ಬೆಂಗಳೂರು:ಜನರನ್ನು ಯಾಮಾರಿಸಿ ದೇವರ ಬಗೆಗಿನ ಭಕ್ತರ ನಂಬಿಕೆಯನ್ನೇ ಬಂಡವಾಳವಾಗಿಸಿ ವಂಚಿಸುತ್ತಿದ್ದ ಪೂಜಾರಿ ವಿರುದ್ಧ ಗ್ರಾಮಸ್ಥರು ತಿರುಗಿ ಬಿದ್ದಿರುವ ಘಟನೆ ಬಿಳೇಕಳ್ಳಿಯ ಸೋಮೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ದೇವಸ್ಥಾನದಲ್ಲಿ ಈ ಪೂಜಾರಪ್ಪ ತನ್ನದೇ ಆದ ಪ್ರತ್ಯೇಕ ಹುಂಡಿ ಇಟ್ಟಿದ್ದನಂತೆ. ಇದನ್ನು ಕಂಡು ಊರಿನ ಜನರು ಮುಜರಾಯಿ ಇಲಾಖೆಗೆ ದೂರು ನೀಡಿದ್ದರು. ಇಲಾಖೆ ಅಧಿಕಾರಿಗಳು ಈ ಬಗ್ಗೆ ಒಮ್ಮೆ ಪರಿಶೀಲಿಸಿ ದೂರು ನಿಜವೆಂದು ಗೊತ್ತಾದರೂ ಸುಮ್ಮನಾಗಿದ್ದರು ಅನ್ನೋದು ಗ್ರಾಮಸ್ಥರ ಆರೋಪ.
ಭಗವಂತನಿಗೊಂದು ಪೂಜಾರಪ್ಪನಿಗೊಂದು ಹುಂಡಿ! ಪೂಜಾರಪ್ಪ ತನ್ನದೇ ಆದ ಹುಂಡಿಯನ್ನು ಇಟ್ಟಿದ್ದರಿಂದ ಇಡೀ ಗ್ರಾಮವೇ ಈತನ ವಿರುದ್ಧ ತಿರುಗಿ ನಿಂತಿದೆ. ಪ್ರತ್ಯೇಕ ಹುಂಡಿಯ ವಿಚಾರ ಎಲ್ಲರಿಗೂ ಗೊತ್ತಾಗಿದ್ದು, ಈ ಬಗ್ಗೆ ಪಂಚಾಯಿತಿ ಕೂಡ ನಡೆದಿದೆ. ದೇವಸ್ಥಾನ, ಮುಜರಾಯಿ ಇಲಾಖೆಗೆ ಸೇರಿರುವುದರಿಂದ ಅಲ್ಲಿನ ಅಧಿಕಾರಿಗಳೇ ಬಂದು ಈತನಿಗೆ ಎಚ್ಚರಿಕೆ ನೀಡಿದ್ದರು. ಆದ್ರೂ ಕೂಡ, ಈ ಆಸಾಮಿ ತನ್ನ ಚಾಳಿ ಬಿಟ್ಟಿರಲಿಲ್ಲ. ಇದನ್ನು ಗಮನಿಸಿದ ಜನರು ಸಾಕಷ್ಟು ಬಾರಿ ಎಚ್ಚರಿಕತೆ ನೀಡಿದ್ದರೂ ಆತ ಹಳೆಯ ಚಾಳಿ ಮುಂದುವರಿಸಿದ್ದ. ಹೀಗಾಗಿ ಗ್ರಾಮಸ್ಥರು ಪೂಜಾರಪ್ಪನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಮುಜರಾಯಿ ಇಲಾಖೆ ಈ ಪೂಜಾರಪ್ಪನನ್ನು ಈ ದೇವಸ್ಥಾನದಿಂದ ವಜಾಗೊಳಿಸುವುದಕ್ಕೆ ನಿರ್ಧರಿಸಿದೆ.