ಬೆಂಗಳೂರು:ಆರ್.ಎಸ್.ಎಸ್ ಕೊಡುಗೆಯನ್ನು ತಿಳಿಯದೇ ಕಾಂಗ್ರೆಸ್ ಪಕ್ಷದ ಮುಖಂಡ ಬಿ.ಕೆ.ಹರಿಪ್ರಸಾದ್ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದು, ಅದು ಅವರ ಹತಾಶ ಮನೋಭಾವವನ್ನು ಮತ್ತು ಕೀಳು ಮಟ್ಟದ ಪ್ರಚಾರಕ್ಕಾಗಿ ಹಂಬಲಿಸುವ ಮನಸ್ಥಿತಿಯನ್ನು ಪ್ರತಿ ಬಿಂಬಿಸುವಂತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘವು 96 ವರ್ಷಗಳಿಂದ ಭಾರತೀಯ ಸಂಸ್ಕೃತಿ ಮತ್ತು ಚಿಂತನೆಗಳ ಪುನರುತ್ಥಾನಕ್ಕಾಗಿ ರಾಷ್ಟ್ರೀಯ ಚಿಂತನೆಯೊಂದಿಗೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ. ಯಾವುದೇ ಫಲಾಪೇಕ್ಷೆ ಮತ್ತು ರಾಜಕೀಯ ಸ್ವಾರ್ಥ ಇಲ್ಲದೇ "ಸ್ವಂತಕ್ಕೆ ಸ್ವಲ್ಪ-ಸಮಾಜಕ್ಕೆ ಸರ್ವ" ಎನ್ನುವ ಧೇಯ ವಾಕ್ಯದೊಂದಿಗೆ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಮತ್ತು ರಾಷ್ಟ್ರ ಭಕ್ತರನ್ನು ನಿರ್ಮಾಣ ಮಾಡುತ್ತಿರುವ ರಾಷ್ಟ್ರೀಯ ಆಂದೋಲನವೇ "ರಾಷ್ಟ್ರೀಯ ಸ್ವಯಂಸೇವಕ ಸಂಘ" ಎಂಬುದನ್ನು ಅವರು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬ್ರಿಟಿಷ್ ಸರ್ಕಾರವನ್ನು ಬೆಂಬಲಿಸುವುದಕ್ಕಾಗಿ ಅಲನ್ ಅಕ್ಟಾವಿಯನ್ ಹ್ಯೂಮ್ ಎನ್ನುವ ವಿದೇಶಿಗನಿಂದ ಪ್ರಾರಂಭವಾದ ಪಕ್ಷ ಕಾಂಗ್ರೆಸ್. ವಿದೇಶಿಗ ನೇತೃತ್ವದಲ್ಲಿ ಬಾಲಬಡುಕರ ಸಂತೆಯಾಗಿ ಪರಿಣಮಿಸಿರುವುದು ಈ ದೇಶದ ದೊಡ್ಡ ದುರಂತ ಎಂದಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಕಾಂಗ್ರೆಸ್ ಪಕ್ಷಕ್ಕೆ ಉಳಿದಿಲ್ಲ. ಬಿ.ಕೆ.ಹರಿಪ್ರಸಾದ್ ಅವರ ಪಕ್ಷದ ಅಧ್ಯಕ್ಷೆ ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಜಾಮೀನು ಪಡೆದುಕೊಂಡಿರುವುದು ಜಗತ್ತಿಗೆ ತಿಳಿದ ವಿಷಯ. ಕಾಂಗ್ರೆಸ್ ರಾಜ್ಯಾಧ್ಯಕ್ಷರು ತಿಹಾರ್ ಜೈಲಿನಲ್ಲಿ ಬಂಧಿತರಾಗಿದ್ದು ಈಗ ಜಾಮೀನಿನಲ್ಲಿ ಹೊರ ಬಂದಿರುವ ಕುರಿತು ಬಿ.ಕೆ.ಹರಿಪ್ರಸಾದ್ ಮಾತನಾಡದೇ ಯಾಕೆ ಸುಮ್ಮನಿದ್ದಾರೆ ಎಂದು ಕ್ಯಾ.ಕಾರ್ಣಿಕ್ ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದ ಮೊದಲು ತಮ್ಮ ಪಕ್ಷದ ದಯನೀಯ ಪರಿಸ್ಥಿತಿ ಕುರಿತು ವಿವೇಚನೆ ಮಾಡುವುದು ಬಿ.ಕೆ.ಹರಿಪ್ರಸಾದ್ ಅವರಿಗೆ ಹೆಚ್ಚು ಶೋಭೆ ನೀಡಬಹುದು. ತಮ್ಮ ಹಿಟ್ ಅಂಡ್ ರನ್ ಪಾಲಿಸಿ ನಿಮಗೆ ಶೋಭೆ ತರಲಾರದು ಎಂದು ಕಿಡಿ ಕಾರಿದ್ದಾರೆ.