ಬೆಂಗಳೂರು: ನಗರದಲ್ಲಿ ಈ ಸಾರಿ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗದ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 8 ವಿಭಾಗ, 63 ಉಪ ವಿಭಾಗದಲ್ಲಿ ವಾರದ ಏಳೂ ದಿನ 24 ಗಂಟೆ ಕಾರ್ಯನಿರ್ವಣೆ, ಕೇಂದ್ರ ನಿಯಂತ್ರಣ ಕೊಠಡಿಯಲ್ಲಿ ಮೂರು ಶಿಫ್ಟ್ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ನಗರದಲ್ಲಿ ಒಟ್ಟು 63 ನಿಯಂತ್ರಣ ಕೊಠಡಿ ನಿರ್ಮಿಸಿದ್ದೇವೆ. ಅರಣ್ಯ ಇಲಾಖೆಗೂ ಸೂಚಿಸಿದ್ದು, 21 ತಂಡ ರಚಿಸಲಾಗಿದೆ ಎಂದರು.
ರಸ್ತೆ ಗುಂಡಿ ಮುಚ್ಚಲು ಪ್ರತಿ ವಲಯ ಮುಖ್ಯ ಎಂಜಿನಿಯರ್ಗೆ ಸೂಚನೆ ನೀಡಿದ್ದೇವೆ. ಈ ಸಾರಿ ನ್ಯಾಯಾಲಯದಿಂದ ಹೇಳಿಸಿಕೊಳ್ಳುವ ಸ್ಥಿತಿಗೆ ತಲುಪದಂತೆ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದ್ದೇನೆ. ಭರವಸೆ ಸಿಕ್ಕಿದೆ. ನಗರದ ಒಳಚರಂಡಿ, ರಾಜಕಾಲುವೆ, ಕೆರೆ ಕುರಿತ ಸರ್ವೆ ಕೆಲಸ ಆಗಿದೆ. ನಗರದಲ್ಲಿ 167 ಕೆರೆಗಳು ಬಿಬಿಎಂಪಿ ವ್ಯಾಪ್ತಿಯಲ್ಲಿದೆ. 18 ಕೆರೆ ಕಾಮಗಾರಿ ಮುಗಿದಿದೆ, 31ಕ್ಕೆ ಟೆಂಡರ್ ಕರೆದಿದ್ದೇವೆ. 72 ಕೆರೆಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಉಳಿದ ಕೆರೆಗಳ ಕೆಲಸ ನಡೆಯಲಿದೆ ಎಂದರು.