ಬೆಂಗಳೂರು:ಇಂದು ಎಷ್ಟೊತ್ತಾದರೂ ವಿಶ್ವಾಸಮತ ಮಂಡನೆಯನ್ನು ಮತಕ್ಕೆ ಹಾಕಬೇಕು. ಇಲ್ಲದೇ ಇದ್ದಲ್ಲಿ ನಾನು ಸ್ಪೀಕರ್ ಸ್ಥಾನದಲ್ಲಿ ಮುಂದುವರೆಯಬೇಕಾ ಎನ್ನುವ ಚಿಂತನೆ ಮಾಡಬೇಕಾಗಲಿದೆ ಎಂದು ಕಾಂಗ್ರೆಸ್ ನಾಯಕರಿಗೆ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ವಿಶ್ವಾಸಮತದ ಮೇಲಿನ ಚರ್ಚೆ ಮುಗಿಸದೇ ಇದ್ದಲ್ಲಿ ರಾಜೀನಾಮೆಗೆ ಮುಂದಾಗ್ತಾರಾ ಸ್ಪೀಕರ್?
ವಿಶ್ವಾಸ ಮತಯಾಚನೆ ಮಾಡಲು ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕೇಳಿದ್ದ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮತ್ತೆ ಎರಡು ದಿನ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇವರ ನಡೆಯಿಂದ ಬೇಸಗೊಂಡಿರುವ ಸ್ಪೀಕರ್ ರಮೇಶ್ ಕುಮಾರ್, ವಿಶ್ವಾಸಮತ ಮಂಡನೆಯನ್ನು ಮತಕ್ಕೆ ಹಾಕದಿದ್ದರೆ ತಾವು ಸ್ಪೀಕರ್ ಸ್ಥಾನದಲ್ಲಿ ಮುಂದುವರೆಯಬೇಕಾ ಎನ್ನುವ ಚಿಂತನೆ ಮಾಡಬೇಕಾಗಲಿದೆ ಎಂದು ತಾಕೀತು ಮಾಡಿದ್ದಾರೆ.
ಇಂದು ಬೆಳಗ್ಗೆ ಕಲಾಪ ಆರಂಭಕ್ಕೂ ಮುನ್ನ ಸ್ಪೀಕರ್ ಭೇಟಿಯಾಗಿದ್ದ ಕಾಂಗ್ರೆಸ್ ನಿಯೋಗ ವಿಶ್ವಾಸಮತ ಯಾಚನೆಯನ್ನು 24ರ ವರಗೆ ಮುಂದೂಡಿಕೆ ಮಾಡುವಂತೆ ಮನವಿ ಮಾಡಿದ್ದಾರೆ. ಚರ್ಚೆಗೆ ಮತ್ತಷ್ಟು ಕಾಲಾವಕಾಶ ನೀಡಿ ಎಂದಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರ ಮನವಿಯನ್ನು ಸ್ಪೀಕರ್ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ ಎಂದು ಖಚಿತ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಶುಕ್ರವಾರದ ಕಲಾಪದ ವೇಳೆ ಸದನದಲ್ಲಿಯೇ ಕಾಂಗ್ರೆಸ್ ಶಾಸಕಾಂಗ ನಾಯಕ ಹಾಗೂ ಸಭಾ ನಾಯಕರ ಸಮ್ಮತಿ ಮೇರೆಗೆ ಇಂದು ವಿಶ್ವಾಸ ಮತ ಮತ್ತಕ್ಕೆ ಹಾಕಿಸುವ ಮಾತು ಕೊಟ್ಟಿದ್ದೇನೆ. ಒಂದು ವೇಳೆ ಈಗ ಕಾಲಾವಕಾಶ ನೀಡಿದರೆ ಮಾತು ತಪ್ಪಿದಂತಾಗಲಿದೆ. ನನ್ನ ವಿರುದ್ಧ ತಪ್ಪು ಸಂದೇಶ ರವಾನೆಯಾಗಲಿದೆ. ಹಾಗಾಗಿ ಇದಕ್ಕೆ ಸಮ್ಮತಿ ನೀಡಲ್ಲ. ಒಂದು ವೇಳೆ, ವಿಶ್ವಾಸ ಮತದ ಮೇಲಿನ ಚರ್ಚೆ ಮುಗಿಸದೇ ಇದ್ದಲ್ಲಿ ನಾಳೆಯಿಂದ ನಾನು ಸ್ಪೀಕರ್ ಸ್ಥಾನದಲ್ಲಿ ಇರಬೇಕಾ ಎನ್ನುವ ಚಿಂತನೆ ಮಾಡಬೇಕಾಗಲಿದೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.