ಬೆಂಗಳೂರು :ಪಕ್ಷ ವಿರೋಧಿ ಹೇಳಿಕೆ, ಪಕ್ಷಕ್ಕೆ ಮುಜುಗರವನ್ನುಂಟು ಮಾಡುವುದನ್ನು ಹೈಕಮಾಂಡ್ ಸಹಿಸುವುದಿಲ್ಲ. ಕ್ರಮದ ವಿಚಾರದಲ್ಲಿ ವಿಳಂಬವಾಗಿರಬಹುದು. ಆದರೆ, ಇನ್ನು ಕೆಲವೇ ದಿನಗಳಲ್ಲಿ ಕ್ರಮ ಖಚಿತವಾಗಿ ಜರುಗಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಪ್ರವಾಸದ ವೇಳೆ ಅರುಣ್ ಸಿಂಗ್ ಅವರು ಯಾರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ, ಯಾರು ಅಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬದೆಲ್ಲವನ್ನೂ ಕೂಡ ತಿಳಿದುಕೊಂಡು ಹೋಗಿದ್ದಾರೆ. ಕೊರೊನಾ ಎರಡನೇ ಅಲೆಯ ನಿಯಂತ್ರಣದಲ್ಲಿ ನಮ್ಮ ನಾಯಕರಿದ್ದರು, ನಂತರ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ತೊಡಗಿಕೊಂಡಿದ್ದರು. ಹಾಗಾಗಿ, ಈ ಕಡೆ ಗಮನ ಹರಿಸಲು ಸಾಧ್ಯವಾಗಿರಲಿಲ್ಲ ಎಂದರು.
ಯಾರು ಪಕ್ಷವಿರೋಧಿ ಚಟುವಟಿಕೆ ಮತ್ತು ಪಕ್ಷಕ್ಕೆ ಮುಜುಗರವಾಗುವ ಕೆಲಸ ಮಾಡಿದ್ದಾರೆ ಕೆಲವೇ ದಿನಗಳಲ್ಲಿ ಅದಕ್ಕೆ ಸರಿಯಾದ ಕ್ರಮವನ್ನು ನಮ್ಮ ಹೈಕಮಾಂಡ್ ತೆಗೆದುಕೊಳ್ಳಲಿದೆ. ಇದರಲ್ಲಿ ಯಾವುದೇ ಸಂಶಯ ಬೇಡ. ನಾಲ್ಕು ದಿನ ತಡವಾಗಿದ್ದಕ್ಕೆ ಪಕ್ಷದ ವಿರುದ್ಧ ಏನು ಬೇಕಾದರೂ ಮಾತನಾಡಬಹುದು, ಏನು ಬೇಕಾದರೂ ಮಾತನಾಡಿದರೂ ನಡೆಯುತ್ತದೆ ಎಂದು ತಿಳಿದುಕೊಂಡರೆ ಅದು ತಪ್ಪಾಗಲಿದೆ. ಹೈಕಮಾಂಡ್ ಅತ್ಯಂತ ಬಲಿಷ್ಠವಾಗಿದೆ. ಪಕ್ಷ ವಿರುದ್ಧ ಚಟುವಟಿಕೆ ನಡೆಸಿರುವವರ ವಿರುದ್ಧ ಆದಷ್ಟು ಬೇಗ ಕ್ರಮವನ್ನು ತೆಗೆದುಕೊಳ್ಳಲಿದೆ ಎನ್ನುವ ಸಂಪೂರ್ಣ ವಿಶ್ವಾಸವಿದೆ ಎಂದರು.