. ಬೌದ್ಧ ಧರ್ಮದ ಅನುಯಾಯಿ ಮತ್ತು ಗುಲ್ಬರ್ಗಾದಲ್ಲಿ ಬುದ್ಧ ವಿಹಾರ ಸಂಕೀರ್ಣವನ್ನು ನಿರ್ಮಿಸಿದ ಸಿದ್ಧಾರ್ಥ ವಿಹಾರ್ ಟ್ರಸ್ಟ್‌ನ ಸಂಸ್ಥಾಪಕ-ಅಧ್ಯಕ್ಷರಾಗಿದ್ದಾರೆ. 13 ಮೇ 1968 ರಂದು ರಾಧಾಬಾಯಿ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಮೂವರು ಗಂಡು ಮಕ್ಕಳಿದ್ದಾರೆ. ಪುತ್ರ ಪ್ರಿಯಾಂಕ್ ಖರ್ಗೆ ಹಾಲಿ ಶಾಸಕ ಮತ್ತು ಮಾಜಿ ಸಚಿವರಾಗಿದ್ದಾರೆ.

ಇದನ್ನೂ ಓದಿ:ರಾಜ್ಯಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಖರ್ಗೆ ರಾಜೀನಾಮೆ: ಯಾರಾಗ್ತಾರೆ ಪ್ರತಿಪಕ್ಷ ನಾಯಕ.. ಕೈ ಮುಂದಿರುವ ಸವಾಲುಗಳೇನು?

ABOUT THE AUTHOR

...view details