ಬೆಂಗಳೂರು:ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೀತಿದೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಪುತ್ರನನ್ನೇ ದಂಧೆಗೆ ಬಿಟ್ಟಿದ್ದಾರೆ ಎಂಬ ಹೇಳಿಕೆ ನೀಡಿದ್ದ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೀತಿದೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ವರ್ಗಾವಣೆಗೆ ತಮ್ಮ ಪುತ್ರನನ್ನೇ ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ವರ್ಗಾವಣೆ ದಂಧೆಯ ಕರಾಳತೆ ಹೊರಬರುತ್ತದೆ ಎಂದು ಉಡುಪಿಯಲ್ಲಿ ಮಾತನಾಡುತ್ತಾ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರು. ಈ ಹೇಳಿಕೆಗೆ ವಿಜಯೇಂದ್ರ ಖಡಕ್ಕಾಗಿ ಪ್ರತಿಕ್ರಿಯಿಸಿದ್ದಾರೆ.
"ಕಮೀಷನ್ ದಂಧೆ, ವರ್ಗಾವಣೆ ದಂಧೆ, ನೇಮಕಾತಿ ದಂಧೆಗಳ ಜನಕರು ಹಾಗೂ ಗುತ್ತಿಗೆದಾರರು ನೀವೆಂಬುದು ಇಡೀ ರಾಜ್ಯಕ್ಕೇ ತಿಳಿದಿದೆ. ಕುಮಾರಸ್ವಾಮಿಯವರೇ, “ಕೋತಿ ತಾನು ತಿಂದು ಮೇಕೆ ಬಾಯಿಗೆ ವರೆಸಿದಂತಿದೆ“ ನಿಮ್ಮ ಮಾತುಗಳು, CBI ತನಿಖೆಗೆ ಹೆದರಿ ಹತಾಶ ಹೇಳಿಕೆ ನೀಡುತ್ತಿದ್ದೀರಿ. ವಿಷಯಾಂತರಗೊಳಿಸಿ ಜನತೆಯ ಧಿಕ್ಕು ತಪ್ಪಿಸುವ ಕುತಂತ್ರದ ಮಾತು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಅಲ್ಲದೇ ಮಾದ್ಯಮಗಳೊಂದಿಗೂ ಮಾತನಾಡಿ, ಕುಮಾರಸ್ವಾಮಿ ಅವರು ವಿನಾಕಾರಣ ವರ್ಗಾವಣೆ ದಂಧೆ ಬಗ್ಗೆ ನಮ್ಮ ಮೇಲೆ ಆರೋಪ ಮಾಡಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಇಡೀ ಕುಟುಂಬವೇ ವರ್ಗಾವಣೆ ದಂಧೆಯಲ್ಲಿ ತೊಡಗಿತ್ತು. ಲೋಕೋಪಯೋಗಿ ಇಲಾಖೆಯ 700 ಇಂಜಿನಿಯರ್ಗಳ ವರ್ಗಾವಣೆ ಮಾಡಿದ್ದಾರೆ. ಆಧಾರ ಇಲ್ಲದೇ ಕುಮಾರಸ್ವಾಮಿ ಅವರು ಇಂತಹ ಆರೋಪ ಮಾಡಬಾರದು ಎಂದರು.
ಸಿಬಿಐ ತನಿಖೆಗೆ ಫೋನ್ ಕದ್ದಾಲಿಕೆ ಪ್ರಕರಣ ವಹಿಸಿರುವುದರಿಂದ ಕುಮಾರಸ್ವಾಮಿಯವರಿಗೆ ಆತಂಕವಾಗಿ, ಹಿಟ್ ಅಂಡ್ ರನ್ ಹೇಳಿಕೆ ಕೊಟ್ಟಿದ್ದಾರೆ. ಅವರು ಶ್ರೀರಾಮಚಂದ್ರರು ಹಿಂದೆ ಅವರ ಅವಧಿಯಲ್ಲಿ ಅರ್ಹತೆ ಆಧಾರದಲ್ಲೇ ವರ್ಗಾವಣೆ ಮಾಡಿದ್ರು. ಆಧಾರ ಇದ್ದರೆ ಅವರು ನಮ್ಮ ವಿರುದ್ಧ ದಾಖಲೆ ಬಹಿರಂಗ ಪಡಿಸಲಿ. ನಾನು ಆಡಳಿತ ವಿಚಾರದಲ್ಲಿ ತಲೆ ಹಾಕಿಲ್ಲ, ಪಕ್ಷ ಸಂಘಟನೆ ಮಾಡ್ತಿದೀನಿ ಎಂದು ಕಿಡಿಕಾರಿದರು.