ಬೆಂಗಳೂರು:ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು. ಕಳೆದ ವಾರ ಮಂಡಿಸಲಾಗಿದ್ದ ವಿಧೇಯಕವನ್ನು ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಯಿತು.
ಈ ವೇಳೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಇದೊಂದು ಶಿಕ್ಷಕ ಸ್ನೇಹಿ, ಶಿಕ್ಷಣಕ್ಕೆ ಪೂರಕ ಹಾಗೂ ವಿದ್ಯಾರ್ಥಿಗಳ ಹಿತಚಿಂತಕ ವಿಧೇಯಕವಾಗಿದೆ. ವರ್ಗಾವಣೆ ಸರಳೀಕರಣಗೊಳಿಸಲು ಈ ವಿಧೇಯಕ ತರಲಾಗಿದೆ. ಈ ವಿಧೇಯಕ ಸಂಬಂಧ 10-15 ಬಾರಿ ವಿವಿಧ ಸಂಘಟನೆ, ಶಿಕ್ಷಕರು, ಪರಿಷತ್ ಸದಸ್ಯರ ಜತೆ ಸಭೆ ನಡೆಸಿದ್ದೇವೆ. ವಿಧೇಯಕದ ಪ್ರಕಾರ ವರ್ಗಾವಣೆಗೆ ಕನಿಷ್ಠ ಸೇವಾವಧಿ ಮೂರು ವರ್ಷ ಆಗಿರಬೇಕು.