ಬೆಂಗಳೂರು: ರಾಜ್ಯ ಸರ್ಕಾರದ 2021ನೇ ಸಾಲಿನ ಕ್ಯಾಲೆಂಡರ್ ಹಾಗೂ ಡೈರಿಗಳನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಬಿಡುಗಡೆ ಮಾಡಿದ್ದಾರೆ.
ಶಾಲೆ ಆರಂಭಿಸುವುದು ಪ್ರತಿಷ್ಠೆಯಲ್ಲ, ಬದ್ಧತೆ: ಸಚಿವ ಸುರೇಶ್ ಕುಮಾರ್
ಶಾಲೆ ಆರಂಭಿಸುವುದು ನಮ್ಮ ಸರ್ಕಾರದ ಪ್ರತಿಷ್ಠೆ ಪ್ರಶ್ನೆಯಲ್ಲ, ಅದು ಮಕ್ಕಳ ಹಿತದೃಷ್ಟಿಯಿಂದ ಕೈಗೊಳ್ಳಬಹುದಾದ ಸರ್ಕಾರದ ಬದ್ಧತೆಯಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ನಂತರ ಮಾತನಾಡಿದ ಅವರು, ಮೊದಲ ಬಾರಿಗೆ ದಿನದರ್ಶಿಕೆಯನ್ನು ವಿನೂತನ ವಿನ್ಯಾಸದಲ್ಲಿ ಪ್ರಕಟಿಸಲಾಗಿದ್ದು, ಶಾಲಾ ಮಕ್ಕಳು ಮತ್ತು ಪೋಷಕರಲ್ಲಿ ಹೊಸ ಚೈತನ್ಯ ಮೂಡಿಸುವಂತಹ ಚಿತ್ರಗಳನ್ನು ಮುದ್ರಿಸಲಾಗಿದೆ. ಇಂದಿನ ಸಂದರ್ಭದಲ್ಲಿ ಸಕಾರಾತ್ಮಕವಾದ ಭಾವನೆ ಮೂಡಿಸುವ ಶಾಲೆಗಳು ಮತ್ತು ಶಾಲಾ ಮಕ್ಕಳ ಚಿತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಬಾರಿ ಡೈರಿ ಮತ್ತು ಕ್ಯಾಲೆಂಡರ್ಗಳನ್ನು ಹೊಸ ವಿನ್ಯಾಸ ಮಾಡಿದ ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಅಧಿಕಾರಿಗಳನ್ನು ಅವರು ಅಭಿನಂದಿಸಿದರು.
ಶಾಲೆಗಳನ್ನು ಆರಂಭಿಸುವುದು ನಮಗೆ ಪ್ರತಿಷ್ಠೆಯ ಪ್ರಶ್ನೆಯಲ್ಲ, ಅದು ಬದ್ಧತೆ. ಶಾಲೆಗಳಿಗೆ ಬರಲು ಮಕ್ಕಳು ಉತ್ಸುಕರಾಗಿದ್ದು, ನಾಳೆಯಿಂದ ಈ ಶೈಕ್ಷಣಿಕ ವರ್ಷದಲ್ಲಿ ಇದೇ ಮೊದಲ ಬಾರಿಗೆ ಶಾಲಾ ಪರಿಸರದಲ್ಲಿ ಮಕ್ಕಳ ಕಲರವ ಕೇಳಿಬರಲಿದೆ. ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುವುದಕ್ಕೆ ಶಿಕ್ಷಣ ಇಲಾಖೆ ಜೊತೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಕೈಜೋಡಿಸುತ್ತಿವೆ. ಹಾಗೆಯೇ ಮಕ್ಕಳ ಸುಲಲಿತ ಶಿಕ್ಷಣ ಮುಂದುವರಿಕೆಗೆ ನನ್ನೆಲ್ಲಾ ಸಂಪುಟ ಸಹೋದ್ಯೋಗಿಗಳು, ರಾಜ್ಯದ ಎಲ್ಲ ಶಾಸಕರು, ಚುನಾಯಿತ ಜನಪ್ರತಿನಿಧಿಗಳೆಲ್ಲರು ಸಹಾಯ ಹಸ್ತ ಚಾಚಿದ್ದಾರೆ. ಎಲ್ಲರ ಸಹಾಯ-ಸಹಕಾರದಿಂದ ಶಾಲಾರಂಭದ ಪವಿತ್ರ ಕೈಂಕರ್ಯ ಯಶಸ್ವಿಯಾಗಿ ಮಕ್ಕಳ ಶೈಕ್ಷಣಿಕ ಭವಿಷ್ಯ ಉತ್ತಮವಾಗಲಿದೆ ಎಂದರು.